200 ಕೋಟಿ ವೆಚ್ಚದಲ್ಲಿ ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣ ಯೋಜನೆ ಕಾಮಗಾರಿಗೆ ಫೆ. 8ರಂದು ಶಿರಗುಪ್ಪಿ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ಎನ್.ಎಚ್.‌ ಕೋನರಡ್ಡಿ ಹೇಳಿದರು.

ಹುಬ್ಬಳ್ಳಿ: ₹200 ಕೋಟಿ ವೆಚ್ಚದಲ್ಲಿ ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣ ಯೋಜನೆ ಕಾಮಗಾರಿಗೆ ಫೆ. 8ರಂದು ಶಿರಗುಪ್ಪಿ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ಎನ್.ಎಚ್.‌ ಕೋನರಡ್ಡಿ ಹೇಳಿದರು.

ಇಲ್ಲಿನ ತಾಲೂಕು ಆಡಳಿತ ಸೌಧದ ಹುಬ್ಬಳ್ಳಿ ತಾಪಂ ಸಭಾಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಯಾವ ಭಾಗದಲ್ಲಿ ಮಳೆಯಾದರೂ ಪ್ರತಿ ವರ್ಷ ಬೆಣ್ಣಿಹಳ್ಳ ಪ್ರವಾಹ ಹೆಚ್ಚಾಗಿ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ಹಾಗೂ ಗ್ರಾಮಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಉತ್ತರ ಕರ್ನಾಟಕದ ಬಹುದಿನದ ಬೇಡಿಕೆ ಬೆಣ್ಣಿಹಳ್ಳ ಅಗಲೀಕರಣ ಮಾಡಿ ಅಲ್ಲಲ್ಲಿ ತಡೆಗೋಡೆ, ಸೇತುವೆ ನಿರ್ಮಿಸಲು ₹1,610 ಕೋಟಿ ಡಿಪಿಆರ್‌ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಎಫ್‌ಎಂಬಿಎಪಿ ಯೋಜನೆ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಕುಂದಗೋಳದಿಂದ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ, ನವಲಗುಂದ ತಾಲೂಕಿನ ಯಮನೂರ, ಕೊಂಗವಾಡದಿಂದ ರೋಣ ತಾಲೂಕಿನ ಮೆಣಸಗಿ ಹತ್ತಿರ ಮಲಪ್ರಭಾ ನದಿಗೆ ಸೇರುವ ಈ ಯೋಜನೆಗೆ 2013 ರಿಂದ 2018ರ ವರೆಗೆ ಶಾಸಕನಿದ್ದ ಅವಧಿಯಲ್ಲಿ ₹95 ಲಕ್ಷ ಅನುದಾನ ಬಿಡುಗಡೆ ಮಾಡಿ ಜಲಸಂಪನ್ಮೂಲ ಇಲಾಖೆಗೆ ವಹಿಸಲಾಗಿತ್ತು. ನಂತರ ಯಾವುದೇ ಪ್ರಗತಿಯಾಗದೆ, ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ‌. 2023ರಲ್ಲಿ ಶಾಸಕನಾಗಿ ಆಯ್ಕೆಯಾದ ಬಳಿಕ ಸಿಎಂ, ಡಿಸಿಎಂ ಒತ್ತಾಯ ಮಾಡಿ ₹200 ಕೋಟಿ ಅನುದಾನ ಬಿಡುಗಡೆ ಮಾಡಿ ಟೆಂಡರ್‌ ಅಂತಿಮಗೊಳಿಸಲಾಗಿದೆ. ಫೆ. 8ರಂದು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಬೆಣ್ಣಿಹಳ್ಳದ ಹತ್ತಿರ ಭೂಮಿಪೂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಈ ವೇಳೆ ಜಿಪಂ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ್ ಆರ್ಯ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಡಿಎಸ್‌ಪಿ ವಿನಾಯಕ ಮುಕ್ತೇದಾರ, ನೀರಾವರಿ ಇಲಾಖೆಯ ಎಸ್ಇ ಮಹಾವೀರ ಗಣಿ, ಇಇ ರಾಘವೇಂದ್ರ ಜಾಲಗಾರ, ಲೋಕೋಪಯೋಗಿ ಇಲಾಖೆಯ ಇಇ ವಿಜಯಕುಮಾರ, ಡಿಎಚ್‌ಒ ಡಾ. ಎಸ್‌.ಎಂ. ಹೊನಕೇರಿ, ತಹಸೀಲ್ದಾರ್‌ ಜೆ.ಬಿ, ಮಜ್ಜಗಿ, ಸುಧೀರ ಸಾವಕಾರ, ಮಂಜುನಾಥ ದಾಸಪ್ಪನವರ, ರಾಜು ಮಾವರಕರ ಸೇರಿ ಹಲವರಿದ್ದರು.