ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವಿಫಲತೆ, ಭ್ರಷ್ಟಾಚಾರ, ಅಕ್ರಮಗಳ ವಿರುದ್ಧ ಸಮರ ಸಾರಿ ಬಿಜೆಪಿ ಕೈಗೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ದೇಶದ ಏಕೈಕ ಚಿನ್ನ ಉತ್ಪಾದನೆಯ ಕಂಪನಿ ಹಟ್ಟಿಚಿನ್ನದ ಗಣಿಯನ್ನು ಹೊಂದಿರುವ ಲಿಂಗಸುಗೂರು ತಾಲೂಕಿನಿಂದ ಹೊರಡಲು ಸಕಲ ಸಿದ್ಧತೆಗಳನ್ನು ಪೂರೈಸಿಕೊಂಡಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವಿಫಲತೆ, ಭ್ರಷ್ಟಾಚಾರ, ಅಕ್ರಮಗಳ ವಿರುದ್ಧ ಸಮರ ಸಾರಿ ಬಿಜೆಪಿ ಕೈಗೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ದೇಶದ ಏಕೈಕ ಚಿನ್ನ ಉತ್ಪಾದನೆಯ ಕಂಪನಿ ಹಟ್ಟಿಚಿನ್ನದ ಗಣಿಯನ್ನು ಹೊಂದಿರುವ ಲಿಂಗಸುಗೂರು ತಾಲೂಕಿನಿಂದ ಹೊರಡಲು ಸಕಲ ಸಿದ್ಧತೆಗಳನ್ನು ಪೂರೈಸಿಕೊಂಡಿದೆ.

ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದರೂ ದುರ್ಬಳಕೆ ಆದ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ.ವಾಪಸ್‌ ಆ ನಿಗಮಕ್ಕೆ ಜಮೆ ಆಗಬೇಕು ಎಂದು ಆಗ್ರಹಿಸಿ, ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಿಂಗಸುಗೂರಿನಿಂದ ಬಳ್ಳಾರಿವರೆಗೆ 175 ಕಿ.ಮೀ. ದೂರ ಪಾದಯಾತ್ರೆ ಸಾಗಲಿದೆ. ಪಾದಯಾತ್ರೆಯ ಉದ್ಘಾಟನಾ ಕಾರ್ಯಕ್ರಮವು ಲಿಂಗಸುಗೂರು ಪಟ್ಟಣದ ಬೈಪಾಸ್‌ ರಸ್ತೆ ಸಮೀಪದ ಜೆ.ಕೆ.ರೆಸಿಡೆನ್ಸಿ ಮುಂಭಾಗದಲ್ಲಿನ ಮೈದಾನದಲ್ಲಿ ನಡೆಯಲಿದೆ.ಗಣ್ಯರ ದಂಡು ಆಗಮನ:

ಯಾತ್ರೆ ಹಿನ್ನೆಲೆಯಲ್ಲಿ ಲಿಂಗಸುಗೂರಿಗೆ ಗಣ್ಯರ ದಂಡೇ ಆಗಮಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ರಾಜ್ಯ ಸಹ ಉಸ್ತುವಾರಿ ಪಿ.ಸುಧಾಕರ್ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ, ಮಾನಪ್ಪ ವಜ್ಜಲ್, ಡಾ.ಎಸ್.ಶಿವರಾಜ್ ಪಾಟೀಲ್, ರಾಜ್ಯ ಉಪಾಧ್ಯಕ್ಷ ರಾಜುಗೌಡ ನಾಯಕ, ಮಾಜಿ ಸಚಿವ ಶಿವನಗೌಡ ನಾಯಕ, ಪಕ್ಷದ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಮತ್ತು ಕಾರ್ಯಕರ್ತರು ಸೇರಿ ಸುಮಾರು 40 ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ.

