ಸಾರಾಂಶ
ಈ ಸಂಬಂಧ ಸಹೋದರ ನೀಡಿದ ದೂರಿನ ಮೇರೆಗೆ ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ವಾಸುದಾರರಿಗೆ ಒಪ್ಪಿಸಲಾಯಿತು. ಭಾನುವಾರ ಸ್ವಗ್ರಾಮ ಬೆಸಗರಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಮೃತನಿಗೆ ಪತ್ನಿ ದೀಪಾ ಹಾಗೂ 4 ವರ್ಷದ ಪ್ರಬುದ್ಧ ಎಂಬ ಪುತ್ರನಿದ್ದಾನೆ.
ಕನ್ನಡಪ್ರಭ ವಾರ್ತೆ ಮದ್ದೂರು
ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಯುವ ಪತ್ರಕರ್ತ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಪಟ್ಟಣದ ಮಳವಳ್ಳಿಯ ರಸ್ತೆಯಲ್ಲಿ ನಡೆದಿದೆ.ತಾಲೂಕಿನ ಬೆಸಗರಹಳ್ಳಿ ಲೇ.ಆರ್.ಮುರುಗನ್ ಪುತ್ರ ಬಿ.ಎ ಮಧುಕುಮಾರ್ (32)ಮೃತಪಟ್ಟ ದುರ್ದೈವಿ.
ಮೃತ ಮಧುಕುಮಾರ್ ಪಟ್ಟಣದ ಮಳವಳ್ಳಿ ಮಾರ್ಗದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಮಧುಕುಮಾರ್ ನನ್ನು ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾರೆ.ಈ ಸಂಬಂಧ ಸಹೋದರ ನೀಡಿದ ದೂರಿನ ಮೇರೆಗೆ ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ವಾಸುದಾರರಿಗೆ ಒಪ್ಪಿಸಲಾಯಿತು. ಭಾನುವಾರ ಸ್ವಗ್ರಾಮ ಬೆಸಗರಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಮೃತನಿಗೆ ಪತ್ನಿ ದೀಪಾ ಹಾಗೂ 4 ವರ್ಷದ ಪ್ರಬುದ್ಧ ಎಂಬ ಪುತ್ರನಿದ್ದಾನೆ.
ಮೃತ ಮಧುಕುಮಾರ್ 3 ವರ್ಷಗಳ ಕಾಲ ಕೊಪ್ಪ ಹೋಬಳಿಯ ಪ್ರಜಾವಾಣಿ ಪತ್ರಿಕೆ ವರದಿಗಾರರಾಗಿ ಬಳಿಕ ಪ್ರಸ್ತುತ ಪ್ರತಿನಿಧಿ ಪತ್ರಿಕೆ ತಾಲೂಕು ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಶಾಸಕ ಕೆ.ಎಂ.ಉದಯ್, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ರೈತ ಸಂಘಟನೆ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ಇನ್ನಿತರ ಸಂಘ- ಸಂಸ್ಥೆಯ ಪದಾಧಿಕಾರಿಗಳು ಮೃತರ ಅಂತಿಮ ದರ್ಶನ ಪಡೆದರು.
ಮೃತ ಮಧುಕುಮಾರ್ ಅವರ ನಿಧನಕ್ಕೆ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಮತ್ತಿಕೆರೆ ಜಯರಾಮ್, ರಾಜ್ಯ ಕಾರ್ಯದರ್ಶಿ ಕೆರೆಗೋಡು ಸೋಮಶೇಖರ್, ಜಿಲ್ಲಾಧ್ಯಕ್ಷ ಪ್ರಕಾಶ್ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.ಮೃತ ಪತ್ರಕರ್ತ ಬಿ.ಎ.ಮಧುಕುಮಾರ್ ಅವರ ಕುಟುಂಬಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಆರ್ಥಿಕ ಸಹಾಯ ಮಾಡಿದರು.