ಸಾರಾಂಶ
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ನಗರ ಅಧ್ಯಕ್ಷ ದಿನೇಶ್ ಆಮೀನ್, ಮಾಜಿ ಜಿಲ್ಲಾಧ್ಯಕ್ಷರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಮಟ್ಟಾರ್ ರತ್ನಾಕರ್ ಹೆಗ್ಡೆ, ಕುಯಿಲಾಡಿ ಸುರೇಶ್ ನಾಯಕ್ ನುಡಿನಮನ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇತ್ತೀಚೆಗೆ ಇಲ್ಲಿನ ಅಂಬಲಪಾಡಿಯ ಮನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಬಿಜೆಪಿ ನಾಯಕಿ ಅಶ್ವಿನಿ ಶೆಟ್ಟಿ ಮತ್ತು ರಮಾನಂದ ಶೆಟ್ಟಿ ದಂಪತಿಗೆ ನಗರ ಬಿಜೆಪಿ ವತಿಯಿಂದ ಶನಿವಾರ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ನಗರ ಅಧ್ಯಕ್ಷ ದಿನೇಶ್ ಆಮೀನ್, ಮಾಜಿ ಜಿಲ್ಲಾಧ್ಯಕ್ಷರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಮಟ್ಟಾರ್ ರತ್ನಾಕರ್ ಹೆಗ್ಡೆ, ಕುಯಿಲಾಡಿ ಸುರೇಶ್ ನಾಯಕ್ ನುಡಿನಮನ ಸಲ್ಲಿಸಿದರು.
ಕಣ್ಣೀರಿಡುತ್ತಲೇ ಮಾತು ಆರಂಭಿಸಿದ ಮಾಜಿ ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಅಶ್ವಿನಿ ಕೇವಲ ರಾಜಕೀಯವಾಗಿ ಮಾತ್ರವಲ್ಲದೆ, ಸಾಮಾಜಿಕ, ಧಾರ್ಮಿಕ ವೈಚಾರಿಕತೆಯನ್ನು ಹೊಂದಿದ್ದರು. ತನ್ನ ಸಾಮಾಜಿಕ ಜಾಲತಾಣದ ಮೂಲಕ ಸಂಸ್ಕಾರಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದರು. ಅವರ ಎಲ್ಲಾ ಸಾಧನೆಗಳಿಗೆ ಪತಿ ರಮಾನಂದ ಶೆಟ್ಟಿಯವರು ಸಹಕಾರ ನೀಡುತ್ತಿದ್ದರು. ಆಕೆಯೂ ಪಕ್ಷಕ್ಕೆ ತನ್ನ ಅಮೂಲ್ಯ ಸಮಯವನ್ನು ನೀಡಿದ್ದಾಳೆ. ನಮ್ಮೆಲ್ಲರ ಸಹಕಾರ ಆಕೆಯ ಮಕ್ಕಳಿಗೆ ಇರಲಿ ಎಂದು ನುಡಿದರು.ಜು.15ರಂದು ಬ್ರಹ್ಮಗಿರಿ ಬಳಿಯ ಗಾಂಧಿ ನಗರದ ತಮ್ಮ ಬಂಗಲೆಯಲ್ಲಿದ್ದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾಣಿಸಿಕೊಂಡ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪತಿ ಮತ್ತು ಪತ್ನಿಯರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜು.15 ರಂದು ಪತಿ ಹಾಗು ಜು.17 ರಂದು ಪತ್ನಿ ಬಹು ಅಂಗಾಂಗ ವೈಫಲ್ಯದಿಂದ ಅಸುನೀಗಿದ್ದರು. ನಂತರ ಇಬ್ಬರ ಮೃತದೇಹವನ್ನು ಒಂದೇ ಚಿತೆಯಲ್ಲಿಟ್ಟು ಅಂತ್ಯ ಸಂಸ್ಕಾರ ನಡೆಸಲಾಗಿತ್ತು.