ಕುಕನೂರು: ತಾಲೂಕಿನ ವೀರಾಪುರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಮಹಾನ್ ನಾಯಕರ ಭಾವಚಿತ್ರಕ್ಕೆ ಏ. ೧೫ರ ಮಧ್ಯರಾತ್ರಿ ಸಗಣಿ ಎರಚಿ ಅವಮಾನಿಸಿದ ಘಟನೆಯಲ್ಲಿ ಆರೋಪಿಯ ಗುರುವಾರ ಪೊಲೀಸರು ಬಂಧಿಸಿದ್ದಾರೆ.
ವೀರಾಪುರ ಗ್ರಾಮದ ಶಿವಕುಮಾರ ಕಡೆಮನಿ (23) ಬಂಧಿತ ಆರೋಪಿ.ಗ್ರಾಮಸ್ಥರು ಅಂಬೇಡ್ಕರ್ ಜಯಂತಿ ಆಚರಿಸಲು ದೇಣಿಗೆ ಸಂಗ್ರಹಿಸಲು ಈತನಿಗೆ ಜವಾಬ್ದಾರಿ ನೀಡಿದ್ದರು. ಸಂಗ್ರಹವಾದ ₹೧೪೦೦೦ ದೇಣಿಗೆ ಹಣದಲ್ಲಿ ₹೭೦೦೦ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದ. ಮರಳಿ ಆ ಹಣ ಹೊಂದಿಸಲು ಆಗದೆ ಗ್ರಾಮದಲ್ಲಿ ಏ. ೨೦ರಂದು ಜರುಗಬೇಕಿದ್ದ ಜಯಂತಿ ಹೇಗಾದರೂ ಮುಂದೂಡಲು ಆಲೋಚಿಸಿ ವೀರಾಪುರ ಗ್ರಾಮದ ವೃತ್ತದಲ್ಲಿರುವ ಅಂಬೇಡ್ಕರ್, ಬಸವಣ್ಣ, ಪೆರಿಯಾರ್, ಬಾಬು ಜಗಜೀವನರಾಮ್, ಜ್ಯೋತಿಬಾ ಫುಲೆ ಇತರ ಮಹಾನ್ ನಾಯಕರ ಭಾವಚಿತ್ರಕ್ಕೆ ಸಗಣಿ ಬಳಿದು ಶಿವಕುಮಾರ ತಲೆ ಮರೆಸಿಕೊಂಡಿದ್ದ.
ಈ ದುಷ್ಕೃತ್ಯ ಖಂಡಿಸಿ ದಲಿತ ಸಂಘಟನೆ ಹಾಗೂ ಹೋರಾಟಗಾರರು ಕಿಡಿಗೇಡಿಗಳ ಬಂಧನಕ್ಕೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದವು. ಅಲ್ಲದೆ ಪ್ರಕರಣ ಸಹ ದಾಖಲಾಗಿತ್ತು. ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಯಲಬುರ್ಗಾ ಸಿಪಿಐ ಮೌನೇಶ್ವರ ಪಾಟೀಲ್ ಮತ್ತು ಕುಕನೂರು ಪಿಎಸ್ಐ ಎಸ್.ಪಿ ನಾಯಕ ನಿರಂತರ ಕಾರ್ಯಾಚರಣೆ ನಡೆಸಿ ದುಷ್ಕೃತ್ಯ ಎಸಗಿದ ಭೂಪನನ್ನು ಬಂಧಿಸಿದ್ದಾರೆ. ಆರೋಪಿ ಶಿವಕುಮಾರ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.