ಸಾರಾಂಶ
ಮಹಾಲಿಂಗಪುರ : ಭಾರತೀಯ ಜನತಾ ಪಕ್ಷ ಹೆಮ್ಮರವಾಗಿ ಬೆಳೆಯಲು ಒಬ್ಬರೇ ಕಾರಣರಲ್ಲ. ಅಸಂಖ್ಯಾತ ನಾಯಕರು, ಕಾರ್ಯಕರ್ತರು ಕಾರಣರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.
ಪಕ್ಷದ ಆಪ್ತರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಭಾನುವಾರ ಮಹಾಲಿಂಗಪುರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ದೇಶವಿರಲಿ ಅಥವಾ ಪಕ್ಷವಿರಲಿ ಸಿದ್ಧಾಂತ ಮತ್ತು ಪಕ್ಷನಿಷ್ಠೆಗೆ ಬದ್ಧರಾಗಿ, ಜನತೆಯ ಹಿತಬಯಸಿ ಕೆಲಸ ಮಾಡಬೇಕು. ರಾಜಪ್ರಭುತ್ವದಲ್ಲಿ ವಂಶಾಡಳಿತ ಕಾಣುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಪ್ರಭು. ಇದು ಪ್ರಜಾಪ್ರಭುತ್ವ ಮೂಲ ಆಶಯವೂ ಕೂಡ ಆಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಈ ಮುಂಚೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ರಾಷ್ಟ್ರೀಯ ನಾಯಕರಾದ ಲಾಲಕೃಷ್ಣ ಅಡ್ವಾಣಿ ಮತ್ತು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಜಿ ಇನ್ನೂ ಅನೇಕರು ವೈಯಕ್ತಿಕ ಜೀವನ ಬದಿಗಿಟ್ಟು ಪಕ್ಷ ಕಟ್ಟುವಲ್ಲಿ ಶ್ರಮವಹಿಸಿಲ್ಲವೇ ? ಎಂದು ಪ್ರಶ್ನಿಸಿದರು.ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದಲ್ಲಿ ನಾವೆಲ್ಲ ವರಿಷ್ಠರ ಸಲಹೆ-ಸೂಚನೆಗಳಿಗೆ ಬೆಲೆ ನೀಡಬೇಕು. ಅಂದರೆ ಮಾತ್ರ ನಿರ್ದಿಷ್ಟ ಗುರಿ ತಲುಪಲು ಸಾಧ್ಯ. ಇಲ್ಲವಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ನಗಣ್ಯವಾಗುತ್ತೇವೆ. ಕಳೆದ ಚುನಾವಣೆಯಲ್ಲಿ ಜನ ನಮಗೆ ಈ ಪಾಠ ಕಲಿಸಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಪುನಃಶ್ಚೇತನಕ್ಕೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪಕ್ಷದಲ್ಲಿ ಈಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕಾರ್ಯಕರ್ತರು ಬೇಸರಗೊಂಡು ಇದೇ ಪ್ರಶ್ನೆಗಳನ್ನು ಕೇಳುತ್ತಿದ್ದು, ಉತ್ತರಿಸದೆ ನಾವು ಅಸಹಾಯಕರಾಗಿದ್ದೇವೆ. ನಾನು ವೈಯಕ್ತಿಕವಾಗಿಯೂ ಎರಡೂ ಬಣಗಳ ನಾಯಕರ ಜೊತೆಗೆ ಮಾತುಕತೆ ನಡೆಸಿದ್ದು, ಪ್ರಗತಿಯಲ್ಲಿದೆ ಎಂದು ಬಿವೈವಿ, ಯತ್ನಾಳ ಹೆಸರಿಸದೇ ತಿಳಿಸಿದರು.