ಸಾರಾಂಶ
ಭಗೀರಥ ಜಯಂತಿ । ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ
ಕನ್ನಡಪ್ರಭ ವಾರ್ತೆ ಬೀರೂರುಭಾರತೀಯರ ಪಾಲಿಗೆ ಅತಿ ಪವಿತ್ರವೆನಿಸಿದ ದೈವ ಸ್ವರೂಪಿ ಗಂಗೆಯನ್ನು ಕಠಿಣ ಜಪ ತಪದಿಂದ ಭೂಮಿಗೆ ಅವತರಿಸುವಂತೆ ಮಾಡಿದ ಪುಣ್ಯ ಪುರುಷ ಭಗೀರಥ ಮಹರ್ಷಿ. ಅವರ ಆದರ್ಶಗಳು ನಮಗೆ ದಾರಿದೀಪ ಆಗಬೇಕು ಎಂದು ಪುರಸಭಾ ಅಧ್ಯಕ್ಷೆ ವನಿತಮಧು ಬಾವಿಮನೆ ತಿಳಿಸಿದರು.
ಇಲ್ಲಿಯ ಪುರಸಭೆ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಮಹರ್ಷಿ ಭಗೀರಥ ಜಯಂತಿಯಲ್ಲಿ ಪಾಲ್ಗೊಂಡು ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಅಂದಿನ ಕಾಲದಲ್ಲಿ ಕುಡಿಯಲು ನೀರಿಲ್ಲದೆ ಜನರು ಪರಿತಪಿಸುತ್ತಿದ್ದಾಗ ಭಗೀರಥರು ತಪಸ್ಸಿನ ಮೂಲಕ ಭುವಿಗೆ ಗಂಗೆಯನ್ನು ಕರೆತಂದು ಮಾನವ ಕುಲಕ್ಕೆ ಗಂಗೆಯನ್ನು ಕೊಡುಗೆಯಾಗಿ ನೀಡಿದರು. ಭಗೀರಥರ ಮಾತೃ, ಪಿತೃಗಳ ವಾತ್ಸಲ್ಯ ನಮಗೆ ಆದರ್ಶಪ್ರಾಯವಾಗಬೇಕು. ಜಲಜಾಗೃತಿ, ಆದರ್ಶ ಪುರುಷರ ಜನಜಾಗೃತಿ ಎರಡೂ ಆಗಬೇಕು. ಕಲ್ಯಾಣಿ. ಕೆರೆ, ನದಿಗಳು ಅಕ್ರಮ-ಸಕ್ರಮ ನೆಪದಲ್ಲಿ ಉಳ್ಳವರ ಪಾಲಾಗುತ್ತಿವೆ. ಇವನ್ನು ಉಳಿಸಿ ಬೆಳೆಸಿ ಕಡೆಗೆ ಜಾಗೃತಿಯಾಗಬೇಕು. ಭಗೀರಥರು ಧರೆಗೆ ತಂದ ನೀರನ್ನು ಇಂದು ವಿನಾಕಾರಣಗಳಿಂದ ಪೋಲು ಮಾಡುತ್ತಿದ್ದೇವೆ ನೀರನ್ನು ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಸದಸ್ಯ ಬಿ.ಆರ್.ಮೋಹನ್ ಕುಮಾರ್ ಮಾತನಾಡಿ ಬಸವಣ್ಣ, ಅಂಬೇಡ್ಕರ್, ಭಗೀರಥರ ಜಯಂತಿಗಳನ್ನು ಕೇವಲ ಒಂದು ಸಮುದಾಯಕ್ಕೆ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಜಯಂತಿಗಳನ್ನು ಎಲ್ಲಾ ಸಮುದಾಯದ ಕಾರ್ಯಕ್ರಮಗಳಾಗಿ ಆಚರಿಸಬೇಕು. ಜಯಂತಿ ನೆಪದಲ್ಲಿ ಆದರ್ಶ ಪುರುಷರ ಭಾವಚಿತ್ರಕ್ಕೆ ಅಲಂಕಾರ ಮಾಡುತ್ತೇವೆ. ಆದರೆ ಅವರ ಆದರ್ಶಗಳನ್ನು ಮರೆಯುತ್ತಿದ್ದೇವೆ. ಮೊದಲು ಅವರ ಆದರ್ಶಗಳ ಪಾಲನೆ ನಮ್ಮ ಗುರಿಯಾಗಬೇಕು. ಆದರ್ಶಪುರುಷರ ಚಿಂತನೆ ಪ್ರತಿಯೊಬ್ಬರ ಮನೆ, ಮನ ಮುಟ್ಟುವಂತಾದಾಗ ಜಯಂತಿಗಳ ಆಚರಣೆಗೆ ಬೆಲೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.ಪುರಸಭ ಸದಸ್ಯೆ ಜ್ಯೋತಿಸಂತೋಷ್ ಕುಮಾರ್ ಮಾತನಾಡಿ, ಭಗೀರಥನ ಜಯಂತಿ ಜಾಗೃತಿಯ ಜತೆಗೆ ಪ್ರೇರಣೆಯ ಶಕ್ತಿಯಾಗಿ ಬೆಳೆಯಬೇಕು. ನಾವು ಏನಾಗಬೇಕೆಂದು ಬಯಸುತ್ತೇವೆಯೋ ಬೇರೆಯವರು ಕೂಡ ಅಭಿವೃದ್ಧಿಯಾಗಬೇಕೆಂದು ಬಯಸಬೇಕು. ಆದರ್ಶ ಪುರುಷರ ಧೋರಣೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾನು ಎಂಬ ಭಾವನೆ ತೊರೆದು ನಾವು, ನಾವೆಲ್ಲಾರೂ ಒಂದು ಎಂಬ ಮನಸ್ಥಿತಿ ಬರಬೇಕು. ನಾನು ಎಂಬ ಅಹಂಕಾರ ನಮ್ಮ ಜೀವನದ ವಿನಾಶದ ಸಂಕೇತ. ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಜಯಂತಿಗಳ ಆಚರಣೆಯಿಂದ ಆಗಬೇಕು ಎಂದು ತಿಳಿಸಿದರು.
ಉಪ್ಪಾರ ಸಮಾಜದ ಷನ್ಮುಖಪ್ಪ, ಪುರಸಭಾ ಸದಸ್ಯರಾದ ಜಿಮ್ ರಾಜು, ಲೋಕೇಶಪ್ಪ, ಮುಬಾರಕ್, ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿದರು.ಸದಸ್ಯರಾದ ಮಾನಿಕ್ ಭಾಷ, ನಾಮಿನಿ ಸದಸ್ಯರಾದ ಮೋಹನ್, ಮಲ್ಲಿಕಾರ್ಜುನ್, ಕಾಂತರಾಜ್, ಸಂತೋಷ್ ಕುಮಾರ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷö್ಮಣ್, ಸೊಪ್ಪು ವಿನಾಯಕ್ ಇಂಜಿನಿಯರ್ ವೀಣಾ,ಆರ್.ಐ ಶಿಲ್ಪ, ಜಯಮ್ಮ ಮತ್ತಿತರು ಇದ್ದರು.