ಗಾಳಿ ಮಳೆಗೆ ಬೈಕ್ ಸವಾರನ ಮೇಲೆ ಕೊಂಬೆ ಬಿದ್ದು ಸಾವು

| Published : Jun 17 2025, 12:50 AM IST / Updated: Jun 17 2025, 12:51 AM IST

ಸಾರಾಂಶ

ಬಾಳೆಹೊನ್ನೂರು, ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಗಾಳಿ ಮಳೆಗೆ ಮರದ ಕೊಂಬೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಗಾಳಿ ಮಳೆಗೆ ಮರದ ಕೊಂಬೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಕಡಬಗೆರೆ ಬಿಳುಕೊಪ್ಪ ಗ್ರಾಮದ ಅನಿಲ್ ರೋಜಾರಿಯೋ (50) ಮೃತ ವ್ಯಕ್ತಿ. ಸೋಮವಾರ ಬೆಳಿಗ್ಗೆ ಬೈಕ್ ಮೂಲಕ ತನ್ನ ಮನೆಯಿಂದ ಬಾಳೆಹೊನ್ನೂರು ಕಡೆಗೆ ತೆರಳುವಾಗ ಎಲೆಕಲ್ಲು ಘಾಟಿ ಬಳಿಯಲ್ಲಿ ಜೋರು ಗಾಳಿಗೆ ಮರದ ಕೊಂಬೆ ಮುರಿದು ತಲೆ ಮೇಲೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಬಾಳೆಹೊನ್ನೂರು ಪಿಎಸ್‌ಐ ರವೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.ಬನ್ನೂರು ಗ್ರಾಪಂ ವ್ಯಾಪ್ತಿಯ ಹಲಸೂರು ಗ್ರಾಮದ ಬೋಬೇಗೌಡ ಅವರ ಮನೆ ಅಡುಗೆ ಕೋಣೆ ಮೇಲೆ ಮರ ಬಿದ್ದು ಸ್ವಲ್ಪ ಹಾನಿಯಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

-- ಬಾಕ್ಸ್--

ಮಳೆಗೆ ತುಂಬಿದ ಭದ್ರಾನದಿ

ಕಳೆದ ಎರಡು ದಿನಗಳಿಂದ ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆಯೊಂದಿಗೆ ಬಾರೀ ಪ್ರಮಾಣದಲ್ಲಿ ಗಾಳಿಯೂ ಬೀಸುತ್ತಿದೆ. ಗಾಳಿಯ ರಭಸಕ್ಕೆ ಹಲವೆಡೆ ಮರಗಳು ಧರೆಗುರುಳಿವೆ.

ಹಲವು ಕಡೆಗಳಲ್ಲಿ ಮರ, ಮರದ ಕೊಂಬೆ ವಿದ್ಯುತ್ ಲೈನ್ ಮೇಲೆ ಬಿದ್ದಿರುವ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಿರಂತರ ಮಳೆ ಪರಿಣಾಮ ಅಡಕೆ, ಕಾಫಿ ತೋಟಗಳಲ್ಲಿ ಕೆಲಸ ಕಾರ್ಯಗಳು ಸ್ಥಗಿತವಾಗಿದೆ. ಬಾಳೆಹೊನ್ನೂರು ಮಾತ್ರ ವಲ್ಲದೇ, ಕಳಸ, ಕುದುರೆಮುಖ ವ್ಯಾಪ್ತಿಯಲ್ಲಿಯೂ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಪಟ್ಟಣದಲ್ಲಿ ಹರಿಯುವ ಭದ್ರಾನದಿಯಲ್ಲಿ ನೀರಿನ ಹರಿವು ಏರಿಕೆಯಾಗಿದೆ. ಬಾಳೆಹೊನ್ನೂರು, ಖಾಂಡ್ಯ, ಮಾಗುಂಡಿ ಭಾಗದಲ್ಲಿ ಭದ್ರಾನದಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ.

೧೬ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಖಾಂಡ್ಯದಲ್ಲಿ ನಿರಂತರ ಮಳೆಯಿಂದಾಗಿ ಭದ್ರಾನದಿ ತುಂಬಿ ಹರಿಯುತ್ತಿರುವುದು.

೧೬ಬಿಹೆಚ್‌ಆರ್ ೨: ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಪಂ ವ್ಯಾಪ್ತಿಯ ಹಲಸೂರು ಗ್ರಾಮದ ಬೋಬೇಗೌಡ ಎಂಬುವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿರುವುದು.