ಬೀರೂರು: ಕಸ ವಿಲೇವಾರಿ ಸಮಸ್ಯೆಗೆ ಶೀಘ್ರ ಮುಕ್ತಿ

| Published : Sep 02 2025, 01:00 AM IST

ಸಾರಾಂಶ

ಬೀರೂರು, ಹಲವು ವರ್ಷಗಳ ಹೋರಾಟದ ಫಲವಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಕಾಲ ಸನ್ನಿಹಿತ ವಾಗಿದ್ದು ಬೀರೂರು ಪುರಸಭೆ ಕಸ ವಿಲೇವಾರಿ ಸಮಸ್ಯೆಗೆ ಶೀಘ್ರದಲ್ಲಿಯೇ ಮುಕ್ತಿ ದೊರೆಯುವ ಭರವಸೆ ದೊರೆತಿದೆ.

- ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಬಹುತೇಕ ಪೂರ್ಣ

ಕನ್ನಡಪ್ರಭ ವಾರ್ತೆ, ಬೀರೂರು

ಹಲವು ವರ್ಷಗಳ ಹೋರಾಟದ ಫಲವಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಕಾಲ ಸನ್ನಿಹಿತ ವಾಗಿದ್ದು ಬೀರೂರು ಪುರಸಭೆ ಕಸ ವಿಲೇವಾರಿ ಸಮಸ್ಯೆಗೆ ಶೀಘ್ರದಲ್ಲಿಯೇ ಮುಕ್ತಿ ದೊರೆಯುವ ಭರವಸೆ ದೊರೆತಿದೆ.ಬೀರೂರು ಪುರಸಭೆ ವ್ಯಾಪ್ತಿಯ 5,230 ಮನೆಗಳಿಂದ ನಿತ್ಯವೂ ಸುಮಾರು 9 ಟನ್ನಷ್ಟು ಕಸ ಉತ್ಪಾದನೆ ಯಾಗುತ್ತಿದೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ ಅಡಿ ಪುರಸಭೆ ಬೀರೂರು ಹೋಬಳಿ ಹಂದಿ ಜೋಗಿಹಟ್ಟಿ ಬಳಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾದರೂ ಸ್ಥಳೀಯರ ವಿರೋಧದಿಂದ ಸಾಧ್ಯವಾಗಿರಲಿಲ್ಲ. 2024 ಜಾಗ ದೊರೆತು ಒಂದು ಹಂತದಲ್ಲಿ ಘಟಕ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಅದರ ಬಹಳಷ್ಟು ಕೆಲಸಗಳು ಮುಗಿಯುತ್ತಿದ್ದು ಕೆಲವೊಂದು ಮಾನದಂಡಗಳನ್ನು ನಿಯಮದಂತೆ ಪೂರೈಸಿ ಸಧ್ಯದಲ್ಲೆ ಘಟಕ ಕಾರ್ಯಾರಂಭಿಸಲಿದೆ.

2020ರಲ್ಲಿ ಬೀರೂರು ಹೋಬಳಿ ಬಾಕಿನಕೆರೆ ಸಮೀಪ ಹಿರಿಯಂಗಳ ವ್ಯಾಪ್ತಿಯ ಅರಣ್ಯ ಇಲಾಖೆ ನೆಡು ತೋಪಿನ ಬಳಿ ಸರ್ವೆ ನಂ. 434 ಮತ್ತು 435ರ ಸರ್ಕಾರಿ ಭೂಮಿಯ 8.20 ಎಕರೆಯಲ್ಲಿ ಘಟಕ ಸ್ಥಾಪನೆಗೆ ಅನುಮೋದನೆ ದೊರೆತು ಮಂಜೂರಾದ ಬಳಿಕ ಪುರಸಭೆ ಜಾಗ ವಶಕ್ಕೆ ಪಡೆದು ₹30 ಲಕ್ಷ ವ್ಯಯಿಸಿ ಕಾಂಪೌಂಡ್ ನಿರ್ಮಿಸಿ, ಘಟಕ ಸ್ಥಾಪನೆಗೆ ಮುಂದಾದರೂ ಡಿಪಿಆರ್ ಅನುಮೋದನೆ ಸಿಗದೆ ಸಿವಿಲ್ ಕಾಮಗಾರಿ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿತ್ತು.

