ಸಾರಾಂಶ
ದೇಶದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರ ೧೯೭೫ರ ಜೂ.೨೫ರಂದು ತುರ್ತು ಪರಿಸ್ಥಿತಿ ಜಾರಿಗೊಳಿಸಿತ್ತು. ಅಂದಿನ ಜನಸಂಘದ (ಇಂದಿನ ಬಿಜೆಪಿ) ಉನ್ನತ ನಾಯಕರು ಅಂದಿನ ಸರ್ಕಾರದ ಮುಂದೆ ಶರಣಾಗಿದ್ದರು. ಇಂದಿನ ಬಿಜೆಪಿ ನಾಯಕರು ಜೂ. ೨೫ ರಂದು ಸಂವಿಧಾನ ಹತ್ಯೆ ದಿವಸ್ ಆಚರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ.
ಕನ್ನಡಪ್ರಭ ವಾರ್ತೆ ಕುರುಗೋಡು
ದೇಶದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರ ೧೯೭೫ರ ಜೂ.೨೫ರಂದು ತುರ್ತು ಪರಿಸ್ಥಿತಿ ಜಾರಿಗೊಳಿಸಿತ್ತು. ಅಂದಿನ ಜನಸಂಘದ (ಇಂದಿನ ಬಿಜೆಪಿ) ಉನ್ನತ ನಾಯಕರು ಅಂದಿನ ಸರ್ಕಾರದ ಮುಂದೆ ಶರಣಾಗಿದ್ದರು. ಇಂದಿನ ಬಿಜೆಪಿ ನಾಯಕರು ಜೂ. ೨೫ ರಂದು ಸಂವಿಧಾನ ಹತ್ಯೆ ದಿವಸ್ ಆಚರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಶಿವಶಂಕರ್ ಟೀಕಿಸಿದರು.ಪಟ್ಟಣದ ಸಿಪಿಎಂ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತುಪರಿಸ್ಥಿತಿಯ ಸಮಯದಲ್ಲಿ ಶರಣಾದವರು ಸಂಘಪರಿವಾರದವರು ಈಗ ತಮ್ಮನ್ನು ಪ್ರಜಾಪ್ರಭುತ್ವದ ರಕ್ಷಕರು ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿ ೨೧ ತಿಂಗಳು ಮುಂದುವರೆದಿತ್ತು. ಆದರೆ ಮೋದಿಯವರ ಅಘೋಷಿತ ತುರ್ತುಪರಿಸ್ಥಿತಿ ೧೧ನೇ ವರ್ಷವೂ ಮುಂದುವರೆದಿದೆ. ತುರ್ತು ಪರಿಸ್ಥಿತಿ ಘೋಷಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಆರೋಪಿಸಿದರು.
ಏಕಾಏಕಿ ವಿರೋಧ ಪಕ್ಷದವರನ್ನು, ಹೋರಾಟಗಾರರನ್ನು, ಕಾರ್ಮಿಕ ನಾಯಕರು, ವಿದ್ಯಾರ್ಥಿ ನಾಯಕರನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಅಂದಿನ ಕಾಂಗ್ರೆಸ್ನ ತುರ್ತುಪರಿಸ್ಥಿತಿಯ ದಿನವನ್ನು ಯಾರು ಮರೆಯುವಂತಿಲ್ಲ.ತುರ್ತುಪರಿಸ್ಥಿತಿ ಸಮಯದಲ್ಲಿ ಕೊಳಗೇರಿ ತೆರುವುಗೊಳಿಸಿದ ಘಟನೆಯಿಂದ ಲಕ್ಷಾಂತರ ಬಡಜನರು ನೆಲೆಯಿಲ್ಲದೆ ಬೀದಿಪಾಲಾಗಿದ್ದರು. ಪ್ರತಿಭಟನೆಯ ಹಕ್ಕು ಮೊಟಕು, ಚುನಾವಣೆ ರದ್ದು, ರಜಾದಿನಗಳ ಮೊಟಕು, ಕೆಲಸದಿಂದ ತೆಗೆದುಹಾಕಿದ್ದರು ಎಂದು ಅಂದಿನ ಘಟನೆಗಳನ್ನು ಮೆಲುಕು ಹಾಕಿದರು.
ಬಂಡವಾಳ ