ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಬಾಣಂತಿಯರನ್ನು ಮನೆಯಿಂದ ಹೊರಗಡೆ ಇಡುವ ಕೆಟ್ಟ ಆಚರಣೆ ನಿಲ್ಲಿಸಬೇಕು. ಮನೆಗಳಲ್ಲೇ ಬಾಣಂತಿ, ಮಕ್ಕಳನ್ನು ಸುರಕ್ಷಿತವಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದರು.ಕೊರಟಗೆರೆ ತಾಲೂಕಿನ ಬಿಸಾಡಿಹಟ್ಟಿ ಗ್ರಾಮದ ಕೃಷ್ಣ ಕುಟೀರದಲ್ಲಿದ್ದ ಬಾಣಂತಿ ಮತ್ತು ಮಕ್ಕಳನ್ನು ಮನೆಗೆ ಸೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಮೊದಲ ಆದ್ಯತೆಯಾಗಿದೆ. ಹೆಣ್ಣು ಮಕ್ಕಳು ವಿದ್ಯಾವಂತ, ಆರೋಗ್ಯವಂತರಾಗಿ ಮೌಢ್ಯರಹಿತ ಸಮಾಜದಲ್ಲಿ ಸಂತೋಷದಿಂದ ಬದುಕಬೇಕು ಎಂಬುದೇ ಆಯೋಗದ ಆಶಯವಾಗಿದೆ ಎಂದು ತಿಳಿಸಿದರು.ಒಂದು ತಿಂಗಳ ಹಿಂದಷ್ಟೇ ಈ ಗ್ರಾಮಕ್ಕೆ ಭೇಟಿ ನೀಡಿ ಕೃಷ್ಣ ಕುಟೀರದಲ್ಲಿದ್ಧ ಬಾಣಂತಿ ಮತ್ತು ಮಕ್ಕಳ ಆರೋಗ್ಯವನ್ನು ವಿಚಾರಿಸಿ ಮರಳಿ ಅವರ ಮನೆಗೆ ಸೇರಿಸಲು ಅವರ ಕುಟುಂಬ, ಗ್ರಾಮಸ್ಥರ ಮನಹೊಲಿಸಲಾಗಿತ್ತು. ಆದರೆ ಅವರ ಮನೆಗಳು ಮಳೆ ಬಂದರೆ ಸೋರುವಸ್ಥಿತಿಯಲ್ಲಿ ಇದ್ದುದರಿಂದ ಬಾಣಂತಿ ಮತ್ತು ಮಕ್ಕಳನ್ನು ಮನೆಗೆ ಸೇರಿಸಲು ಸಾಧ್ಯವಾಗಿರಲಿಲ್ಲ. ತಾಪಂ, ತಾಲೂಕು ಆಡಳಿತ ಹಾಗೂ ಗ್ರಾಪಂಯವರೊಂದಿಗೆ ಚರ್ಚಿಸಿ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದು, ಬಾಣಂತಿಯರ ಮನೆಗೆ ಬೇಕಾದ ಸೌಕರ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಕೃಷ್ಣ ಕುಟೀರದಲ್ಲಿದ್ದ ಬಾಣಂತಿಯರಾದ ಶಿವಮ್ಮ, ರಕ್ಷಿತಾ, ಶಾರದಾ ಅವರನ್ನು ಇಂದು ಅವರ ಮನೆಗಳಿಗೆ ಸೇರಿಸಲಾಯಿತು ಎಂದು ಹೇಳಿದರು. ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅವರನ್ನು ಶಾಲೆಗೆ ಕಳುಹಿಸುವಂತೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು. ಶಾಲಾ ಮಕ್ಕಳು ಪ್ರತಿನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಇನ್ನು ಮುಂದೆ ಯಾರೂ ಸಹ ತಮ್ಮ ಮಕ್ಕಳು, ಬಾಣಂತಿಯರನ್ನು ಕೃಷ್ಣ ಕುಟೀರದಲ್ಲಿ ಬಿಡದಂತೆ ಮನವಿ ಮಾಡಿಕೊಂಡು ಅದಕ್ಕೆ ಬೀಗ ಹಾಕಿ, ಕೃಷ್ಣ ಕುಟೀರವನ್ನು ಗ್ರಂಥಾಲಯ ಮಾಡುವಂತೆ ಪಿಡಿಒ ಲಕ್ಷ್ಮಿನಾರಾಯಣಗೆ ಕೃಷ್ಣ ಕುಟೀರದ ಬೀಗದ ಕೈ ಅನ್ನು ಹಸ್ತಾಂತರಿಸಿದರು.ಋತುಮತಿಯಾದ ಹೆಣ್ಣು ಮಕ್ಕಳನ್ನು ಶಾಲಾ ಆವರಣ ಮತ್ತು ಹೊಲಗಳಲ್ಲಿ ಬಿಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು, ಬೇಸರ ವ್ಯಕ್ತಪಡಿಸಿದರು. ಪ್ರತಿ ನಿತ್ಯ ಸಂಜೆ ವೇಳೆಯಲ್ಲಿ ಪೊಲೀಸ್ ಪೇದೆಯೊಬ್ಬರು ಹಟ್ಟಿಯಲ್ಲಿ ಬೀಟ್ ಬಂದು ಪರಿಶೀಲಿಸಬೇಕು. ಒಂದು ವೇಳೆ ಯಾರಾದರೂ ಹೆಣ್ಣು ಮಕ್ಕಳನ್ನು ಹೊರಗಡೆ ಬಿಟ್ಟಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಿಎಸ್ಐ ಚೇತನ್ ಕುಮಾರ್ಗೆ ಸೂಚನೆ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ತಹಸೀಲ್ದಾರ್ ಮಂಜುನಾಥ್, ತಾಪಂ ಇಒ ಅಪೂರ್ವ, ತೋವಿನಕೆರೆ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿ ಉಪಸ್ಥಿತರಿದ್ದರು.