ಸಾರಾಂಶ
ಚಿತ್ರಪಾಡಿ ಸಾಲಿಗ್ರಾಮದ ಶ್ರೀ ನಟರಾಜ ನೃತ್ಯ ನಿಕೇತನದ ೩೧ನೇ ವಾರ್ಷಿಕೋತ್ಸವ ಇತ್ತೀಚೆಗೆ ನೆರವೇರಿತು. ಶ್ರೀ ನಟರಾಜ ನೃತ್ಯ ನಿಕೇತನದಲ್ಲಿ ಕಲಿತು ವಿಶೇಷ ಸ್ಥಾನಮಾನ ಹೊಂದಿದ ವಿದ್ಯಾರ್ಥಿಗಳಿಗೆ ಸಾಧಕ ಪುರಸ್ಕಾರ, ಸಾಧಕ ಸಿರಿ ಪುರಸ್ಕಾರ, ರಂಗ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ
ಅನಾದಿ ಕಾಲದಿಂದಲೂ ಸಾಂಸ್ಕೃತಿಕ ಕಲೆಗಳು ಸಮಾಜವನ್ನು ಸುಸಂಸ್ಕೃತರನ್ನಾಗಿ ಬೆಳಸುವಲ್ಲಿ ಬಹುಮುಖ್ಯ ಪಾತ್ರವಹಿಸಿವೆ. ಭರತನಾಟ್ಯ, ಯಕ್ಷಗಾನ, ನಾಟಕಗಳು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿರುತ್ತವೆ. ಈ ಕಲೆಗಳು ಮಕ್ಕಳ ಏಕಾಗ್ರತೆಗೆ ನೆರವಾಗುತ್ತಿವೆ ಎಂದು ನಿವೃತ್ತ ಉಪನ್ಯಾಸಕ ಶ್ರೀನಿವಾಸ ಸೋಮಯಾಜಿ ಅಭಿಪ್ರಾಯಪಟ್ಟಿದ್ದಾರೆ.ಚಿತ್ರಪಾಡಿ ಸಾಲಿಗ್ರಾಮದ ಶ್ರೀ ನಟರಾಜ ನೃತ್ಯ ನಿಕೇತನದ ೩೧ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆಗಳಲ್ಲಿ ತೊಡಗಿಸಿಕೊಳ್ಳುವ ಮಕ್ಕಳು ಶಾಲಾ ಶಿಕ್ಷಣದಲ್ಲೂ ಮುಂದಿದ್ದಾರೆ. ಹಾಗಾಗಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಸಾಂಸ್ಕೃತಿಕ ರುಚಿ ತೋರಿಸಬೇಕು ಎಂದು ಅವರು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಕಲಾಮಾಧ್ಯಮ ಬಹು ದೊಡ್ಡ ಕೊಡುಗೆ ನೀಡುತ್ತಿದೆ. ಇಂತಹ ಸಂಸ್ಥೆಗಳು ಈ ಬಗ್ಗೆ ಶ್ರಮಿಸುತ್ತಿರುವುದು ಸಂತೋಷದ ವಿಚಾರ ಎಂದರು. ಖ್ಯಾತ ಭರತನಾಟ್ಯ ಕಲಾವಿದ ಅಮ್ಮುಂಜೆಯ ವಿದ್ವಾನ್ ಕೆ. ಭವಾನಿ ಶಂಕರ ಅವರನ್ನು ಸನ್ಮಾನಿಸಲಾಯಿತು.ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಉಪಸ್ಥಿತರಿದ್ದರು.ಶ್ರೀ ನಟರಾಜ ನೃತ್ಯ ನಿಕೇತನದಲ್ಲಿ ಕಲಿತು ವಿಶೇಷ ಸ್ಥಾನಮಾನ ಹೊಂದಿದ ವಿದ್ಯಾರ್ಥಿಗಳಿಗೆ ಸಾಧಕ ಪುರಸ್ಕಾರ, ಸಾಧಕ ಸಿರಿ ಪುರಸ್ಕಾರ, ರಂಗ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸಂಸ್ಥೆಯ ನಿರ್ದೇಶಕಿ ಭಾಗೀರತಿ ಎಂ.ರಾವ್ ಸ್ವಾಗತಿಸಿದರು. ಪುಷ್ಪಲತಾ ನಿರೂಪಿಸಿದರು.ಸಭಾ ಕಾರ್ಯಕ್ರಮದ ನಂತರ ನೃತ್ಯ ನಿಕೇತನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನಾಟ್ಯ ಪ್ರದರ್ಶನ ನೆರವೇರಿತು.