ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರಾಜಕೀಯ ದುರುದ್ದೇಶದಿಂದಲೇ ವಕ್ಫ್ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ ಎಂದು ಮುಖಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.ನಗರದ ಬೂವನಹಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ ಬಿಜೆಪಿ ಗೆದ್ದರೆ ಇಸ್ಲಾಂ ಧಾರ್ಮಿಕ ಮುಖಂಡರ ಜೊತೆ ಮಾತನಾಡಿ, ಒತ್ತುವರಿಯಾಗಿರುವ ವಕ್ಫ್ ಆಸ್ತಿಯನ್ನು ವಾಪಸ್ ಕೊಡಿಸುವುದಾಗಿ ಹೇಳಿಕೆ ನೀಡಿದ್ದರು. ಅಲ್ಲದೆ ಬಿಜೆಪಿ ಅಧಿಕಾರದಲ್ಲಿ ಇದ್ದ ಅವಧಿಯಲ್ಲೇ ವಕ್ಫ್ ಆಸ್ತಿ ತೆರವು ಮಾಡಲು ಮೊದಲು ರೈತರಿಗೆ ನೋಟಿಸ್ ನೀಡಿದ್ದೇ ಬಿಜೆಪಿಯವರು. ಅವರ ಕಾಲದಲ್ಲೇ ಹೆಚ್ಚು ನೋಟಿಸ್ಗಳನ್ನು ನೀಡಲಾಗಿದೆ. ಆದರೆ ಈಗ ಅದರ ಬಗ್ಗೆ ಅವರು ಮಾತನಾಡುವುದೇ ಇಲ್ಲ. ೨೦೧೪ರಲ್ಲಿ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಿದ್ದರು. ಯಾರೆಲ್ಲಾ ಅತಿಕ್ರಮಣ ಮಾಡಿದ್ದಾರೋ ಅದೆಲ್ಲವನ್ನೂ ತೆರವುಗೊಳಿಸುತ್ತೇವೆ ಎಂದಿದ್ದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ವಕ್ಫ್ ಆಸ್ತಿ ತೆರವು ಮಾಡುವುದಾಗಿ ಅವರೇ ಹೇಳಿಕೆ ಕೊಟ್ಟಿದ್ದಾರೆ. ಆದರೆ ಈಗ ಹೋರಾಟ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಯಾರೇ ಆದರೂ ರಾಜಕೀಯಕ್ಕಾಗಿ ಇಬ್ಬಂದಿತನ ತೋರುತ್ತಿದ್ದಾರೆ. ಅಧಿವೇಶನ ಮುಂದಿಟ್ಟುಕೊಂಡು ಸದನದಲ್ಲಿ ಮಾತನಾಡಲು ಯಾವುದೇ ವಿಚಾರಗಳಿಲ್ಲ, ಇದೇ ಕಾರಣಕ್ಕೆ ಹೋರಾಟ ಮಾಡುತ್ತಿದ್ದಾರೆ. ಈಗಾಗಲೇ ಮೂರು ಉಪ ಚುನಾವಣೆಗಳಲ್ಲಿ ಗೆದಿದ್ದೇವೆ, ಅವರು ಈ ಹಿಂದೆ ಗೆದ್ದಿದ್ದ ಎರಡು ಕ್ಷೇತ್ರಗಳು ನಮ್ಮ ವಶವಾಗಿವೆ. ೨೫ ವರ್ಷಗಳ ಬಳಿಕ ಶಿಗ್ಗಾಂವಿಯಲ್ಲಿ ಗೆದ್ದಿದ್ದೇವೆ ಜೊತೆಗೆ ಚನ್ನಪಟ್ಟಣದಲ್ಲೂ ಗೆದಿದ್ದೇವೇ ಹಾಗಾಗಿ ಈಗ ಬಿಜೆಪಿಯವರು ರಾಜಕೀಯ ನಾಟಕ ಪ್ರಾರಂಭಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನೇನು ಚಳಿಗಾಲದ ಅಧಿವೇಶನ ಆರಂಭ ಆಗುತ್ತಿದೆ. ಅಲ್ಲಿ ಮಾತನಾಡಲು ಅವರಿಗೆ ವಿಷಯಗಳಿಲ್ಲ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ನಾವು ಮೂರನ್ನೂ ಗೆದ್ದಿದ್ದೇವೆ. ೨೫ ವರ್ಷಗಳ ನಂತರ ಶಿಗ್ಗಾಂವಿಯಲ್ಲಿ ಜಯ ಸಾಧಿಸಿದ್ದೇವೆ. ಚನ್ನಪಟ್ಟಣದಲ್ಲೂ ಗೆದ್ದಿದ್ದೇವೆ. ಇದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಅವರು ರಾಜಕೀಯ ನಾಟಕ ಶುರು ಮಾಡಿದ್ದಾರೆ ಎಂದು ತಿರುಗೇಟು ನೀಡಿದರು. ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತರರು ಇದ್ದರು.