ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಮರಗಳ ಗಣತಿ ಕಾರ್ಯವನ್ನು ಅರಣ್ಯ ಇಲಾಖೆ ಮುಂದುವರಿಸಿದೆ. ಕೃಷಿಕ ವರ್ಗಕ್ಕೆ ಮಾರಕವಾಗಿರುವ ಆದೇಶವನ್ನು ಸರ್ಕಾರ ಹಿಂಪಡೆಯುವವರೆಗೆ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ಎಚ್ಚರಿಕೆ ನೀಡಿದೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ತೋಟಗಳಲ್ಲಿರುವ ಮರಗಳ ಗಣತಿ ಕಾರ್ಯ ಜಿಲ್ಲೆಗೆ ಮಾರಕವಾಗಿದೆ. ಗಣತಿ ಆದೇಶ ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಬೆಳೆಗಾರರ ಪರವಾಗಿ ಬಿಜೆಪಿ ಈ ಹಿಂದೆಯೇ ಆಗ್ರಹಿಸಿದ್ದರೂ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ. ಆದ್ದರಿಂದ ಶುಕ್ರವಾರ ಮಡಿಕೇರಿಯ ಅರಣ್ಯ ಭವನದ ಎದುರು ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಳೆಗಾರರು,ಸಾರ್ವಜನಿಕರು ಹಾಗೂ ದೇವಾಲಯ ಸಮಿತಿಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಜಿಲ್ಲೆಯ ಶಾಸಕರು ಮರಗಳ ಗಣತಿ ಕಾರ್ಯ ಮುಂದುವರಿಯುವುದಿಲ್ಲ ಎಂದು ಭರವಸೆ ನೀಡಿದ ಮಾರನೇಯ ದಿನವೇ ಸಂಪಾಜೆ ಮತ್ತು ಚೆಂಬು ಭಾಗದಲ್ಲಿ ಅರಣ್ಯ ಸಿಬ್ಬಂದಿ ಮರಗಳ ಸರ್ವೆ ನಡೆಸಿದ್ದಾರೆ. ಅಧಿಕಾರಿಗಳು ಶಾಸಕರ ಮಾತಿಗೆ ಗೌರವ ನೀಡುತ್ತಿಲ್ಲವೇ ಅಥವಾ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಕುರಿತು ಗಮನ ಸೆಳೆಯುವಲ್ಲಿ ಶಾಸಕರು ವಿಫಲರಾಗಿದ್ದಾರೆಯೇ ಎನ್ನುವುದುತಿಳಿಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರದ ಪ್ರತಿಭಟನೆಯನ್ನೂ ಸರ್ಕಾರ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ವಿವಿಧ ಹಂತಗಳಲ್ಲಿ ಹೋರಾಟವನ್ನು ರೂಪಿಸಿ ಕೊಡಗು ಬಂದ್ಗೂ ಕರೆ ನೀಡುವುದಾಗಿ ಎಚ್ಚರಿಕೆನೀಡಿದರು.
ಅರಣ್ಯ ಪ್ರದೇಶದಲ್ಲಿರುವ ಮರಗಳನ್ನೇ ರಕ್ಷಿಸಿಕೊಳ್ಳಲಾಗದ ಅರಣ್ಯ ಇಲಾಖೆ ವಿನಾಕಾರಣ ಬೆಳೆಗಾರರಿಗೆ ತೊಂದರೆ ನೀಡುತ್ತಿದೆ. ಕೇರಳದ ಗಡಿಭಾಗದ ಅರಣ್ಯ ಪ್ರದೇಶದಿಂದ ಲೆಕ್ಕವಿಲ್ಲದಷ್ಟು ಮರಗಳ ಹನನವಾಗಿದೆ. ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾಮ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಮರಗಳ ಹನನವಾಗಿದೆ. ಇದನ್ನೆಲ್ಲ ತಡೆಯಲು ಸಾಧ್ಯವಾಗದ ಅರಣ್ಯ ಅಧಿಕಾರಿಗಳು ತೋಟಗಳಲ್ಲಿರುವ ಮರಗಳ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ರವಿ ಕಾಳಪ್ಪ ಆರೋಪಿಸಿದರು.ನೂರಾರು ವರ್ಷಗಳಿಂದ ದೇವಾಲಯಗಳಲ್ಲಿ ಸಾಂಪ್ರದಾಯಿಕವಾಗಿ ಕಾಡು ಪ್ರಾಣಿಗಳ ವಸ್ತುಗಳನ್ನು ಧಾರ್ಮಿಕ ವಿಧಿ ವಿಧಾನಗಳಲ್ಲಿ ಬಳಸಿಕೊಂಡು ಬರಲಾಗುತ್ತಿದೆ.
ಇದನ್ನು ಸ್ವಾಧೀನ ಪಡಿಸಿಕೊಳ್ಳುವ ಸರ್ಕಾರದ ಪ್ರಸ್ತಾಪಕ್ಕೂ ಪ್ರತಿಭಟನೆಯ ಸಂದರ್ಭ ವಿರೋಧ ವ್ಯಕ್ತಪಡಿಸುವುದಾಗಿ ತಿಳಿಸಿದರು.ಕಂದಾಯ ಇಲಾಖೆ ಈ ಹಿಂದೆ ಸಿ ಮತ್ತು ಡಿ ಭೂಮಿಯನ್ನು ಮರಗಳನ್ನು ಬೆಳೆಸಲು ಅರಣ್ಯ ಇಲಾಖೆಗೆ ಬಿಟ್ಟುಕೊಟ್ಟಿತ್ತೇ ಹೊರತು ಸಂಪೂರ್ಣ ಹಕ್ಕು ನೀಡಿರಲಿಲ್ಲ. ಕಳೆದ ಅವಧಿಯಲ್ಲಿದ್ದ ಬಿಜೆಪಿ ಸರ್ಕಾರ ಸಿ ಮತ್ತು ಡಿ ಭೂಮಿಯನ್ನು ಕಂದಾಯ ಇಲಾಖೆ ಮರಳಿ ಪಡೆದು ಈ ಭೂಮಿಯಲ್ಲಿ ಜೀವನ ಸಾಗಿಸುತ್ತಿರುವವರಿಗೆ ಹಕ್ಕುಪತ್ರ ನೀಡುವ ಕುರಿತು ನಿಯಮ ರೂಪಿಸಿತ್ತು. ಆದರೆ ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಿ ಮತ್ತು ಡಿ ಭೂಮಿಯನ್ನು ಮರಳಿ ಪಡೆಯುವ ಹಾಗೂ ಅರ್ಹರಿಗೆ ಹಕ್ಕುಪತ್ರ ನೀಡುವ ಯಾವುದೇ ಪ್ರಕ್ರಿಯೆಯನ್ನು ಆರಂಭಿಸಿಲ್ಲವೆಂದು ರವಿ ಕಾಳಪ್ಪ ಟೀಕಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಪ್ರಧಾನ ಕಾಯದರ್ಶಿ ಮಹೇಶ್ ಜೈನಿ, ಕಾರ್ಯದರ್ಶಿ ನಾಳನ ಕನ್ನಿಕೆ, ವಕ್ತಾರರಾದ ಬಿ.ಕೆ.ಅರುಣ್ ಕುಮಾರ್ ಹಾಗೂ ತಳೂರು ಕಿಶೋರ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.