ಸಾರಾಂಶ
ಬೆಳ್ಗಾವಿ : ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿದ್ದು, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣಕ್ಕೆ ಸೆಡ್ಡು ಹೊಡೆದು ಬಸನಗೌಡ ಪಾಟೀಲ್ ಯತ್ನಾಳ್ ಬಣದ ಸದಸ್ಯರು ಬೆಳ್ಗಾವಿಯಲ್ಲಿ ಭಾನುವಾರ ಬೃಹತ್ ವಕ್ಫ್ ವಿರೋಧಿ ಪ್ರತಿಭಟನೆ ನಡೆಸಿ ತಮ್ಮ ತಾಕತ್ತು ಪ್ರದರ್ಶಿಸಿದರು.
ನಗರದ ಮಹಾತ್ಮ ಗಾಂಧಿ ಭವನದಲ್ಲಿ ಈ ಜನಜಾಗೃತಿ ಸಮಾವೇಶ ನಡೆಸಲಾಯಿತು. ಸಮಾವೇಶದಲ್ಲಿ ಯತ್ನಾಳ್ ಬಣದ ನಾಯಕರು ಪಾಲ್ಗೊಂಡಿದ್ದರು. ಬೆಳ್ಗ್ಗೆ ನಗರದ ಖಾಸಗಿ ಹೋಟೆಲ್ನಲ್ಲಿ ರಹಸ್ಯ ಸಭೆ ನಡೆಸಿದ ಸದಸ್ಯರು, ಮುಂದಿನ ಹೋರಾಟದ ರೂಪು-ರೇಷೆ ಕುರಿತು ಚರ್ಚಿಸಿದರು. ಬಳಿಕ, ವಕ್ಫ್ ಬೋರ್ಡ್ ಭೂಕಬಳಿಕೆ ವಿರುದ್ಧದ ಹೋರಾಟಕ್ಕೆ ತೆರಳಿದರು. ನಗರದ ಪ್ರಮುಖ ವೃತ್ತಗಳ್ಲ್ಲಿ ಇರುವ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಿ.ಆರ್. ಅಂಬೇಡ್ಕರ್ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ, ನಗರದ ಚೆನ್ನಮ್ಮ ವೃತ್ತದಿಂದ ಗಾಂಧಿಭವನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ವಕ್ಫ್ ಬೋರ್ಡ್ ಭೂ ಕಬಳಿಕೆ ವಿರುದ್ಧ ಘೋಷಣೆಗಳು ಮೊಳಗಿದವು. ಬಿಜೆಪಿ ಬಾವುಟ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಭಾವಚಿತ್ರಗಳ್ನ್ನು ಪ್ರದರ್ಶಿಸಲಾಯಿತು. ಬಳಿಕ, ಮಹಾತ್ಮ ಗಾಂಧಿ ಭವನದಲ್ಲಿ ವಕ್ಫ್ ವಿರೋಧಿ ಜನಜಾಗೃತಿ ಸಮಾವೇಶ ನಡೆಸಲಾಯಿತು. ಸಮಾವೇಶದಲ್ಲಿ ಮಾತನಾಡಿದ ನಾಯಕರು, ರಾಜ್ಯ ಸರ್ಕಾರ ಹಾಗೂ ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಿಲ್ಲಿ ಭೇಟಿಗೆ ರೂಪುರೇಷೆ: ಸಮಾವೇಶಕ್ಕೂ ಮುನ್ನ ಯತ್ನಾಳ್ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ರಹಸ್ಯ ಸಭೆ ನಡೆಯಿತು. ಸಭೆಯಲ್ಲಿ ದೆಹಲಿಗೆ ಭೇಟಿ ನೀಡಿದ ವೇಳೆ ಪಕ್ಷದ ವರಿಷ್ಠರ ಜೊತೆಗೆ ಯಾವ ವಿಷಯ ಚರ್ಚೆ ಮಾಡಬೇಕು, ವಕ್ಫ್ ಸೇರಿ ರಾಜಕೀಯ ಬೆಳವಣಿಗೆ ಕುರಿತು ಗಮನ ಸೆಳೆಯುವುದು, ವಕ್ಫ್ ವಿರುದ್ಧದ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಹಲವರು ವಿರೋಧಿಸುತ್ತಿರುವ ಬಗ್ಗೆ ವರಿಷ್ಠರ ಗಮನಕ್ಕೆ ತರುವ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ. ಮಾಜಿ ಸಚಿವ ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ, ಮಹೇಶ ಕುಮಟಳ್ಳಿ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.