ಸಾರಾಂಶ
ಬೆಂಗಳೂರು : ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಸಹಯೋಗದಲ್ಲಿ ಬಿಳೇಕಹಳ್ಳಿಯ ವಿಜಯಾ ಬ್ಯಾಂಕ್ ಲೇಔಟ್ ಆಟದ ಮೈದಾನದಲ್ಲಿ ಆಯೋಜಿಸಿದ್ದ ಮೂರು ದಿನಗಳ ಬೆಂಗಳೂರಿನ ಅತಿ ದೊಡ್ಡ ‘ಪುಡ್, ಫನ್ ಆ್ಯಂಡ್ ಫ್ಯಾಷನ್ ಫೆಸ್ಟಿವಲ್’ ‘ಬೊಮ್ಮನಹಳ್ಳಿ ಸಂಭ್ರಮ’ಕ್ಕೆ ಭಾನುವಾರ ವಿದ್ಯುಕ್ತ ತೆರೆ ಬಿತ್ತು.
ರಜೆಯ ಹಿನ್ನೆಲೆಯಲ್ಲಿ ಭಾನುವಾರ ಜನತೆ ಕುಟುಂಬ ಸಮೇತರಾಗಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ‘ಬೊಮ್ಮನಹಳ್ಳಿ ಸಂಭ್ರಮ’ಕ್ಕೆ ಸಾಕ್ಷಿಯಾದರು. ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆದ ವಿವಿಧ ಸ್ಪರ್ಧೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. 3 ದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಬಹುಮಾನ ವಿತರಿಸಿದರು.
ಬೆಂಕಿರಹಿತ ಅಡುಗೆ ಸ್ಪರ್ಧೆಯಲ್ಲಿ ಚೈತ್ರ ಯು. ವಿಜೇತರಾದರು. ಡ್ರಾಯಿಂಗ್ನಲ್ಲಿ ಜೂನೈದ್, ಲಕ್ಷ್ಮಿ ಹಾಗೂ ಸಿದ್ದಾರ್ಥ್ ಬಹುಮಾನಕ್ಕೆ ಭಾಜನರಾದರೆ, ಬೊಮ್ಮನಹಳ್ಳಿ ಅಡುಗೆ ಮಹಾರಾಣಿಯಾಗಿ ಶುಭಾಸಿನಿ ಹೊರ ಹೊಮ್ಮಿದರು.
ಸೆ.20 ರಂದು ಸಂಜೆ ಶಾಸಕ ಸತೀಶ್ ರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಾಯಕಿ ಶರಣ್ಯ ಶೆಟ್ಟಿ ಭಾಗವಹಿಸಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಹಾಜರಿದ್ದವರನ್ನು ರಂಜಿಸಿದ್ದರು. ಕಲರ್ಸ್ ಕನ್ನಡ ಚಾನಲ್ನ ಗಿಚ್ಚಿ ಗಿಲಿಗಿಲಿಯ ಖ್ಯಾತ ಹಾಸ್ಯ ಕಲಾವಿದ ಗಿಲ್ಲಿ ನಟ ನಟರಾಜ್ ಹಾಗೂ ಕಲಾವಿದ ಸದಾಗರ ತುರುವೇಕೆರೆ ಅವರ ಹಾಸ್ಯ ಸಂಜೆ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತ್ತು.
ಮೂರು ದಿನವೂ ಸಾಧಕರಿಗೆ ಸನ್ಮಾನ
ಮೂರು ದಿನವೂ ಮಕ್ಕಳಿಗಾಗಿ ಮುದ್ದು ಮಗು ಮತ್ತು ವೇಷಭೂಷಣ ಸ್ಪರ್ಧೆ, ಅಡುಗೆ ಮಹಾರಾಣಿ, ಬೊಂಬಾಟ್ ಜೋಡಿ, ಫ್ಯಾಷನ್ ಶೋ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಜೆ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿಯ ಸ್ಥಳೀಯ ಸಾಧಕರನ್ನು ಶಾಸಕ ಸತೀಶ್ ರೆಡ್ಡಿ ಗೌರವಿಸಿದರು. ಗ್ರಾಹಕರಿಂದ ಖರೀದಿ ಭರಾಟೆ
ಮೂರು ದಿನವೂ ‘ಬೊಮ್ಮನಹಳ್ಳಿ ಸಂಭ್ರಮ’ದಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಅದರಲ್ಲೂ ಕೊನೆಯ ದಿನವಾದ ಭಾನುವಾರ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಖರೀದಿ ನಡೆಸಿದರು. ಫ್ಯಾಷನ್, ಫುಡ್. ಲೈಫ್ ಸ್ಟೈಲ್ ಹಾಗೂ ಕರ್ನಾಟಕದ ವಿವಿಧ ಭಾಗದ ತಿಂಡಿ ತಿನಿಸುಗಳ 70 ಕ್ಕೂ ಅಧಿಕ ಮಳಿಗೆಗಳಿದ್ದವು. ಜನರು ತಮಗಿಷ್ಟವಾದ ಅಲಂಕಾರಿಕ ವಸ್ತು, ಉಡುಪು, ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ಸಂಭ್ರಮಿಸಿದರು. ಖಾದ್ಯಪ್ರಿಯರು ಆಹಾರದ ಮಳಿಗೆಗಳಿಗೆ ಭೇಟಿ ನೀಡಿ ವೈವಿಧ್ಯಮವಾದ ಖಾದ್ಯಗಳ ರುಚಿ ಸವಿದರು.