ಸಾರಾಂಶ
ಎಂಎಸ್ಎ ಕುಮಾರ್ ಕುಟುಂಬದ ಉದ್ದಿಮೆಯ ಬಗ್ಗೆ ರಚಿತವಾಗಿರುವ ಬಿಯಾಂಡ್ ತ್ರಿ ಜನರೇಷನ್ಸ್ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸರಿಯಾದ ಸಮಯದಲ್ಲಿ ಸಮರ್ಪಕ ನಿರ್ಧಾರ ಕೈಗೊಳ್ಳುವುದು, ಉದ್ಯಮದ ಮೂಲ ತತ್ವಕ್ಕೆ ಬದ್ಧತೆಯಿಂದ ನಡೆದುಕೊಂಡು ಹೆಜ್ಜೆಯಿಟ್ಟಲ್ಲಿ ಬ್ರ್ಯಾಂಡ್ ಕಟ್ಟುವಿಕೆಗೆ ಯಶಸ್ಸು ಸಿಗುತ್ತದೆ ಎಂದು ಭರೂಕಾ ಸಂಸ್ಥೆ ಅಧ್ಯಕ್ಷ ಎಸ್.ಎನ್. ಅಗರವಾಲ್ ಹೇಳಿದರು.ಬುಧವಾರ ನಗರದಲ್ಲಿ ಫಿಕ್ಕಿ ಕರ್ನಾಟಕ ರಾಜ್ಯ ಮಂಡಳಿ ಮತ್ತು ಯುಕೆ ಆ್ಯಂಡ್ ಕೋ ಆಯೋಜಿಸಿದ್ದ ಲೇಖಕ ನವಾಸ್ ಮೀರನ್, ಎಂ.ಎಸ್.ಎ.ಕುಮಾರ್ ಅವರ ಕುಟುಂಬ ಉದ್ಯಮದ ಕುರಿತಾದ ‘ಬಿಯಾಂಡ್ ಥ್ರೀ ಜನರೇಷನ್ಸ್’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕುಟುಂಬದ ಉದ್ಯಮ, ಬ್ರ್ಯಾಂಡ್ನ ಮೌಲ್ಯವನ್ನು ಕಾಪಾಡಿಕೊಂಡು ಹೋಗಲು ಗಂಭೀರ ಆಲೋಚನೆ, ಆಳವಾದ ಅಧ್ಯಯನ ಬೇಕಾಗುತ್ತದೆ. ಅದರಂತೆ ಸಮಾನ ಮನಸ್ಕರ ಜೊತೆಗೆ ಚರ್ಚೆ ಕೈಗೊಂಡು ಸಮರ್ಪಕ ನಿರ್ಧಾರ ಕೈಗೊಳ್ಳಬೇಕು. ಹಿಂದಿಗಿಂತಲೂ ಪ್ರಸ್ತುತ ಉದ್ಯಮ ಮುನ್ನಡೆಸುವವರು ಪ್ರತಿ ವಿಚಾರದಲ್ಲೂ ಹೆಚ್ಚಿನ ತಜ್ಞತೆ ಗಳಿಸಿಕೊಳ್ಳುವುದು ಅಗತ್ಯ, ಪಾಲುದಾರಿಕೆ, ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಸೇರಿ ಎಲ್ಲ ಹಂತದಲ್ಲಿ ಮಾಸ್ಟರ್ ಆಗಿರುವುದು ಅಗತ್ಯ ಎಂದರು.ಲೇಖಕ ನವಾಸ್ ಮೀರನ್ ಮಾತನಾಡಿ, ವೃತ್ತಿಪರತೆ ಮೈಗೂಡಿಸಿಕೊಳ್ಳುವುದು, ಆಡಳಿತ ರಚನೆ ರೂಪಿಸುವಾಗ, ಉತ್ತರಾಧಿಕಾರದ ನಿರ್ಧಾರ ಕೈಗೊಳ್ಳುವುದು ಕುಟುಂಬ ವ್ಯವಹಾರ ಎದುರಿಸುವ ಮುಖ್ಯ ಸವಾಲುಗಳು. ಹೊಸ ತಲೆಮಾರು ವ್ಯವಹಾರವನ್ನು ಪ್ರವೇಶಿಸುವಾಗ ಅನನ್ಯ ಸವಾಲು ಎದುರಿಸುತ್ತವೆ. ಈ ಪುಸ್ತಕ ಕೌಟುಂಬಿಕ ಉದ್ಯಮದ ಮಾಲೀಕರು, ನಾಯಕರು ಮತ್ತು ಇತರ ಸಂಬಂಧಿತ ಪಾಲುದಾರರ ನಡುವಿನ ವಿಶೇಷಣವನ್ನು ತಿಳಿಸುತ್ತದೆ ಎಂದರು.
ನೇಚರ್ ಫುಡ್ ಮತ್ತು ಫ್ರೂಟ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ನ ವಿಕ್ರಂ ರೆಡ್ಡಿ, ಜ್ಯೋತಿ ಲ್ಯಾಬ್ಸ್ನ ಚೇರ್ಮನ್ ಆರ್.ಲಕ್ಷ್ಮೀನಾರಾಯಣ್, ಫಿಕ್ಕಿ ಕರ್ನಾಟಕ ರಾಜ್ಯ ಮಂಡಳಿ ಅಧ್ಯಕ್ಷ ಕೆ.ಉಲ್ಲಾಸ್ ಕಾಮತ್ ಮಾತನಾಡಿದರು.ಫೋಟೋ:ಭರೂಕಾ ಸಂಸ್ಥೆ ಅಧ್ಯಕ್ಷ ಎಸ್.ಎನ್. ಅಗರವಾಲ್ ಅವರು ‘ಬಿಯಾಂಡ್ ಥ್ರೀ ಜನರೇಷನ್ಸ್’ ಕೃತಿ ಲೋಕಾರ್ಪಣೆ ಮಾಡಿದರು.