ದಾವಣಗೆರೆ: ನಗರದ ಎನ್.ಆರ್. ರಸ್ತೆಯ ಪಾರ್ಶ್ವನಾಥ್ ಜೈನ್ ದಿಗಂಬರ ಮಂದಿರದಲ್ಲಿ ಸೋಮವಾರ ಸಮಸ್ತ ದಿಗಂಬರ ಜೈನ ಸಮಾಜ, ಮಹಾವೀರ್ ಯುವ ಮಂಚ್, ಶ್ರೀ ಪಾರ್ಶ್ವನಾಥ ಟೆಂಪಲ್ ಟ್ರಸ್ಟ್, ಭಾರತೀಯ ಜೈನ್ ಮಿಲನ್, ಹಾಗೂ ಪದ್ಮಾಂಬ ಮಹಿಳಾ ಸಮಾಜ ಆಶ್ರಯದಲ್ಲಿ ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರ ಸ್ವಾಮಿಯ 2625ನೇ ಜನ್ಮ ಕಲ್ಯಾಣ ಮಹೋತ್ಸವ ಆಚರಿಸಲಾಯಿತು.

ಸೋಮವಾರ ಮುಂಜಾನೆ ವಿಧಿತ್ ಸಾಗರ್ ಮುನಿ ಮಹಾರಾಜರ ಸಮ್ಮುಖ ಮಹಾವೀರ ತೀರ್ಥಂಕರಿಗೆ 108 ಕಲಶ ಅಭಿಷೇಕ ಜೊತೆಗೆ ಗಂಧಾಭಿಷೇಕ, ಕ್ಷೀರಾಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಎಳನೀರು ಅಭಿಷೇಕ, ಮಾವಿನ ಹಣ್ಣಿನ ಅಭಿಷೇಕ, ಕಳಸ ಅಭಿಷೇಕ ಹಾಗೂ ಶಾಂತಿಧಾರ ಅಭಿಷೇಕಗಳು ನೆರವೇರಿದವು.

ನಂತರ ಮಹಾವೀರ ಸ್ವಾಮಿ ಭವ್ಯ ಮೆರವಣಿಗೆ ಪಾರ್ಶ್ವನಾಥ ಜೈನ ದಿಗಂಬರ ಮಂದಿರದಿಂದ ಆರಂಭಗೊಂಡು ಜಾನಪದ ಕಲಾತಂಡಗಳೊಂದಿಗೆ ನರಸರಾಜ ರಸ್ತೆ, ಮಂಡಿಪೇಟೆ, ಗಡಿಯಾರ ಕಂಬ ರಸ್ತೆ, ವಿಜಯಲಕ್ಷ್ಮಿ ರಸ್ತೆ, ಹಾಸಬಾವಿ ಸರ್ಕಲ್ ಮುಖಾಂತರ ಜಿನಮಂದಿರ ತಲುಪಿತು.

ಮಧ್ಯಾಹ್ನ ಮುನಿಶ್ರೀ ವಿದಿತ್ ಸಾಗರ್ ಮುನಿ ಮಹಾರಾಜರಿಂದ ಪ್ರವಚನ ನಡೆಯಿತು, ಸಂಜೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಜೆ ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ ಭಗವಾನ್ ಮಹಾವೀರ ಭಗವಾನರ ಬಾಲ ಲೀಲೋತ್ಸವ, ತೊಟ್ಟಿಲು ನಾಮಕರಣ ಕಾರ್ಯಕ್ರಮ ನೆರವೇರಿದವು. ಸಮಾಜದ ಸರ್ವ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಭಾಗವಹಿಸಿದ್ದರು.

- - -


-ನ30ಕೆಡಿವಿಜಿ39: ದಾವಣಗೆರೆಯಲ್ಲಿ ಜೈನ್ ಸಮಾಜ ಬಾಂಧವರಿಂದ ಸಂಭ್ರಮದಿಂದ ಮಹಾವೀರ ತೀರ್ಥಂಕರ ಜನ್ಮ ಕಲ್ಯಾಣ ಮಹೋತ್ಸವ ಆಚರಿಸಲಾಯಿತು.