ಯಲ್ಲಂಪಲ್ಲಿ ಗ್ರಾಮದಲ್ಲಿ ₹ 65 ಲಕ್ಷ ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಭೂಮಿ ಪೂಜೆ

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಆರೋಗ್ಯ ಸಚಿವನಾಗಿದ್ದಾಗ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ನಿರ್ಮಾಣದಲ್ಲಿ ಶೇ.125 ರಷ್ಟು ಸಾಧನೆ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರದ ತಲಾ 65 ಲಕ್ಷ ರು. ಅನುದಾನದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸಂಸದ ಡಾ.ಕೆ. ಸುಧಾಕರ್ ಹೇಳಿದರು.ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ಕೇಂದ್ರದ 15 ನೇ ಹಣಕಾಸು ಆಯೋಗದ ಅನುದಾನದಲ್ಲಿ, 65 ಲಕ್ಷ ರು. ವೆಚ್ಚದ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನಾನು ಆರೋಗ್ಯ ಸಚಿವನಾಗಿದ್ದಾಗ ಕೋವಿಡ್ ಇತ್ತು. ಅದನ್ನು ನಿಯಂತ್ರಣ ಮಾಡುವುದರ ಜೊತೆಗೆ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಅಭಿವೃದ್ಧಿಯಲ್ಲಿ ಸಾಧನೆ ಮಾಡಿದ್ದೆವು. ಉಪಕೇಂದ್ರಗಳ ವಿಭಾಗದಲ್ಲಿ 2,263 ಎಚ್ ಡಬ್ಲ್ಯು ಸಿ ಆರಂಭಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದ್ದು, 3,300 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿತ್ತು. ಅಂದರೆ, ನಿಗದಿತ ಗುರಿಗಿಂತ ಶೇ.146 ರಷ್ಟು ಸಾಧನೆಯಾಗಿತ್ತು. 2,096 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎಚ್ ಡಬ್ಲ್ಯೂಯು ಆಗಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದ್ದು, 2,168 ಪೂರ್ಣವಾಗಿತ್ತು. ಅಂದರೆ ನಿಗದಿತ ಗುರಿಗಿಂತ ಶೇ.103 ರಷ್ಟು ಸಾಧನೆಯಾಗಿತ್ತು. 294 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎಚ್ ಡಬ್ಲ್ಯುಸಿ ಆಗಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದ್ದು, 364 ಕೇಂದ್ರ ರೂಪಿಸಲಾಗಿತ್ತು. ಅಂದರೆ, ನಿಗದಿತ ಗುರಿಗಿಂತ ಶೇ.124 ರಷ್ಟು ಸಾಧನೆಯಾಗಿತ್ತು. ಆಗ ಒಟ್ಟಾರೆಯಾಗಿ 4,653 ಎಚ್ ಡಬ್ಲ್ಯುಸಿ ಸ್ಥಾಪಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ಗುರಿಯನ್ನು ಮೀರಿ 5,832 ಕೇಂದ್ರಗಳನ್ನು ಆರಂಭಿಸಲಾಗಿತ್ತು. ಅಂದರೆ, ಒಟ್ಟಾರೆಯಾಗಿ ಶೇ. 125 ರಷ್ಟು ಸಾಧನೆ ಮಾಡಿದ್ದೆವು ಎಂದು ತಿಳಿಸಿದರು.ಸಂಪೂರ್ಣ ಕೇಂದ್ರದ ಅನುದಾನ: ಅಪಪ್ರಚಾರ ಮಾಡುವುದು ಸುಲಭ. ಆದರೆ ನಾವು ಮಾಡಿದ ಕೇಂದ್ರಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ. ಇದನ್ನು ಆಯುಷ್ಮಾನ್ ಆರೋಗ್ಯ ಮಂದಿರವಾಗಿ ಬದಲಾಯಿಸಿ ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಸರ್ಕಾರದಿಂದ ಗ್ರಾಮೀಣ ಪ್ರದೇಶಗಳಲ್ಲಿ ತಲಾ 65 ಲಕ್ಷ ರು. ಖರ್ಚು ಮಾಡಿ ಆರೋಗ್ಯ ಮಂದಿರಗಳನ್ನು ನಿರ್ಮಿಸುತ್ತಿದೆ. ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದ ಅನುದಾನ ನೀಡಲಾಗಿದೆಯೇ ಹೊರತು, ರಾಜ್ಯ ಸರ್ಕಾರದಿಂದ ನಯಾ ಪೈಸೆ ಅನುದಾನ ಕೊಟ್ಟಿಲ್ಲ ಎಂದರು.

ಎಚ್ ಪಿವಿ ಲಸಿಕೆ ಪಡೆಯಿರಿ:

14 ವರ್ಷ ಮೀರಿದ, 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಗರ್ಭಕಂಠ ಕ್ಯಾನ್ಸರ್ ಲಸಿಕೆ- ಎಚ್ ಪಿವಿ ನೀಡಲಾಗುತ್ತಿದೆ. ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗಿ ಬರುತ್ತದೆ. ಈ ಲಸಿಕೆಯ ಎರಡು ಡೋಸ್‌ಗೆ ಏಳೆಂಟು ಸಾವಿರ ರು. ಖರ್ಚಾಗುತ್ತಿದ್ದು, ಶ್ರೀಮಂತರು ಮಾತ್ರ ಪಡೆಯುತ್ತಿದ್ದರು. ಈ ಬಗ್ಗೆ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಈಗ ಕೇಂದ್ರದಿಂದ ಉಚಿತ ಲಸಿಕೆ ನೀಡಲಾಗುತ್ತಿದೆ. ಕಾರ್ಯಕರ್ತರು ಮನೆಗೆ ಹೋಗಿ ಪರಿಶೀಲಿಸಿ ಈ ವಯೋಮಾನದ ಹೆಣ್ಣು ಮಕ್ಕಳಿಗೆ ಲಸಿಕೆ ಕೊಡಬೇಕು. ಎಲ್ಲರೂ ಈ ಬಗ್ಗೆ ಅರಿವು ತರಬೇಕು ಎಂದು ಕೋರಿದರು.


ಸೋಮನಾಥಪುರ, ಪುಲಿಗಲ್ಲು ಹಾಗೂ ಪೋಲನಾಯಕನಹಳ್ಳಿಯಲ್ಲಿ ತಲಾ 65 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಹಾಗೂ ಸಂಸದರ ಅನುದಾನದಡಿ 10 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪಾಳ್ಯಕೆರೆಯ ವಿಎಸ್ಎಸ್ಎನ್ ಕಟ್ಟಡ ಕಾಮಗಾರಿಗೆ ಅವರು ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್, ಮುಖಂಡರಾದ ಹರಿನಾಥರೆಡ್ಡಿ, ಚಂದ್ರಶೇಖರ್, ಗ್ರಾಮಸ್ಥರು ಮತ್ತಿತರರು ಇದ್ದರು

ಸಿಕೆಬಿ-2

ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ಕೇಂದ್ರದ 15 ನೇ ಹಣಕಾಸು ಆಯೋಗದ ಅನುದಾನದಲ್ಲಿ, 65 ಲಕ್ಷ ರು. ವೆಚ್ಚದ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಸಂಸದ ಡಾ.ಕೆ. ಸುಧಾಕರ್ ನೆರವೇರಿಸಿದರು.