ಸಾರಾಂಶ
ಪಕ್ಷದ ನೂತನ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿವರ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೆಂಕಟರೆಡ್ಡಿ ಅವರು ಮಾತನಾಡಿ, ದೇಶದ ಸಮಗ್ರತೆ, ರಕ್ಷಣೆಗಾಗಿ ಬಿಜೆಪಿ ಬೆಂಬಲಿಸಬೇಕೆಂದು ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು
ಕನ್ನಡಪ್ರಭ ವಾರ್ತೆ ಯಾದಗಿರಿ
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಪಕ್ಷವನ್ನು ಎಲ್ಲರೂ ಒಗ್ಗಟ್ಟಾಗಿ ಸಂಘಟನೆ ಮಾಡುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಅಗತ್ಯ ಸಹಕಾರ ನೀಡಬೇಕು. ಅಂದಾಗ ಮಾತ್ರ ನಾವು ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.ನಗರದ ತಮ್ಮ ಜನ ಸಂಪರ್ಕ ಕಚೇರಿಗೆ ಆಗಮಿಸಿದ್ದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎಲ್ಲಾ ವರ್ಗದ ಪರ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ನಾನಾ ಕಾರಣಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಯಿತು. ದೇಶದಲ್ಲಿ ಪ್ರಧಾನಿ ಮೋದಿ ಅವರು ಇಡೀ ವಿಶ್ವವೇ ಮೆಚ್ಚುವಂತಹ ಶಾಶ್ವತ ಯೋಜನೆಗಳನ್ನು ಜನರಿಗೆ ಜಾರಿಗೆ ತರುವ ಮೂಲಕ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿದ್ದ ಪರಿಣಾಮ ಪಕ್ಷವು ಸದೃಢವಾಗಿದೆ ಎಂದು ತಿಳಿಸಿದರು.ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಲಾಭ ಇಡೀ ದೇಶದ ಜನರು ಪಡೆದಿದ್ದಾರೆ. ಕಾರ್ಯಕರ್ತರು ಒಗ್ಗಟ್ಟಾಗಿ ಅವುಗಳ ಬಗ್ಗೆ ಜನರಿಗೆ ತಿಳಿಸಬೇಕು. ದೇಶದ ಸಮಗ್ರತೆ, ರಕ್ಷಣೆಗಾಗಿ ಬಿಜೆಪಿ ಬೆಂಬಲಿಸಬೇಕೆಂದು ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.
ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ ಮಾತನಾಡಿ, ಪಕ್ಷದ ಹಿರಿಯರ ಹಾಗೂ ಎಲ್ಲಾ ವರ್ಗದ ಮುಖಂಡರ ಸಲಹೆ ಸೂಚನೆ ಪಡೆದು, ಶಕ್ತಿಯುತ ತಂಡ ರಚನೆ ಮಾಡಿ ಕ್ರಿಯಾಶೀಲವಾಗಿ ಪಕ್ಷ ಸಂಘಟನೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಎಲ್ಲರೂ ಬೆಂಬಲಿಸಬೇಕೆಂದು ಮನವಿ ಮಾಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಬಿಜೆಪಿ ಹಿರಿಯ ಮುಖಂಡರಾದ ಬಸವರಾಜಪ್ಪ ವಿಭೂತಿಹಳ್ಳಿ, ಮಹೇಶರೆಡ್ಡಿ ಮುದ್ನಾಳ, ಬಸವರಾಜ ಅರುಣಿ, ರಾಜಶೇಖರ ಸಾಹು ಗೂಗಲ್, ಶ್ರೀದೇವಿ ಪಾಟೀಲ್, ಬಸಣ್ಣಗೌಡ ಹಾರಣಗೇರ, ತಿರುಪತಿ ಶೇರಿ ಸಗರ, ಸನ್ನಿ ಶಹಾಪೂರ, ಮಹೇಶ ಆಲ್ದಾಳ್, ರುದ್ರಗೌಡ ಪಾಟೀಲ್, ಶರಣಗೌಡ ಕ್ಯಾತನಾಳ, ಮಲ್ಲಿಕಾರ್ಜುನ ಕಂದಕೂರ, ರಾಘವೇಂದ್ರ ಯಕ್ಚಿಂತಿ, ರಾಜು ಸ್ವಾಮಿ ಅನಂಪಲ್ಲಿ ಸೇರಿದಂತೆ ಇತರರಿದ್ದರು.