ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕನ್ನಡ ಪುಸ್ತಕ ಪ್ರಾಧಿಕಾರವು ಕೊಡಮಾಡುವ 2022, 2023 ಮತ್ತು 2024ನೇ ಸಾಲಿನ ಅತ್ಯುತ್ತಮ ಪ್ರಕಾಶನ, ಡಾ.ಎಂ.ಎಂ. ಕಲಬುರಗಿ ಮಾನವಿಕ ಅಧ್ಯಯನ ಪ್ರಶಸ್ತಿ, ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಹಾಗೂ ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಮೈಸೂರಿನ ನಾಲ್ವರು ಆಯ್ಕೆಯಾಗಿದ್ದಾರೆ.2022ನೇ ಸಾಲಿನ ಡಾ.ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್ ಅವರನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿಯು 75 ಸಾವಿರ ನಗದು ಹೊಂದಿದೆ. ಡಾ. ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಸಿಎಫ್ಟಿಆರ್ಐ ನಿವೃತ್ತ ವಿಜ್ಞಾನಿ ಶ್ರೀಮತಿ ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿದ್ದು, 25 ಸಾವಿರ ನಗದು ಬಹುಮಾನ ಹೊಂದಿದೆ.2023ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಮೈಸೂರಿನ ಅಭಿರುಚಿ ಪ್ರಕಾಶನದ ಗಣೇಶ್ ಪಡೆದುಕೊಂಡಿದ್ದಾರೆ. ಪ್ರಶಸ್ತಿಯು 1 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ.2024ನೇ ಸಾಲಿನ ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಹೊಯ್ಸಳ ಕನ್ನಡ ಸಂಘದ ಕಾರ್ಯದರ್ಶಿ ಹಾಗೂ ಸವಿಗನ್ನಡ ಪತ್ರಿಕೆ ಸಂಪಾದಕ ರಂಗನಾಥ್ ಮೈಸೂರು ಆಯ್ಕೆಯಾಗಿದ್ದು, 50 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಮಾನಸ ತಿಳಿಸಿದ್ದಾರೆ.