ಸಾರಾಂಶ
ಮೀಸಲಾತಿ ರದ್ದುಗೊಳಿಸುವುದಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಎಸ್ಸಿ ಮತ್ತು ಎಸ್ಟಿ ಮೋರ್ಚಾದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಹಾವೇರಿ: ಮೀಸಲಾತಿ ರದ್ದುಗೊಳಿಸುವುದಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಎಸ್ಸಿ ಮತ್ತು ಎಸ್ಟಿ ಮೋರ್ಚಾದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು, ರಾಹುಲ್ ಗಾಂಧಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ರಾಹುಲ್ ಗಾಂಧಿಯವರು ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ಸಂವಿಧಾನ ಬದಲಾಯಿಸಲಿದೆ ಎಂದು ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದರು. ಇಂದು ಅವರೇ ದಲಿತರ ಮೀಸಲಾತಿ ಕಿತ್ತುಕೊಳ್ಳುವ ಹೇಳಿಕೆಯನ್ನು ನೀಡಿದ್ದಾರೆ. ಆ ಮೂಲಕ ಕಾಂಗ್ರೆಸ್ನ ಜಾತ್ಯತೀತ ಮುಖವಾಡ ಬಯಲಾಗಿದೆ. ಇಂತಹ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ರದ್ದುಗೊಳಿಸಿ ಭಾರತದಿಂದ ಹೊರಗೆ ಕಳಿಸಬೇಕು ಎಂದು ಆಗ್ರಹಿಸಿದರು.ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ರಾಹುಲ್ ಗಾಂಧಿಗೆ ತಾಕತ್ತಿದ್ದರೆ ಮೀಸಲಾತಿ ರದ್ದುಗೊಳಿಸಲಿ ಎಂದು ಅವರು ಸವಾಲು ಹಾಕಿದರು.
ಎಸ್ಸಿ ಮೋರ್ಚಾ ಅಧ್ಯಕ್ಷ ಚಂದ್ರಪ್ಪ ಹರಿಜನ ಮಾತನಾಡಿ, ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿಯನ್ನು ಮೊದಲು ಬಂಧಿಸಬೇಕು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರನ್ನು ಸೋಲಿಸಿತ್ತು. ಅವರನ್ನು ಹೀನಾಯವಾಗಿ ನಡೆಸಿಕೊಂಡಿತು. ಈಗ ಅವರ ಸಂವಿಧಾನ ರಚನೆಯ ಮೀಸಲಾತಿಯನ್ನು ರಾಹುಲ್ ಗಾಂಧಿ ರದ್ದುಗೊಳಿಸಲು ಹೊರಟ್ಟಿದ್ದಾರೆ. ಇವರು ದತರಿಗೆ ನೀಡುವ ಕೊಡುಗೆ, ಸಂವಿಧಾನದ ಬಗ್ಗೆ ಮಾತನಾಡಿದ್ದಾರೆ. ಇವರಿಗೆ ಸಂವಿಧಾನದ ಮೇಲೆ ಗೌರವವಿದ್ದರೆ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಭಾರತವನ್ನು ಬಿಟ್ಟು ತೊಲಗಲಿ ಎಂದು ಆಗ್ರಹಿಸಿದರು.ದಲಿತ ಮುಖಂಡ ಪರಮೇಶಪ್ಪ ಮೇಗಳಮನಿ ಮಾತನಾಡಿ, ಮೀಸಲಾತಿ ನಮಗೆ ಬೇಡ ಎಂದರೆ ಯಾವ ನ್ಯಾಯ? ರಾಹುಲ್ ಗಾಂಧಿಯಂತವರು ನಮ್ಮ ದೇಶಕ್ಕೆ ಬೇಕಾ? ಇವರ ಮನೆತನದಲ್ಲಿ ಪ್ರಧಾನಿಗಳಾಗಿದ್ದಾರೆ. ಇಂತವರಿಂದ ಸಂವಿಧಾನ ವಿರೋಧಿ ಹೇಳಿಕೆ ಸರಿನಾ? ಇಂತವರನ್ನು ಗಡಿ ಪಾರು ಮಾಡುವುದು ಸೂಕ್ತ ಎಂದು ಹೇಳಿದರು.
ಜಿಲ್ಲಾ ಮಹಿಳಾ ಮೋರ್ಚಾದ ರೇಖಾ ಕರಿಭೀಮಣ್ಣನವರ ಮಾತನಾಡಿ, ನಮ್ಮ ಮೀಸಲಾತಿಯನ್ನು ರದ್ದುಗೊಳಿಸಲು ಇವರು ಯಾರು? ಇಂತಹ ಹೇಳಿಕೆಯನ್ನು ಹೊರ ದೇಶದಲ್ಲಿ ಹೇಳುತ್ತಾರೆ. ಇಂತವರು ನಮ್ಮದೇಶದಲ್ಲಿ ಇರಬಾರದು ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಪ್ಪ ತಲ್ಲೂರ, ನಿಂಗಪ್ಪ ಗೊಬ್ಬೆರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಡಾ. ಸಂತೋಷ ಆಲದಕಟ್ಟಿ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಬಸವರಾಜ ಚಳಗೇರಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಅಭಿಷೇಕ ಗುಡಗೂರ, ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿದ್ದಾಡೆಪ್ಪ ಮತ್ತೂರ, ಉಮೇಶ ಮಾಗಳ, ದುರ್ಗೇಶ ತಿರಕಪ್ಪನವರ, ದಾಣಪ್ಪ ಲಮಾಣಿ, ಮಂಜು ವಡ್ಡರ, ಕರೆಯಪ್ಪ ಮುಂದಿನಮನಿ, ವಿನಯ ತಳಗೇರಿ, ಮಂಗಳಾ ಸೊಟ್ಟಣ್ಣನವರ, ಪರಮೇಶ ಲಮಾಣಿ, ಮಂಜುನಾಥ ಮಡಿವಾಳರ ಇತರರು ಇದ್ದರು.