ಮತಗಳ್ಳತನ ಮೂಲಕ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ: ಉದಯ್ ಭಾನು ಚಿಬ್ ಆರೋಪ

| Published : Sep 09 2025, 01:00 AM IST

ಮತಗಳ್ಳತನ ಮೂಲಕ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ: ಉದಯ್ ಭಾನು ಚಿಬ್ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಹುಲ್ ಗಾಂಧಿ ಬಿಹಾರದಲ್ಲಿ ಮತ ಕಳ್ಳತನ ವಿರುದ್ಧ ಯಾತ್ರೆಗೆ ಜನರು ಬೆಂಬಲ ನೀಡಿದ್ದಾರೆ. ಇವತ್ತು ದೇಶಾದ್ಯಂತ ಇದರ ಬಗ್ಗೆ ಚರ್ಚೆ ಆಗುತ್ತಿದೆ. ಅದರಂತೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ವೋಟ್ ಚೋರಿ ಅರಿವು ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ಕೋಲಾರ

ಮತಗಳ್ಳತನದ ಮೂಲಕವೇ ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅವರು ಅಧಿಕಾರದಲ್ಲಿ ಇರಲು ಯಾವುದೇ ನೈತಿಕತೆ ಇಲ್ಲ, ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿ ತಾಲೂಕು, ವಾರ್ಡ್‌ಗಳಲ್ಲಿ ಜನಜಾಗೃತಿ ಮೂಡಿಸಬೇಕು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಬಾನು ಚಿಬ್ ತಿಳಿಸಿದರು.

ನಗರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಮತಗಳ್ಳತನ ವಿರುದ್ಧ ಜನಜಾಗೃತಿ ಸಭೆ ಹಾಗೂ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರ ಸರ್ಕಾರವು ಮತಗಳ್ಳತನದ ಮೂಲಕ ಅಧಿಕಾರ ಹಿಡಿದಿರುವುದು ಇದೀಗ ಸಾಬೀತಾಗುತ್ತಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಬಹಿರಂಗಪಡಿಸಿದ ಬಳಿಕ ಒಂದೊಂದೇ ಮತಗಳ್ಳತನ ಪ್ರಕರಣಗಳು ಬಯಲಿಗೆ ಬರುತ್ತಿವೆ, ಯುವ ಕಾಂಗ್ರೆಸ್ ನೇತೃತ್ವದಲ್ಲಿ ತಮ್ಮ ತಾಲೂಕು ಮತ್ತು ವಾರ್ಡ್ ಸಭೆಗಳಲ್ಲಿ ಪರಿಶೀಲನೆ ಮಾಡಬೇಕು ಎಂದರು.

ಚುನಾವಣಾ ಆಯೋಗದ ನಿಯಮಗಳನ್ನು ಬದಲಿಸುವ ಮೂಲಕ ಮತಗಳ್ಳತನವನ್ನು ಬಿಜೆಪಿ ಆರಂಭಿಸಿದೆ, ರಾಜ್ಯದಲ್ಲಿ ಸಹ ಮತಗಳನ್ನು ಕಳ್ಳತನ ಮಾಡಲಾಗಿದೆ. ಇನ್ನು ಕೆಲವೆಡೆ ಬದುಕಿದ್ದವರನ್ನು ಮೃತಪಟ್ಟಿದ್ದಾರೆ ಎಂದು ಹೇಳಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ, ರಾಹುಲ್ ಗಾಂಧಿ ಆರೋಪ ಮಾಡಿದರೆ ಚುನಾವಣಾ ಆಯೋಗ ಅದಕ್ಕೆ ಉತ್ತರ ನೀಡಬೇಕಾಗಿತ್ತು. ಆದರೆ ಬಿಜೆಪಿ ನಾಯಕರು ಉತ್ತರ ನೀಡುತ್ತಿದ್ದಾರೆ, ಇದನ್ನು ನೋಡಿದರೆ ಬಿಜೆಪಿ ನಿಜವಾಗಿಯೂ ಮತಗಳ್ಳತನದಲ್ಲಿ ಭಾಗಿಯಾಗಿದ್ದು ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಯಲಿಗೆ ತಂದಿರುವ ವೋಟ್ ಚೋರಿ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಯಾವ ಬೂತ್ ನಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಆಗಿದೆ ಎಂದು ಗಮನ ಇಡಬೇಕು, ರಾಹುಲ್ ಗಾಂಧಿ ಬಿಹಾರದಲ್ಲಿ ಮತ ಕಳ್ಳತನ ವಿರುದ್ಧ ಯಾತ್ರೆಗೆ ಜನರು ಬೆಂಬಲ ನೀಡಿದ್ದಾರೆ. ಇವತ್ತು ದೇಶಾದ್ಯಂತ ಇದರ ಬಗ್ಗೆ ಚರ್ಚೆ ಆಗುತ್ತಿದೆ. ಅದರಂತೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ವೋಟ್ ಚೋರಿ ಅರಿವು ಮೂಡಿಸಬೇಕು ಎಂದರು.

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ, ಜಿಲ್ಲಾಧ್ಯಕ್ಷ ಸೈಯದ್ ಅಪ್ರಿದ್, ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ, ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ಭವ್ಯ,, ರಾಜ್ಯ ಪ್ರಧಾನ ಕಾರ್ಯದರ್ಶಿ ಭರತ್ ರಾಯ್, ಯುವ ಮುಖಂಡ ನವೀನ್, ಅಬ್ದುಲ್ ಖಯ್ಯುಂ, ಅನ್ವರ್, ನೂರ್, ಜಿಲ್ಲಾ ಉಪಾಧ್ಯಕ್ಷ ವಾಸುರೆಡ್ಡಿ, ಪ್ರಧಾನ ಕಾರ್ಯದರ್ಶಿ ರಿಯಾಜ್ ಗೋರು, ಆಸೀಫ್, ಸುಹೈಲ್, ಅರ್ಬಾಜ್ ಇದ್ದರು.