2024ರ ನವೆಂಬರ್‌ ನಲ್ಲಿ ಮತ್ತೆ ಕಾಮಗಾರಿಗೆ ಚಾಲನೆ ದೊರೆತು ಈಗ ಘಟಕ ಸ್ಥಾಪನೆ ಬಹುತೇಕ ಪೂರ್ಣ ಗೊಂಡಿದೆ. ಚರಂಡಿ ನಿರ್ಮಾಣ, ಯಂತ್ರೋಪಕರಣ ಅಳವಡಿಕೆ ಕೆಲಸ ಬಾಕಿ ಇದೆ. ಹಸಿಕಸ, ಒಣಕಸ ಬೇರ್ಪಡಿಸಲು ಸಂಸ್ಕರಣಾ ಘಟಕ, ವಾಚ್‌ಮನ್ ನಿವಾಸ ಪೂರ್ಣಗೊಂಡಿದ್ದು ಸೆಪ್ಟೆಂಬರ್ ಮಧ್ಯಭಾಗದ ಹೊತ್ತಿಗೆ ಸಿವಿಲ್ ಕಾಮಗಾರಿ ಪೂರ್ಣವಾಗುವ ನಿರೀಕ್ಷೆ ಇದೆ.ಒಣಕಸ ಬೇರ್ಪಡಿಸುವ ಎಂಆರ್‌ ಎಫ್ (ಮೆಟೀರಿಯಲ್ ರಿಕವರಿ ಫೆಸಿಲಿಟಿ) ಅಳವಡಿಕೆಯಾದರೆ, ಆರ್‌ ಡಿಎಫ್ (ರೆಫ್ಯೂಸ್ಡ್ ಡಿರೈವ್ಡ್ ಫ್ಯೂಯೆಲ್) ದೊರೆಯುತ್ತದೆ. ಈ ತ್ಯಾಜ್ಯ ಉತ್ಪನ್ನಕ್ಕೆ ಸಿಮೆಂಟ್ ಕಂಪನಿ ಮತ್ತು ವಿದ್ಯುತ್ ಘಟಕಗಳಲ್ಲಿ ಬೇಡಿಕೆ ಇದೆ.

ಹಸಿ ಕಸವನ್ನು ಅದಕ್ಕಾಗಿಯೇ ಸ್ಥಾಪಿಸಿದ ಪ್ಲಾಟ್‌ ಫಾರಂನಲ್ಲಿ ಹಾಕಿ ಕೆಲವು ದಿನಗಳು ಬಿಟ್ಟರೆ ಗೊಬ್ಬರ ತಯಾರಾಗುತ್ತದೆ. ಅದನ್ನು ಟ್ರಾಮೆಲ್ ಯಂತ್ರದ ಮೂಲಕ ಜರಡಿಯಾಡಿ ಗ್ರೇಡಿಂಗ್ ಮಾಡಿ 4 ಮಿ.ಮೀ ಅಥವಾ ಅದಕ್ಕಿಂತ ಕಡಿಮೆ ವ್ಯಾಸದ ಗೊಬ್ಬರ ಉತ್ಪಾದಿಸಿ ಅದನ್ನು ಕೃಷಿ ಇಲಾಖೆ ಅನುಮೋದನೆ (ನೈಟ್ರೋಜನ್, ಫಾಸ್ಫರಸ್, ಕ್ಯಾಲ್ಸಿಯಂ ಅಥವಾ ಪೊಟ್ಯಾಷ್ ಅಂಶಗಳ ಆಧಾರದಲ್ಲಿ) ಮತ್ತು ದರ ನಿಗದಿ ಮೇರೆಗೆ ಕೃಷಿಯಲ್ಲಿ ಗೊಬ್ಬರವಾಗಿ ಉಪ ಯೋಗಿಸಲು ನೆರವಾಗುತ್ತದೆ.

