ಧಾರವಾಡ:ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾಮನವಮಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ರಾಮಮಂದಿರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ತೊಟ್ಟಿಲೋತ್ಸವ ಕಾರ್ಯಕ್ರಮ ನಡೆದವು. ಬಹುತೇಕ ದೇವಸ್ಥಾನಗಳಲ್ಲಿ ಶ್ರೀರಾಮ, ಸೀತಾದೇವಿ ಹಾಗೂ ಲಕ್ಷ್ಮಣ, ಆಂಜನೇಯ ಮೂರ್ತಿಗಳು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿದ್ದವು. ಮಂಗಳಾರತಿ ಜತೆಗೆ ಪಂಚಾಮೃತ ಅಭಿಷೇಕದಂತಹ ಧಾರ್ಮಿಕ ಕಾರ್ಯಕ್ರಮ ಜರುಗಿದವು.ಮಾಳಮಡ್ಡಿ ಹಾಗೂ ವಿವಿಧ ಪ್ರಮುಖ ವೃತ್ತಗಳಲ್ಲಿ ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ಸಾರ್ವಜನಿಕರಿಗೆ ಪಾನಕ, ಕೋಸಂಬರಿ ವಿತರಿಸಿದರು. ಕೆಲಗೇರಿ ಕೇಸರಿ ಸಂಘಟನೆಯಿಂದ ಶ್ರೀರಾಮನ ಶೋಭಾಯಾತ್ರೆ ನಡೆಯಿತು. ಮಾಳಮಡ್ಡಿಯ ವನವಾಸಿ ರಾಮಮಂದಿರ, ಸೀತಾರಾಮ ದೇವಸ್ಥಾನ, ನುಗ್ಗಿಕೇರಿಯ ಆಂಜನೇಯ ದೇವಸ್ಥಾನ, ಟಿಕಾರೆ ರಸ್ತೆಯ ಶ್ರೀರಾಮ ದೇವಸ್ಥಾನ, ಲೈನ್ ಬಜಾರ್ ಹನುಮ ದೇವಾಲಯಗಳನ್ನು ತಳಿರು-ತೋರಣ ಹಾಗೂ ದೀಪಗಳಿಂದ ಸಿಂಗರಿಸಲಾಗಿತ್ತು.ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದಲ್ಲಿ ಬಸವರಾಜ ಅಂಗಡಿ ಎಂಬುವವರು ಮನೆ ಮುಂದೆ ತೊಟ್ಟಿಲೋತ್ಸವ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದರು. ಅಲ್ಲದೇ ನೂರಾರು ಮಂದಿಗೆ ಅನ್ನಸಂತರ್ಪಣೆ ಮಾಡಿದರು. ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ:ಸತ್ತೂರಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ರಾಮನವಮಿ ಹಬ್ಬವನ್ನು ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಶ್ರೀರಾಮನ ಫೋಟೋಗೆ ಪೂಜೆ, ಮಂಗಳಾರತಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ರಾಮನ ಹಾಡಿಗೆ ನೃತ್ಯ ಪ್ರದರ್ಶಿಸಿದರು. ಭಕ್ತಿಪೂರ್ಣ ರಾಮ ಭಜನೆ ಹಾಡಿ ದೈವಿಕ ವಾತಾವರಣ ನಿರ್ಮಿಸಿದರು. ಶಾಲೆಯ ಗುರುರಾಜ ಅಗಡಿ, ಪ್ರಧಾನಾಚಾರ್ಯ ರಾಮಕೃಷ್ಣ, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.