ದಾನಿಗಳ ನೆರವಿನಿಂದ ಎರಡು ಕೊಠಡಿಗಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಲ್ಯಾಪ್‌ ಟಾಪ್, ಬ್ಲೂಟೂತ್, ಸ್ಪೀಕರ್, ಪ್ರಿಂಟರ್ ಹಾಗೂ ಮೈಕ್ ಸೆಟ್ ಬಳಸಿ ಪಾಠ ಮಾಡುತ್ತಾರೆ.

ರಾಘವೇಂದ್ರ ಹೆಬ್ಬಾರ್

ಭಟ್ಕಳ: ಮಗುವಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಇಡೀ ಸಮುದಾಯವನ್ನು ಶಾಲೆಯತ್ತ ಆಕರ್ಷಿಸುವ ನಿರಂತರ ಪ್ರಕ್ರಿಯೆಯೇ ಶಿಕ್ಷಣ ಎಂಬುದನ್ನು ಭಟ್ಕಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಡಶಿರಾಲಿಯ ಮುಖ್ಯ ಶಿಕ್ಷಕ ಮನೋಜ್ ಶೆಟ್ಟಿ ಸಾಬೀತು ಮಾಡಿದ್ದಾರೆ.

ಇಡೀ ಶಾಲಾ ಕೊಠಡಿಯನ್ನೇ ಒಂದು ಆಕರ್ಷಕ ಜ್ಞಾನದ ರೈಲನ್ನಾಗಿ ಮಾರ್ಪಡಿಸಿದ್ದಾರೆ. ಮೂಡಶಿರಾಲಿ ಶಾಲೆಯ ಆವರಣಕ್ಕೆ ಕಾಲಿಡುತ್ತಿದ್ದಂತೆ ಮಕ್ಕಳಿಗೆ ತಾವೊಂದು ಸಾಂಪ್ರದಾಯಿಕ ತರಗತಿಗೆ ಹೋಗುತ್ತಿದ್ದೇವೆ ಎಂಬ ಭಾವನೆಗಿಂತ, ಜ್ಞಾನದ ಸುಂದರ ಪಯಣ ಬೆಳೆಸಲು ಜ್ಞಾನದ ಹಳಿ ಹತ್ತುತ್ತಿದ್ದೇವೆ ಎಂಬ ರೋಮಾಂಚನ ಉಂಟಾಗುತ್ತದೆ.

ಈ ನವೀನ ವಿನ್ಯಾಸವನ್ನು ಮಕ್ಕಳು, ಪಾಲಕರು ಮತ್ತು ಇಡೀ ಗ್ರಾಮಸ್ಥರು ಅತ್ಯಂತ ಪ್ರೀತಿಯಿಂದ ವಿದ್ಯಾವಾಹಿನಿ ಎಕ್ಸಪ್ರೆಸ್ ಎಂದು ಕರೆಯುತ್ತಾರೆ.

ದಾನಿಗಳ ನೆರವಿನಿಂದ ಎರಡು ಕೊಠಡಿಗಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಲ್ಯಾಪ್‌ ಟಾಪ್, ಬ್ಲೂಟೂತ್, ಸ್ಪೀಕರ್, ಪ್ರಿಂಟರ್ ಹಾಗೂ ಮೈಕ್ ಸೆಟ್ ಬಳಸಿ ಪಾಠ ಮಾಡುತ್ತಾರೆ. ಶಾಲೆಯ ಪ್ರಚಾರಕ್ಕಾಗಿ ಯೂಟ್ಯೂಬ್ ಚಾನೆಲ್, ವಾಟ್ಸಾಪ್ ಗುಂಪು ಹಾಗೂ ಶಾಲಾ ಬ್ಲಾಗ್ ಆರಂಭಿಸಿ ಸೃಜನಶೀಲತೆ ಮೆರೆದಿದ್ದಾರೆ. ಶಾಲೆಯ ಇಡೀ ದಿನದ ಚಟುವಟಿಕೆಗೂ ಅತ್ಯಂತ ಶಿಸ್ತಿನಿಂದ ವೇಳಾಪಟ್ಟಿಯಂತೆ ನಡೆಯಲು ಅಟೋಮೆಟಿಕ್ ಬೆಲ್ ಸಿಸ್ಟಮ್ ಇದೆ. ಮಕ್ಕಳ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಮಕ್ಕಳ ಆಟೋಟಗಳಿಗೆ ದಾನಿಗಳ ಸಹಾಯದಿಂದ ಪ್ಲೇ ಪಾರ್ಕ್ ನಿರ್ಮಾಣ ಮಾಡಿದ್ದಾರೆ.

