ಸಾರಾಂಶ
ಹೆಲ್ಮೆಟ್ ಧರಿಸುವುದರಿಂದ ಸಾಕಷ್ಟು ಸಾವು-ನೋವುಗಳನ್ನು ತಪ್ಪಿಸಬಹುದು. ಪ್ರತಿಯೊಬ್ಬ ವಾಹನ ಸವಾರರಿಗೂ ಒಂದೊಂದು ಕುಟುಂಬವಿದೆ. ಕುಟುಂಬದ ಯಜಮಾನನನ್ನು ನಂಬಿ ಬದುಕು ಸಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಯೊಬ್ಬ ಯುವಕರು ತಮ್ಮ ತಮ್ಮ ಕುಟುಂಬದ ಆಸ್ತಿ ಎಂಬುದನ್ನು ತಿಳಿಯಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವಂತೆ ಪಟ್ಟಣ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕಿ ಸುಮಾರಾಣಿ ಎಚ್ಚರಿಕೆ ನೀಡಿದರು.ಪಟ್ಟಣದ ಚನ್ನರಾಯಪಟ್ಟಣ ರಸ್ತೆ ಗ್ರಾಮಭಾರತಿ ಶಾಲೆ ಬಳಿ ಹೆಲ್ಮೆಟ್ ಧರಿಸದೆ ಅಡ್ಡಾದಿಡ್ಡಿಯಾಗಿ ಓಡಾಡುವ ದ್ವಿಚಕ್ರ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ ಸುಮಾರಾಣಿ, ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಸ್ಥಳದಲ್ಲಿಯೇ ದಂಡ ವಿಧಿಸುವ ಜೊತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಹೆಲ್ಮೆಟ್ ಧರಿಸುವುದರಿಂದ ಸಾಕಷ್ಟು ಸಾವು-ನೋವುಗಳನ್ನು ತಪ್ಪಿಸಬಹುದು. ಪ್ರತಿಯೊಬ್ಬ ವಾಹನ ಸವಾರರಿಗೂ ಒಂದೊಂದು ಕುಟುಂಬವಿದೆ. ಕುಟುಂಬದ ಯಜಮಾನನನ್ನು ನಂಬಿ ಬದುಕು ಸಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಯೊಬ್ಬ ಯುವಕರು ತಮ್ಮ ತಮ್ಮ ಕುಟುಂಬದ ಆಸ್ತಿ ಎಂಬುದನ್ನು ತಿಳಿಯಬೇಕು ಎಂದರು.ಹೆಲ್ಮಟ್ ಧರಿಸಿ ರಸ್ತೆ ಸುರಕ್ಷತಾ ನಿಯಮ ಪಾಲಿಸಿದರೆ ಶೇ.100 ರಷ್ಟು ರಸ್ತೆ ಅಪಘಾತ ತಪ್ಪಿಸಬಹುದು. ನಾಗರೀಕ ಸಮಾಜಕ್ಕೆ ಮಾರ್ಗದರ್ಶಕರಾಗಿರುವ ಶಿಕ್ಷಕರು, ಪತ್ರಕರ್ತರು ಹಾಗೂ ಯುವ ಜನರು ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು ಎಂದು ಸೂಚಿಸಿದರು.
ಹೆಲ್ಮೆಟ್ ಧರಿಸಿ ತಮ್ಮ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವ ಜೊತೆಗೆ ವಾಹನದ ವಿಮೆಯ ಪ್ರತಿ, ವಾಹನ ಚಾಲನಾ ಪರವಾನಗಿಯ ನಕಲನ್ನು ತಮ್ಮ ಜೊತೆ ಇಟ್ಟುಕೊಂಡು ವಾಹನ ಚಾಲನೆ ಮಾಡಬೇಕು, ಪೊಲೀಸರು ದ್ವಿಚಕ್ರ ವಾಹನಗಳ ತಪಾಸಣೆ ಮಾಡುವ ಸಮಯದಲ್ಲಿ ತಮ್ಮ ಜೊತೆಯಲ್ಲಿ ತಮ್ಮ ವಾಹನಗಳ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ವಾಹನಗಳ ತಪಾಸಣೆ ವೇಳೆ ಹಾಜರು ಪಡಿಸಲು ಮನವಿ ಮಾಡಿದರು.