ಸಾರಾಂಶ
ಈ ವೇಳೆ "ದೇಶ್ ಕೇ ಸೈನಿಕೋ ತುಮ್ ಆಗೇ ಬಡೋ ಹಮ್ ತುಮಾರೆ ಸಾತ್ ಹೈ ಭಾರತ್ ಮಾತಾ ಕಿ ಜೈ.. " ಎಂದು ಘೋಷಣೆಗಳನ್ನು ಕಾರ್ಯಕರ್ತರು ಕೂಗಿದರು.
ಹುಬ್ಬಳ್ಳಿ: ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದ ಸೈನಿಕರ ಸುರಕ್ಷತೆ ಹಾಗೂ ಸೈನಿಕರಿಗೆ ಹೆಚ್ಚಿನ ಶಕ್ತಿ ನೀಡಲೆಂದು ಪ್ರಾರ್ಥಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಉಣಕಲ್ ಸಿದ್ದಪ್ಪಜ್ಜನ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ "ದೇಶ್ ಕೇ ಸೈನಿಕೋ ತುಮ್ ಆಗೇ ಬಡೋ ಹಮ್ ತುಮಾರೆ ಸಾತ್ ಹೈ ಭಾರತ್ ಮಾತಾ ಕಿ ಜೈ.. " ಎಂದು ಘೋಷಣೆಗಳನ್ನು ಕಾರ್ಯಕರ್ತರು ಕೂಗಿದರು.ಬಳಿಕ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದೇಶದ 140 ಕೋಟಿ ಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯಾವುದೇ ಜಾತಿ, ಮತ, ಭೇದ, ರಾಜಕೀಯ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಗಟ್ಟಿಯಾಗಿ ದೇಶದ ಸೈನಿಕರ ಪರವಾಗಿ ನಾವಿರಬೇಕಿದೆ. ಇದನ್ನು ವಿರೋಧ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಈಗ ನವ ಭಾರತ ಇದೆ. ವಿಶ್ವದಲ್ಲೇ ಅತ್ಯಂತ ಸೈನಿಕ ಬಲ ಸಾಮರ್ಥ್ಯ ಹೊಂದಿದ ನಾಲ್ಕನೆಯ ರಾಷ್ಟ್ರವಾಗಿದೆ. ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲಾದ ಅನೇಕ ಉಗ್ರ ಸಂಘಟನೆಗಳನ್ನು ಪಾಕಿಸ್ತಾನ ಪೋಷಿಸುತ್ತಾ ಬಂದಿರುವುದು ಜಗತ್ತಿಗೆ ಗೊತ್ತಿರುವ ವಿಷಯ. ಕಾಶ್ಮೀರ ಕಣಿವೆಯಲ್ಲಿ ಕಣಿವೆಯಲ್ಲಿ ಮೇಲಿಂದ ಮೇಲೆ ಭಯೋತ್ಪಾದಕರ ಮೂಲಕ ದಾಳಿ ನಡೆಸುತ್ತಾ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ದಾಳಿಯ ಉತ್ತರ ಭಯಂಕರ ಘೋರವಾಗಿದೆ. ಉಗ್ರರನ್ನು ಮಣ್ಣಲ್ಲಿ ಮಣ್ಣು ಮಾಡುತ್ತೇವೆ ಎಂದು ಶಪಥ ಮಾಡಿದ್ದರು. ಅದರಂತೆ ಏರ್ಫೋರ್ಸ್, ಭೂ ಸೇನಾ, ವಾಯು ಸೇನೆಯ ಸೈನಿಕರು ದಿಟ್ಟ ಉತ್ತರವನ್ನು ನೀಡಿದ್ದಾರೆ. ಸೈನಿಕರ ಶಕ್ತಿ ಇಮ್ಮಡಿಯಾಗಲಿ. ದೇಶದ ಪರವಾಗಿ ಹೋರಾಡಲು ಇನ್ನಷ್ಟು ಶಕ್ತಿಯನ್ನು ದೇವರು ದಯಪಾಲಿಸಲಿ ಹಾಗೂ ಸೈನಿಕರು ಸುರಕ್ಷತೆಯಿಂದ ಇರಲಿ ಎಂಬ ಉದ್ದೇಶದಿಂದ ಪೂಜೆ ಸಲ್ಲಿಸಲಾಗಿದೆ ಎಂದರು.ಈ ವೇಳೆ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಪಾಲಿಕೆಯ ಸದಸ್ಯರಾದ ಉಮೇಶಗೌಡ ಕೌಜಗೇರಿ, ರೂಪಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರವೀಣ ಪವಾರ, ರಾಮನಗೌಡ ಶೆಟ್ಟನಗೌಡರು, ಮಹೇಂದ್ರ ಕೌತಾಳ, ಸಿದ್ದು ಮೊಗಲಿಶೆಟ್ಟರ, ಸೋಮು ಪಾಟೀಲ, ಅಕ್ಕಮ್ಮ ಹೆಗಡೆ, ವರುಷ ರಾಮ ಹೊಂಬಳ ಮೊದಲಾದವರು ಇದ್ದರು.