ಕಾಲಕ್ಕೆ ತಕ್ಕಂತೆ ಬದಲಾದ ಬೋಧನೆ

ಅನಂತ ದೇಸಾಯಿ

ಜೋಯಿಡಾ: ಈಗಿನ ಮಕ್ಕಳಿಗೆ ಎಐ ಮತ್ತು ಟಿವಿ, ಕಂಪ್ಯೂಟರ್, ಲ್ಯಾಪ್‌ಟಾಪ್ ಮೊಬೈಲ್‌ಗಳ ಮೂಲಕ ಪಾಠ ಮಾಡುವ ಕನ್ನಡ ಶಾಲೆ ರಾಮನಗರ ಶಾಲೆ. ಇದಕ್ಕೆ ಶಿಕ್ಷಕಿ ಜ್ಯೋತ್ಸ್ನಾ ದೇಸಾಯಿ ಅವರ ಶ್ರಮ ಅಪಾರವಾಗಿದೆ.ಕೊರೋನಾ ಕಾಲದಿಂದ ಮನೆ ಮನೆಗೂ ಮೊಬೈಲ್ ಪರಿಚಯವಾಯಿತು. ಮೊಬೈಲ್‌ಗೆ ಹೊಂದಿಕೊಂಡ ವಿದ್ಯಾರ್ಥಿಗಳು ತಮ್ಮ ಬುದ್ಧಿಮತ್ತೆಗೆ ಕೆಲಸ ಕೊಟ್ಟಾಗ, ಅವರಿಗೆ ಕಲಿಕೆಯಲ್ಲಿ ಹಿಂದೆ ಹೇಳುವ ಪದ್ಧತಿಯಲ್ಲಿ ಆಸಕ್ತಿ ಕಡಿಮೆಯಾಗತೊಡಗಿತ್ತು. ವಿದ್ಯಾರ್ಥಿಗಳ ಬುದ್ಧಿಮತ್ತೆಗೆ ಸರಿಯಾಗಿ ಶಿಕ್ಷಕಿ ಜ್ಯೋತ್ಸ್ನಾ ದೇಸಾಯಿ ಅವರು ತಮ್ಮ ಕ್ಲಾಸಿನಲ್ಲಿ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್‌ಗಳ ಮೂಲಕ ಕಲಿಕೆ ಆರಂಭಿಸಿದರು.

ಅದರಿಂದ ಬೇಗನೆ ವಿದ್ಯಾರ್ಥಿಗಳು ಕಲಿಯುವುದನ್ನು ಶಿಕ್ಷಕಿ ಗಮನಿಸಿದರು. ಹಾಗಾಗಿ ಈಗಿನ ಮಕ್ಕಳ ಬುದ್ಧಿಮತ್ತೆಗೆ ತಕ್ಕ ಹಾಗೆ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಮೂಲಕ ಕಲಿಸುವ ಮೂಲಕ ದಾಖಲೆ ಬರೆದಿದ್ದಾರೆ.ಮೂಲತಃ ರಾಮನಗರದವರೇ ಆಗಿರುವ ಜ್ಯೋತ್ಸ್ನಾದೇಸಾಯಿ ಅದೇ ಪ್ರಾಥಮಿಕ ಶಾಲೆಯಲ್ಲಿ ಕಲಿತವರು. ಅವರಿಗೆ ಅದೇ ಶಾಲೆಯಲ್ಲಿ, ಶಿಕ್ಷಕಿಯಾಗಿ ಕಲಿಸಲು ಕೆಲಸ ದೊರೆತಿರುವುದು ನನ್ನ ಭಾಗ್ಯ ಎನ್ನುತ್ತಾರೆ.ಈ ಶಾಲೆಯಲ್ಲಿ ಒಟ್ಟೂ 443 ವಿದ್ಯಾರ್ಥಿಗಳಿದ್ದು, ಜ್ಯೋತ್ಸ್ನಾ ದೇಸಾಯಿ ಅವರು 6 ಮತ್ತು 7ನೇ ಕ್ಲಾಸಿನ 163 ಮಕ್ಕಳಿಗೆ ಪಾಠ ಕಲಿಸುತ್ತಿದ್ದಾರೆ. ಹೀಗೆ ನಾವಿನ್ಯವಾದ ಕಲಿಕೆಯಿಂದ ವಿದ್ಯಾರ್ಥಿಗಳು ಕಲಿತಾಗ ನಮಗೂ ಸಮಾಧಾನ ತರುತ್ತದೆ ಎನ್ನುತ್ತಾರೆ ಶಿಕ್ಷಕಿ ಜ್ಯೋತ್ಸ್ನಾ ದೇಸಾಯಿ.