ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಜಮೀನು ಹಾಗೂ ಮಠಮಂದಿರಗಳ ಆಸ್ತಿಯಲ್ಲಿ ವಕ್ಫ್ ಹೆಸರು ದಾಖಲಿಸುವುದನ್ನು ಪ್ರತಿಭಟಿಸಿ ಬಿಜೆಪಿ ನ.4 ರಂದು ರಾಮದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಮಂಡಳ ಅಧ್ಯಕ್ಷ ಡಾ.ಕೆ.ವಿ.ಪಾಟೀಲ ಹೇಳಿದರು.ಪ್ರೆಸ್ಕ್ಲಬ್ನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಜಮೀನುಗಳ ಮಾಲೀಕತ್ವದ ಕಾಲಂನಲ್ಲಿ ವಕ್ಫ್ ಎಂದು ಯಾವುದೇ ಒಂದು ಜಿಲ್ಲೆಯಲ್ಲಿ ನಡೆದಿಲ್ಲ. ಬದಲಾಗಿ ಬಿಜಾಪೂರ, ಗುಲ್ಬರ್ಗಾ ಹಾಗೂ ಬೆಳಗಾವಿ ಜಿಲ್ಲೆ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನಲ್ಲಿ ಈವರೆಗೆ ಈ ಕುರಿತು ಯಾವುದೇ ದಾಖಲೆ ಲಭ್ಯವಾಗಿಲ್ಲ. ತಾಲೂಕಿನ ರೈತರು ಸಹಿತ ತಮ್ಮ ಜಮೀನುಗಳ ಆರ್ಟಿಸಿ ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದರು.ರಾಜ್ಯದ ಕಾಂಗ್ರೆಸ್ ಸರ್ಕಾರ ಮತಬ್ಯಾಂಕ್ಗಾಗಿ ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಿದೆ. ಇದನ್ನು ಬಿಜೆಪಿ ಗಂಭೀರವಾಗಿ ಪರಗಣಿಸಿದ್ದು, ರಾಜ್ಯದ ಎಲ್ಲ ರೈತರು ತಮ್ಮ ಪಹಣಿಗಳನ್ನು ಪರಿಶೀಲನೆ ಮಾಡಿ ಒಂದು ವೇಳೆ ವಕ್ಫ ದಾಖಲಿದ್ದರೇ ಪಕ್ಷದ ಗಮನಕ್ಕೆ ತರಬೇಕು. ಈ ಬಗ್ಗೆ ಪಕ್ಷ ಉಗ್ರ ಹೋರಾಟ ಮಾಡಲಿದೆ. ಸೋಮವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಮಾಧ್ಯಮ ಸಂಯೋಜಕ ಮಲ್ಲಿಕಾರ್ಜುನ ಭಾವಿಕಟ್ಟಿ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಹಿರೇಮಠ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಹೀರ್ ಹಾಜಿ, ಪ್ರಧಾನಕಾರ್ಯದರ್ಶಿ ಈರನಗೌಡ ಹೊಸಗೌಡ್ರ ಸಿದ್ದು ಗುಡೆನ್ನವರ ಸೇರಿದಂತೆ ಹಲವರಿದ್ದರು.