ಸಾರಾಂಶ
ತಾಲೂಕಿನ ಗೋಪಾಲಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಐದು ವರ್ಷದ ಆಡಳಿತ ಮಂಡಳಿ ಚುನಾವಣೆಯಲ್ಲಿ ೧೧ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತರು ಭರ್ಜರಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಪಡೆದಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಗೋಪಾಲಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಐದು ವರ್ಷದ ಆಡಳಿತ ಮಂಡಳಿ ಚುನಾವಣೆಯಲ್ಲಿ ೧೧ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತರು ಭರ್ಜರಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಪಡೆದಿದೆ.ಚಾಮುಲ್ ಮಾಜಿ ನಿರ್ದೇಶಕ ಕನ್ನೇಗಾಲ ಸ್ವಾಮಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ೧೦ ಕ್ಷೇತ್ರಕ್ಕೆ ಚುನಾವಣೆ ನಡೆದು ೧೦ ಕ್ಷೇತ್ರದಲ್ಲೂ ಬಿಜೆಪಿ ಬೆಂಬಲಿಗರು ಗೆಲುವು ಸಾಧಿಸಿದರೆ, ಬಿಜೆಪಿ ಬೆಂಬಲಿತ ಕನ್ನೇಗಾಲದ ಸಿದ್ದರಾಜಚಾರಿ ಹಾಗೂ ಕಾಂಗ್ರೆಸ್ ಬೆಂಬಲಿತ ಕನ್ನೇಗಾಲದ ದೊಡ್ಡನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸಾಲಗಾರರ ಕ್ಷೇತ್ರದಲ್ಲಿ ಕನ್ನೇಗಾಲಸ್ವಾಮಿ (ಡಿ.ಮಾದಪ್ಪ), ಗೋಪಾಲಪುರ ಮಾದಪ್ಪ, ಜಿ.ಡಿ.ಶಂಕರಪ್ಪ, ಜಿ.ಎಂ.ಶಿವಕುಮಾರ್, ಗೋಪಾಲಪ್ಪ ಆಲಿಯಾಸ್ ಸ್ವಾಮಿ, ಜಿ.ಪಿ.ರಾಜೇಶ್, ರತ್ನಮ್ಮ, ಕನ್ನೇಗಾಲದ ಬಸವಯ್ಯ, ಅಂಬಿಕಾ ಗೆಲುವು ಸಾಧಿಸಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಿ.ಪಿ.ಗವಿಯಪ್ಪ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಸಹಕಾರ ಅಭಿವೃದ್ಧಿ ಅಧಿಕಾರಿ ಪದ್ಮನಾಭ ಘೋಷಿಸಿದರು.
ಬಿಜೆಪಿ ಬೆಂಬಲಿತ ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಬಿಜೆಪಿಗೆ ಜೈಕಾರ ಕೂಗಿದರು. ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಗೋಪಾಲಪುರ ಪಿ.ಗುರುಸ್ವಾಮಿ,ಗೌಡಿಕೆ ನಾಗಪ್ಪ,ಜಿ. ಗೋಪಾಲಪ್ಪ, ಸಿದ್ದಪ್ಪ, ಬಸವರಾಜಪ್ಪ, ಪ್ರಭು, ನಾಗುಸ್ವಾಮಿ, ಸಿದ್ದಪ್ಪ, ಶಿವಪ್ಪ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.ಚಾಮುಲ್ನಲ್ಲಿ ಸೋತ್ರು, ಫ್ಯಾಕ್ಸ್ನಲ್ಲಿ ಗೆದ್ರು!
ಇದೇ ಮೊದಲ ಬಾರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಚಾಮುಲ್ ಮಾಜಿ ನಿರ್ದೇಶಕ ಕನ್ನೇಗಾಲಸ್ವಾಮಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಆದರೆ ಕಳೆದ ಅವಧಿಯ ಚಾಮುಲ್ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಕನ್ನೇಗಾಲ ಸ್ವಾಮಿ ಕನ್ನೇಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಸತತ ೭ ನೇ ಬಾರಿಗೆ ಡೇರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಪಂನಿಂದ ರೈತಸಂಘ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದರು, ತಾಪಂ ಅಧ್ಯಕ್ಷರಾಗಿದ್ದರು. ಜೊತೆಗೆ ಕನ್ನೇಗಾಲಸ್ವಾಮಿ ಪತ್ನಿ ಹೇಮಾವತಿ ಸ್ವಾಮಿ ಕೂಡ ತಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.