ಈ ಮೊದಲು ಇದ್ದ ಹಸಿಕಸ, ಒಣಕಸ ಎನ್ನುವ 2 ವಿಧಕ್ಕೆ 2023ರ ತಿದ್ದುಪಡಿ ನಂತರ ಜನರು 3 ವಿಧ ದಲ್ಲಿ ಕಸ ಬೇರ್ಪಡಿಸಬೇಕು (ಹಸಿ, ಒಣ ಮತ್ತು ಡೊಮೆಸ್ಟಿಕ್ ಹಜಾರ್ಡಸ್ ವೇಸ್ಟ್). 3ನೇ ವಿಧದ ಕಸ ವಿಲೇವಾರಿಯಿಂದ ಪುರಸಭೆಗೆ ಆದಾಯ ಸಿಗಲಿದೆ ಎನ್ನುತ್ತಾರೆ ಪರಿಸರ ಎಂಜಿನಿಯರ್ ಮಹಮದ್ ನೂರುದ್ದೀನ್.ಪುರಸಭೆ ಸ್ವಚ್ಛ ಭಾರತ್ ಮಿಷನ್ ಅನುದಾನದಲ್ಲಿ ಒಂದು ಜೆಸಿಬಿ, ಒಂದು ಟ್ರ್ಯಾಕ್ಟರ್, 2 ಆಟೊ ಟಿಪ್ಪರ್ ಖರೀದಿಸಿದೆ. ನಿತ್ಯ 5 ಆಟೊ ಟಿಪ್ಪರ್, 3 ಟ್ರ್ಯಾಕ್ಟರ್ ಕಸ ಸಂಗ್ರಹಿಸುತ್ತಿದೆ.ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ಯಗಟಿ ರಸ್ತೆ ಮುತ್ತಿನಕಟ್ಟೆಯ ಸಮೀಪ ಆಶ್ರಯ ಬಡಾವಣೆಯಲ್ಲಿ ಸುರಿದು ಬೆಂಕಿ ಹಾಕ ಲಾಗುತ್ತಿದೆ. ಇದರಿಂದ ಪರಿಸರ ಮತ್ತು ಸುತ್ತಲಿನ ಕೃಷಿ ವ್ಯವಸ್ಥೆಗೆ ಹಾನಿ ಯಾಗುತ್ತದೆ ಎನ್ನುವುದು ಅಲ್ಲಿನ ರೈತರ ದೂರು. ಇಲ್ಲಿ ಸಂಗ್ರಹಿಸುವ ಘನ ತ್ಯಾಜ್ಯದ ತೆರವಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಆರೇಳು ತಿಂಗಳಲ್ಲಿ ಈ ಕಸ ತೆರವುಗೊಳ್ಳುವ ವಿಶ್ವಾಸವಿದೆ ಎನ್ನುತ್ತವೆ ಪುರಸಭೆ ಮೂಲಗಳು.ಘನತ್ಯಾಜ್ಯ ವಿಲೇವಾರಿ ವೈಜ್ಞಾನಿಕ ಘಟಕ ಸ್ಥಾಪನೆ ಕಾಮಗಾರಿ ಬಹುತೇಕ ಮುಗಿದಿದ್ದು, ಯಂತ್ರೋ ಪಕರಣ ಜೋಡಣೆ ಸೇರಿದಂತೆ ಉಳಿದ ಕಾಮಗಾರಿ ಬೇಗ ಪೂರ್ಣಗೊಳಿಸುವ ಯತ್ನ ನಡೆದಿದೆ ಎನ್ನುತ್ತಾರೆ ಪುರಸಭಾಧ್ಯಕ್ಷೆ ಭಾಗ್ಯಲಕ್ಷ್ಮಿ.

-- ಬಾಕ್ಸ್--ಶಾಶ್ವತ ಪರಿಹಾರಕ್ಕೆ ಯತ್ನ ‘ತ್ಯಾಜ್ಯ ವಿಲೇವಾರಿ ಘಟಕದಲ್ಲಿ ₹1 ಕೋಟಿ ವೆಚ್ಚದಲ್ಲಿ 2 ಯಂತ್ರಗಳು ಅಳವಡಿಕೆಯಾಗಬೇಕಿದ್ದು, ಸಿವಿಲ್ ಕಾಮಗಾರಿ ಮುಕ್ತಾಯದ ನಂತರ ಜಿಲ್ಲಾಧಿಕಾರಿ ಕಚೇರಿಗೆ ವರ್ಕ್ ಆರ್ಡರ್ ಸಲ್ಲಿಸಬೇಕಿದೆ. ಯಂತ್ರೋಪ ಕರಣಗಳ ಹಣ ಸ್ವಚ್ಛ ಭಾರತ ಯೋಜನೆಯಲ್ಲಿ ದೊರೆಯಲಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಘಟಕ ಸುತ್ತಮುತ್ತಲಿನ ಪ್ರದೇಶದ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವ ಇಸಿ ( ಎನ್ವಿರಾನ್ಮೆಂಟ್ ಕ್ಲಿಯರೆನ್ಸ್) ಪತ್ರ ಲಭಿಸಬೇಕಿದೆ.

-- ಕೋಟ್‌--

ಒಟ್ಟಾರೆ ಘಟಕ ಸ್ಥಾಪನೆಗೆ ಇದ್ದ ಅಡೆತಡೆಗಳು ದೂರವಾಗಿದ್ದು, ಡಿಸೆಂಬರ್ ಅಥವಾ 2026ರ ಜನವರಿ ಹೊತ್ತಿಗೆ ಘಟಕ ಕಾರ್ಯಾರಂಭ ಮಾಡಬಹುದು ಎನ್ನುವ ನಿರೀಕ್ಷೆ ಇದೆ. ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಬೇಕಾದ ಎಲ್ಲಾ ರೀತಿ ಸಿದ್ಧತೆ ಮಾಡಿಕೊಂಡಿದೆ. ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವ ಯತ್ನ ನಡೆದಿದೆ

ಜಿ.ಪ್ರಕಾಶ್, ಮುಖ್ಯಾಧಿಕಾರಿ31 ಬೀರೂರು 02ಬೀರೂರು ಹೋಬಳಿ ಹಿರಿಯಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀರೂರು ಪುರಸಭೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣಾ ಘಟಕ