ಭೂರಿ ಭೋಜನ:

ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವವರಿಗೆ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಊಟಕ್ಕೆ ಉಗ್ಗಿ, ಪಲ್ಯ, ಅನ್ನ, ಸಾಂಬಾರ್ ಮಾಡಲಾಗುತ್ತಿದೆ.ದೇವಸ್ಥಾನಕ್ಕೆ ಭೇಟಿ, ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ:

ಮಂಗಳವಾರ ಬೆಳಗ್ಗೆ 8ಕ್ಕೆ ಲಿಂಗಸುಗೂರು ತಾಲೂಕಿನ ಗುರುಗುಂಟಾ ಅಮರೇಶ್ವರ ದೇವಸ್ಥಾನಕ್ಕೆ ಗಣ್ಯರು ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿಂದ ದೇವರಬೂಪೂರು ಬೃಹನ್ಮಠ ಮಠಕ್ಕೆ ಭೇಟಿ ನೀಡಿ, ಅಲ್ಲಿಂದ ಗಜ್ಜಲಗಟ್ಟಾ ವೀರನಾಗಮ್ಮ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ, ಲಿಂಗಸುಗೂರು ಪಟ್ಟಣಕ್ಕೆ ಆಗಮಿಸಲಿರುವ ಪಕ್ಷದ ಮುಖಂಡರು ಪಟ್ಟಣದ ಗಡಿಯಾರ ವೃತ್ತದಲ್ಲಿರುವ ಶ್ರೀಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬೆಳಗ್ಗೆ 10:30ಕ್ಕೆ ವೇದಿಕೆ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.

ಮಧ್ಯಾಹ್ನ ಪಾದಯಾತ್ರೆಯನ್ನು ಆರಂಭಿಸಿ ಸಂಜೆ 4 ಕ್ಕೆ ಲಿಂಗಸುಗೂರು ಹೈವೇ ಸಮೀಪದಲ್ಲಿ ಚಹಾ ಸೇವನೆ ಮಾಡಲಿದ್ದಾರೆ. ಅಲ್ಲಿಂದ ಸಂಜೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮಕ್ಕೆ ಯಾತ್ರೆ ತಲುಪಲಿದ್ದು, ರಾತ್ರಿ ಸುಪ್ರಸಿದ್ಧ ಶ್ರೀ ಘನಮಠೇಶ್ವರ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮೊದಲ ದಿನ ಯಾತ್ರೆ 10 ಕಿಮೀ ದೂರ ಕ್ರಮಿಸಲಿದೆ.ಪಾದಯಾತ್ರೆ ಏಕೆ?:ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದರೂ ದುರ್ಬಳಕೆ ಆದ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ.ವಾಪಸ್‌ ಆ ನಿಗಮಕ್ಕೆ ಜಮೆ ಆಗಬೇಕು. ಜೊತೆಗೆ, ರಾಜ್ಯದ ಬರಗಾಲ ನಿರ್ವಹಣೆಯಲ್ಲಿ ಕಾಂಗ್ರೆಸ್‌ ಸರ್ಕಾರದ ವೈಫಲ್ಯ, ಕೆಪಿಎಸ್‌ಸಿ ಅಕ್ರಮ, ಗೃಹಲಕ್ಷ್ಮೀ ಹಣದ ದುರ್ಬಳಕೆ ಸೇರಿದಂತೆ ಸರ್ಕಾರದ ಹಲವು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಲಾಗುತ್ತಿದೆ.

ನಗರವೆಲ್ಲಾ ಕೆಸರೀಮಯ:

ಪಾದಯಾತ್ರೆಗಾಗಿ ಲಿಂಗಸುಗೂರು ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಈಗಾಗಲೇ ಬೃಹತ್ ವೇದಿಕೆ ಸಜ್ಜುಗೊಂಡಿದೆ. ವೇದಿಕೆ ಅಕ್ಕ-ಪಕ್ಕ ಸೇರಿ ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ಪಕ್ಷದ ಬ್ಯಾನರ್‌, ಬಾವುಟ ಹಾಗೂ ಪ್ಲೆಕ್ಸ್‌ಗಳನ್ನು ಹಾಕಲಾಗಿದ್ದು, ಮೆರವಣಿಗೆಯ ಮಾರ್ಗ ಕೇಸರಿಮಯವಾಗಿದೆ. ನಗರದ ತುಂಬೆಲ್ಲಾ ಬಿಜೆಪಿ ನಾಯಕರಿಗೆ ಸ್ವಾಗತ ಕೋರುವ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕಲಾಗಿದೆ. ಪಾದಯಾತ್ರೆ ಹಿನ್ನೆಲೆಯಲ್ಲಿ ಇಡೀ ಲಿಂಗಸುಗೂರು ಪಟ್ಟಣ ಕೇಸರೀಮಯವಾಗಿದೆ.