ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸೋಮವಾರಪೇಟೆ, ಬೆಸೂರು-ನ್ಯಾಯದಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಸೂರು ಗ್ರಾ.ಪಂ.ಹಾಗೂ ಅರಣ್ಯ ಇಲಾಖೆ ಶನಿವಾರಸಂತೆ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಬೆಸೂರು-ನ್ಯಾಯದಹಳ್ಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದ ಬೆಸೂರು ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸ್ಮಿತಾ, ಪ್ರತಿಯೊಬ್ಬರೂ ಪರಿಸರದ ಬಗ್ಗೆ ಜಾಗೃತಿ ಹೊಂದಿರಬೇಕು ಮರಗಿಡಗಳ ಸಮೃದ್ದಿಯಿಂದ ಉತ್ತಮ ಆರೋಗ್ಯವೂ ವೃದ್ದಿಯಾಗುತ್ತದೆ ತಮ್ಮ ಮನೆಯ ಸುತ್ತಮುತ್ತಲಿನ ಜಾಗದಲ್ಲಿ ಮತ್ತು ಹಿತ್ತಿಲಿನ ಜಾಗದಲ್ಲಿ ಮರಗಿಡ ಬೆಳೆಸುವುದರ ಜೊತೆಯಲ್ಲಿ ಔಷದಿಯ ಗಿಡಗಳನ್ನು ಬೆಳೆಸಬೇಕು ಎಂದರು.ಮನೆಗಳಲ್ಲಿ ಔಷಧೀಯ ಸಸ್ಯಗಳಾದ ತುಳಸಿ, ದೊಡ್ಡಪತ್ರೆ, ಇನ್ನೀತ್ತರ ಔಷಧಿಯ ಸಸ್ಯಗಳನ್ನು ಬಳಸಿ ಇದರ ಜೊತೆಯಲ್ಲಿ ಕಾಳು ಮೆಣಸು, ಶುಂಠಿ ಇವನ್ನು ಮಿಶ್ರಣ ಮಾಡಿ ಉಂಡೆ ಮಾಡಿಕೊಂಡು ಇಟ್ಟುಕೊಳ್ಳುವುದು, ಅಗತ್ಯ ಇದ್ದಾಗ ಇದರ ಪುಡಿಯನ್ನು ಜೇನಿನೊಂದಿಗೆ ಬೆರಸಿ ಸೇವಿಸುವುದರಿಂದ ಶೀತ, ನೆಗಡಿ, ಕೆಮ್ಮು ಕಡಿಮೆಯಾಗಲು ಸಾಧ್ಯವಾಗುತ್ತದೆ ಎಂದು ಔಷಧಿಯನ್ನು ತಯಾರಿಸುವ ವಿಧಾನದ ಮೂಲಕ ಮಾಹಿತಿ ನೀಡಿದರು.
ಬೆಸೂರು ಗ್ರಾ.ಪಂ.ಅಧ್ಯಕ್ಷೆ ಕಮಲಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರದ ಬಗ್ಗೆ ಕಾಳಜಿಯ ಜೊತೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಹಿತ್ತಲಿನಲ್ಲಿ ಗಿಡ ನಾಟಿ ಮಾಡುವುದರಿಂದ ಅರಣ್ಯ ಮತ್ತು ಪರಿಸರ ಅಭಿವೃದ್ದಿಯಾಗುತ್ತದೆ ಎಂದರು.ಶಾಲಾ ಮುಖ್ಯ ಶಿಕ್ಷಕಿ ಲಲಿತಾ ಹಣ್ಣು ಹಂಪಲಿನ ಉಪಯೋಗ ಮತ್ತು ಗಿಡಗಳ ವಿಶಿಷ್ಠತೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅರಣ್ಯ ರಕ್ಷಕ ಆನಂದ್, ಸಿಬ್ಬಂದಿ ರಮೇಶ್ ಶಾಲಾ ಶಿಕ್ಷಕ ಮಂಜುಳಾಮಣಿ, ರುಕ್ಮುಣಿ, ಮಂಜುನಾಥ್ ಒಕ್ಕೂಟದ ಅಧ್ಯಕ್ಷೆ ಸುನಂದ, ವಲಯ ಮೇಲ್ವಿಚಾರಕ ರಾಜಣ್ಣ,, ಕೃಷಿ ಮೇಲ್ವಿಚಾರಕ ಹರೀಶ್ ಕುಮಾರ್ ಸೇವಾಪ್ರತಿನಿಧಿಗಳಾದ ಶಾರದಮ್ಮ, ಶಾಂತಿ, ಆಶಾ ಕಾರ್ಯಕರ್ತೆ ಧನಲಕ್ಷ್ಮಿ ಮತ್ತು ಸ್ವಸಹಾಯ ಸಂಘದ ಸದಸ್ಯರು, ವಿದ್ಯಾರ್ಥಿಗಳು ಗ್ರಾಮಸ್ಥರು ಹಾಜರಿದ್ದರು. ದಿನದ ಅಂಗವಾಗಿ ಶಾಲೆಗೆ ಸೇರಿದ ಜಾಗದಲ್ಲಿ ಗಿಡಗಳನ್ನು ನಾಟಿ ಮಾಡಲಾಯಿತು.