ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯು ನೀರು ಬಿಟ್ಟರೆ ಮಾತ್ರ ನೀರಿನ ಬಿಲ್ ಕಟ್ಟುತ್ತದೆ. ಇಲ್ಲವಾದರೆ ಇಲ್ಲ ಎಂದು ಕರವೇ ನಾರಾಯಣಗೌಡ ಬಣದ ಜಿಲ್ಲಾ ಪ್ರ.ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ ಎಚ್ಚರಿಸಿದರು.

ಬುಧವಾರ ಕರವೇ ವತಿಯಿಂದ ಪಟ್ಟಣದ ಪುರಸಭೆಗೆ ಸರಿಯಾಗಿ ನೀರು ಬಿಡುವಂತೆ ಆಗ್ರಹಿಸಿ ಮುತ್ತಿಗೆ ಹಾಕಿ ಮಾತನಾಡಿದರು.

ಕಳೆದ ಒಂದು ತಿಂಗಳಿನಿಂದ ಪಟ್ಟಣಕ್ಕೆ ಸರಿಯಾಗಿ ನೀರು ಬಂದಿಲ್ಲ. ಅಧಿಕಾರಿಗಳನ್ನು ಈ ಬಗ್ಗೆ ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಸಮಸ್ಯೆ ಕೇಳಲು ಬಂದರೆ ಪುರಸಭೆಯಲ್ಲಿ ಅಧಿಕಾರಿಗಳು ಇರುವುದಿಲ್ಲ. ಪ್ರತಿ ವಾರ ನೀರು ಬಿಡಲು ಆಗಲ್ಲ ಅಂದಾದರೆ ಜನರಿಂದ ಯಾಕೆ ನೀರಿನ ಬಿಲ್ ಕಟ್ಟಿಸಿಕೊಳ್ಳುತ್ತಿರಿ. ಕುಡಿಯುವ ನೀರು ಇಲ್ಲ, ಬೋರವೆಲ್ ನೀರು ಇಲ್ಲ, ಇದರಿಂದ ಜನರು ಕಂಗಾಲು ಆಗಿದ್ದಾರೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿ. ಇಲ್ಲವಾದರೆ, ಪುರಸಭೆಗೆ ಬೀಗ ಜಡಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪುರಸಭೆಯ ಎದುರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನಂತರ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಆಗಮಿಸುತ್ತಿದಂತೆ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾಕಾರರಿಗೆ ಸ್ಪಂದನೆ ನೀಡಿದ ಮುಖ್ಯಾಧಿಕಾರಿ ಸಮಸ್ಯೆ ಇರುವ ವಾರ್ಡಗಳಲ್ಲಿ ಟ್ಯಾಂಕರ್ ನೀರಿನಿಂದ ಸರಬರಾಜು ಮಾಡಲಾಗುವುದು. ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದ ನಂತರ ಪ್ರತಿಭಟನೆಯಿಂದ ಹಿಂದೆ ಸರಿದರು.

ಈ ವೇಳೆ ತಾಲೂಕು ಅಧ್ಯಕ್ಷ ಲೋಕೇಶ ಸುತಾರ, ಗೌರವಾಧ್ಯಕ್ಷ ಪ್ರವೀಣ ಗಾಣಗೇರ, ಬಸವರಾಜ ಮಲ್ಲೂರ, ಅರುಣ. ಮೆಕ್ಕಿ, ಗಂಗಾಧರ ಕರ್ಜಕಣ್ಣವರ, ಗಂಗಾಧರ ಕೊಂಚಿಗೇರಿಮಠ, ಮಂಜುನಾಥ ಕೊಡಳ್ಳಿ, ಫಕ್ಕೀರೇಶ ಅಣ್ಣಿಗೇರಿ, ಚನ್ನಬಸಯ್ಯ ಗಡ್ಡದೇವರಮಠ, ಶಂಕರಗೌಡ ಪಾಟೀಲ, ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಸಾವಿತ್ರಿ ಅತ್ತಿಗೇರಿ, ಹುಲಿಗೆಮ್ಮ ಮೇವುಂಡಿ, ಜಯಮ್ಮ ತುಪ್ಪದ, ಲಕ್ಷ್ಮಕ್ಕ ಪಶುಪತಿಹಾಳ, ರೇಷ್ಮಾ ಜಾಧವ, ಸಾವಕ್ಕ ಮುಳ್ಳೊಳ್ಳಿ, ಕೆಂಚಮ್ಮ ಶೇರಸೂರಿ, ರತ್ನವ್ವ ವಗ್ಗರ, ರಜಿಯಾ ಮಕಾನದಾರ, ರೇಣಕ್ಕ ಮಲ್ಲೂರ, ಲಕ್ಷ್ಮವ್ವ ಗದ್ದಿ, ಜಯಮ್ಮ ತುಪ್ಪದ ಸೇರಿದಂತೆ ಅನೇಕರು ಇದ್ದರು.