ಮಹದಾಯಿ ಜಾರಿಗೆ ಬಿಜೆಪಿ ಬದ್ಧ: ಕೇಂದ್ರ ಸಚಿವ ಜೋಶಿ

| Published : Sep 07 2024, 01:39 AM IST

ಸಾರಾಂಶ

ಮಹದಾಯಿ ಯೋಜನೆಗೆ ಅರಣ್ಯ ಭೂಮಿ ಕೊಡಬೇಕೆಂಬ ಪ್ರಸ್ತಾವನೆ ಇರುವುದರಿಂದ ಹಾಗೂ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ವಿಷಯವನ್ನು ವನ್ಯ ಜೀವಿ ಮಂಡಳಿಯವರು ಮುಂದೂಡಿದ್ದಾರೆ. ಆದರೆ, ಇದು ತಿರಸ್ಕೃತಗೊಂಡಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.

ಹುಬ್ಬಳ್ಳಿ: ಬಿಜೆಪಿ ಹಾಗೂ ಎನ್‌ಡಿಎ ಮಹದಾಯಿ ಯೋಜನೆ ಜಾರಿಗೆ ಆರಂಭದಿಂದಲೂ ಪ್ರಯತ್ನ ಮಾಡುತ್ತಿದೆ. ಈ ವರೆಗೆ ಏನೇ ಪ್ರಗತಿ ಆಗಿದ್ದರೂ ಅದು ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿದ್ದು, ಮುಂದೆಯೂ ಈ ಯೋಜನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡಲಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಯ ನೀಡಿದರು.

ಜುಲೈ 31ಕ್ಕೆ ನಡೆದ ವನ್ಯ ಜೀವಿ ಮಂಡಳಿ ಸಭೆಯ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಅಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಯೋಜನೆ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದವರು ಪ್ರತಿಕ್ರಿಯೆ ಕೊಡಬೇಕಿತ್ತು. ಅವರು ಕೊಟ್ಟಿಲ್ಲ. ಯೋಜನೆಗೆ ಅರಣ್ಯ ಭೂಮಿ ಕೊಡಬೇಕೆಂಬ ಪ್ರಸ್ತಾವನೆ ಇರುವುದರಿಂದ ಹಾಗೂ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ವಿಷಯವನ್ನು ವನ್ಯ ಜೀವಿ ಮಂಡಳಿಯವರು ಮುಂದೂಡಿದ್ದಾರೆ. ಆದರೆ, ಇದು ತಿರಸ್ಕೃತಗೊಂಡಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.

ಈಗಾಗಲೇ ಮಹದಾಯಿ ವಿಚಾರವಾಗಿ ಕೇಂದ್ರ ಪರಿಸರ ಇಲಾಖೆ ಸಚಿವ ಭೂಪೇಂದ್ರ ಯಾದವ ಅವರೊಂದಿಗೆ ಮಾತನಾಡಿದ್ದೇನೆ. ಒಂದು ವೇಳೆ ರಾಜ್ಯ ಸರಕಾರ ನಿಯೋಗ ತೆಗೆದುಕೊಂಡು ಬಂದರೆ ಸಚಿವರ ಜತೆ ಚರ್ಚೆಗೆ ಏರ್ಪಾಡು ಮಾಡಲಾಗುವುದು. ಆದರೆ ಈ ವರೆಗೂ ಒಂದು ಬಾರಿಯೂ ಮಹದಾಯಿ ವಿಷಯವನ್ನು ಇಟ್ಟುಕೊಂಡು ರಾಜ್ಯ ಸರಕಾರ ಕೇಂದ್ರದ ಬಳಿ ನಿಯೋಗ ತೆಗೆದುಕೊಂಡು ಬಂದಿಲ್ಲ. ಈಗ ಬಂದರೆ ಒಳ್ಳೆಯದು. ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಪರಿಹಾರ ಕಂಡುಕೊಳ್ಳುವ ಯತ್ನವನ್ನು ಕೇಂದ್ರ ಮಾಡಲಿದೆ ಎಂದು ಹೇಳಿದರು.

ಬಿಜೆಪಿ ಮೇಲೆ ಆರೋಪ ಮಾಡುವ ನೈತಿಕತೆ ಸಿದ್ದುಗೆ ಇಲ್ಲ: ಟೆಂಗಿನಕಾಯಿ

ಹುಬ್ಬಳ್ಳಿ: ಮುಡಾ ಹಾಗೂ ವಾಲ್ಮೀಕಿ‌ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇನ್ನೊಬ್ಬರ ಬಗ್ಗೆ ಆರೋಪ‌ ಮಾಡುವ ನೈತಿಕತೆ ಇಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿನಾಕಾರಣ ಬಿಜೆಪಿಗರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಬಿಜೆಪಿಯವರ ಮೇಲೆ ಬೇರೆ ಬೇರೆ ಭ್ರಷ್ಟಾಚಾರದ ಪ್ರಕರಣಗಳಿವೆ ಎಂದು ಹೇಳುತ್ತಿದ್ದಾರೆ. ಹಳೆಯದು-ಹೊಸತು ಸೇರಿ ಎಲ್ಲ ವಿಚಾರಗಳ ಬಗ್ಗೆ ಸರ್ಕಾರ ತನಿಖೆ ನಡೆಸಲಿ. ನಾವು ಈಗಾಗಲೇ ಸ್ಪಷ್ಟ ಪಡಿಸಿದ್ದು, ತನಿಖೆಗೆ ನಮ್ಮದೇನೂ ಆಕ್ಷೇಪಣೆ ಇಲ್ಲ ಎಂದರು.ಮಹದಾಯಿ ವಿಚಾರದಲ್ಲಿ ಹೆಜ್ಜೆ ಮುಂದಿಟ್ಟಿದ್ದು ಬಿಜೆಪಿ ಮಾತ್ರ. ಈ ವಿಷಯದಲ್ಲಿ ನಾವು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ರಾಜ್ಯ ಸರ್ಕಾರ ಸಂಪೂರ್ಣ ಕೈಜೋಡಿಸುವ ಕೆಲಸ ಮಾಡಬೇಕು. ಈ ಕುರಿತು ಕಾಂಗ್ರೆಸ್ ರಾಜಕಾರಣ ಮಾಡದೇ ಪರಿಹಾರದ ಕಡೆ ಗಮನ ಹರಿಸುವ ಪ್ರಯತ್ನ ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.