ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ದಾನಗಳಲ್ಲಿ ಅತ್ಯಂತ ಪ್ರಮುಖವಾದ ದಾನ ರಕ್ತದಾನ. ಇಂದು ಜಿಲ್ಲೆಯಲ್ಲಿ ರಕ್ತದಾನಿಗಳ ಕೊರತೆಯಿಂದ ಸಾಕಷ್ಟು ಜನ ತೊಂದರೆಗೆ ಒಳಗಾಗುತ್ತಿದ್ದಾರೆ ಹಾಗೂ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವುದರ ಮುಖಾಂತರ ಸದೃಢವಾದ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಗವರ್ನರ್ ಎಚ್. ಜಿ. ಭರತ್ ಕುಮಾರ್ ತಿಳಿಸಿದರು.ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಹಾಗೂ ೭೪ನೇ ವರ್ಷದ ಗಣೇಶ ಪ್ರತಿಷ್ಠಾಪನಾ ಅಂಗವಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ರಕ್ತ ನಿಧಿ ಕೇಂದ್ರದವರು ಪಡೆದು ರಕ್ತವನ್ನು ನೀಡುತ್ತಾರೆ ಎಂಬ ಅಪಪ್ರಚಾರದ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ರಕ್ತದಾನ ಮಾಡಿದ ದಾನಿಗಳ ರಕ್ತವನ್ನು ಐದು ತರಹದ ಪರೀಕ್ಷೆಗಳನ್ನು ರಾಜ್ಯ ಸರ್ಕಾರ ನಿಗದಿಪಡಿಸಿರುವ ಹಣವನ್ನು ಮಾತ್ರ ತೆಗೆದುಕೊಳ್ಳಲಾಗುವುದೇ ಹೊರತು ಹೆಚ್ಚುವರಿ ಹಣವನ್ನು ನಾವು ಪಡೆಯುವುದಿಲ್ಲ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳಾದ ಕೆಂಚೇಗೌಡ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲು ಆಗುವುದಿಲ್ಲ, ದಾನಿಗಳಿಂದ ಮಾತ್ರ ಸಂಗ್ರಹಿಸಿದ ರಕ್ತವನ್ನು ಉಪಯೋಗಿಸಬಹುದು ಎಂದರು.ಚನ್ನರಾಯಪಟ್ಟಣ ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಬಿ. ಎಲ್. ಅರುಣ್ ಕುಮಾರ್ ಅವರು ತಾವೇ ಮೊದಲು ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ರಕ್ತದಾನ ಮಾಡುವಂತೆ ಪ್ರೇರಣೆ ನೀಡಿದರು. ಇದೇ ಸಂದರ್ಭದಲ್ಲಿ ಹಾಜರಿದ್ದ ವೈದ್ಯ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಮತ್ತು ರಕ್ತದಾನಿಗಳು ವಿದ್ಯಾರ್ಥಿನಿಯರಿಗೆ ರಕ್ತದಾನದ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಗಣಪತಿ ಆಸ್ಥಾನ ಮಂಟಪದ ಅಧ್ಯಕ್ಷ ಸಿ. ಎನ್. ಅಶೋಕ್, ಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಸಿ. ವೈ. ಸತ್ಯನಾರಾಯಣ, ಗಜಾನನಮನೋಹರ್, ಮಹಾದೇವ್, ಸರ್ಕಾರಿ ಆಸ್ಪತ್ರೆಯ ನೌಕರರಾದ ಕೆಂಚೇಗೌಡ, ರೋಟರಿ ಕ್ಲಬ್ ಮುಖ್ಯಸ್ಥರಾದ ಜ್ಯೋತಿ ಶ್ರೀನಿವಾಸ್, ಸಮಾಜ ಸೇವಕ ಜೆ.ಬಿ. ಉಲ್ಲಾ ಬೇಗ್ ಸೇರಿದಂತೆ ಇತರರು ಹಾಜರಿದ್ದರು.