ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಿಳೆಯರಿಗೆ ಹಕ್ಕು ಸಿಗಬಾರದು ಎಂಬುದೇ ಕಾಂಗ್ರೆಸ್ ಪಕ್ಷದ ಅಜೆಂಡಾ ಆಗಿದೆ, ಶೇ.33 ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ತರಲು ದಶಕಗಳಿಂದ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ನ ಅಸಲಿ ಮುಖ ಇಂದು ಮತ್ತೆ ಬಯಲಾಗಿದೆ. ಇದು ಕಾಂಗ್ರೆಸ್‌ ಮಹಿಳೆಯರಿಗೆ ಮಾಡಿದ ಅನ್ಯಾಯ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಆರೋಪಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಸಂಜೆ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದ ಮಹಿಳಾ ಮೋರ್ಚಾ ಹಮ್ಮಿಕೊಂಡ ನಾರಿ ಶಕ್ತಿ ವಂದನಾ ಅಧಿನಿಯಮ ಸೋಲಿಗೆ ಕಾರಣವಾದ ಕಾಂಗ್ರೆಸ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬಿಜೆಪಿ ಸರ್ಕಾರ ಜಾರಿಗೆ ತಂದ ಪ್ರತಿಯೊಂದು ಜನಪರ ಮತ್ತು ರಾಷ್ಟ್ರಹಿತದ ನಿರ್ಧಾರಗಳನ್ನು ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದೆ. ಮಹಿಳಾ ಸಬಲೀಕರಣಕ್ಕೆ ಕೊಡಲಿ ಪೆಟ್ಟು ಕೊಟ್ಟ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಧೋರಣೆಗೆ ದೇಶ ಸಾಕ್ಷಿಯಾಗಿದೆ. ಮಹಿಳೆಯರಿಗೆ ಹಕ್ಕು ಸಿಗಬಾರದು ಎಂಬುದೇ ಕಾಂಗ್ರೆಸ್ ಅಜೆಂಡಾ. ಶೇ.33 ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ತರಲು ದಶಕಗಳಿಂದ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ನ ಅಸಲಿ ಮುಖ ಇಂದು ಮತ್ತೆ ಬಯಲಾಗಿದೆ. ಇದು ಮಹಿಳೆಯರಿಗೆ ಮಾಡಿದ ಅನ್ಯಾಯ. ಕರ್ನಾಟಕದಲ್ಲಿ ಲೋಕಸಭೆ ಸ್ಥಾನಗಳ ಸಂಖ್ಯೆ 28 ರಿಂದ 42 ಆಗುತ್ತಿದ್ದವು, ದೇಶದ ಇಂದಿನ ಜನಸಂಖ್ಯೆಗಣುವಾಗಿ ಲೋಕಸಭೆ 543 ಸಂಸದರ ಸ್ಥಾನಗಳ ಪೈಕಿ ಮಹಿಳೆಯರಿಗೆ ಶೇ.33 ಸ್ಥಾನ ನೀಡಿ 850 ಸಂಸದರ ಸ್ಥಾನ ಹೆಚ್ಚು ಮಾಡುವ ಯೋಜನೆ ಹೊಂದಲಾಗಿತ್ತು, ಕಾಂಗ್ರೆಸ್‌ ಪಕ್ಷ ವಿರೋಧ ಮಾಡಿ ಮಹಿಳೆಯರ ಹಕ್ಕನ್ನು ಕಸಿದುಕೊಂಡಿದೆ. ಮುಂದಿನ ಎಲ್ಲ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸುವ ಮೂಲಕ ಮಹಿಳಾ ಶಕ್ತಿ ತೋರಿಸಬೇಕಿದೆ. ಮುಂದಿನ ದಿನಗಳಲ್ಲಿ ಪ್ರದಾನಿ ಮೋದಿಯವರು ಮಹಿಳೆಯರಿಗೆ ಶೇ.33 ಮಿಸಲಾತಿ ತಂದೇ ತರುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಮಹಿಳಾ ಮೋರ್ಚಾ ಅಧ್ಯಕ್ಷೆ ಶಶಿಕಲಾ ಮಜ್ಜಗಿ ಮಾತನಾಡಿ, ಮಹಿಳೆಯರ ಹಕ್ಕುಗಳು ಸಮಾಧಿಯಾಗುವುದನ್ನು ತನ್ನ ಜಯ ಎಂದು ಹೆಮ್ಮೆ ಪಡುವ ಕಾಂಗ್ರೆಸ್‌ನದ್ದು ಎಂತಹ ಕ್ರೂರ ಮನಸ್ಥಿತಿ ಇರಬೇಕು ? ಇದು ಕಾಂಗ್ರೆಸ್ಸಿಗರ ಮಹಿಳಾ ವಿರೋಧಿ ಧೋರಣೆ ಎತ್ತಿ ತೋರಿಸುತ್ತದೆ. ಅವರ ದೃಷ್ಟಿಯಲ್ಲಿ ಮಹಿಳೆಯರು ಕೇವಲ ಘೋಷಣೆಗಳಿಗೆ ಸೀಮಿತವಾಗಬೇಕೇ ಹೊರತು ಅಧಿಕಾರಕ್ಕೆ ಬರಬಾರದು ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದ ಈ ದ್ರೋಹವನ್ನು ಪ್ರತಿಯೊಬ್ಬ ಮಹಿಳೆಯೂ, ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯೂ ಖಂಡಿಸಬೇಕಿದೆ ಎಂದು ಕರೆ ನೀಡಿದರು.


ಪ್ರತಿಭಟನೆಯಲ್ಲಿ ಸವಿತಾ ಲಂಕೆನ್ನವರ, ಶೋಭಾ ರಾವ್, ಸುಜಾತಾ ಶಿಂಧೆ, ಸರಸ್ವತಿ ಕುರಬರ, ಶಿವಲೀಲಾ ಪಟ್ಟಣಶೆಟ್ಟಿ, ಸ್ಮೀತಾ ಪವಾರ, ಪ್ರೇಮಾ ಅಂಬಿಗೇರ, ಕಾವೇರಿ ರಾಠೋಡ, ವಿಜಯಲಕ್ಷ್ಮೀ ಬದ್ರಶೆಟ್ಟಿ, ನಾಗರತ್ನಾ ಒಕ್ಕಲಗುಂಟಿ, ಲಕ್ಷ್ಮೀ ಮಡಿವಾಳರ,ಜ್ಯೋತಿ ಚವ್ಹಾಣ, ರೇಖಾ ಕಲಬುರಗಿ, ದಾನವ್ವ ಕೋಟಿ, ಸಾವಿತ್ರಿ ಗಡ್ಡಿಮಠ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಶಿವಾನಂದ ಟವಳಿ, ಕಪ್ಪಯ್ಯ ಮುತ್ತಿನಮಠ, ಸುರೇಶ ಮಜ್ಜಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತಿಭಟನಾ ರ್ಯಾಲಿ ಶಿವಾನಂದ ಜಿನ್‌ನಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತದಲ್ಲಿ ಸಮಾರೋಪಗೊಂಡಿತು.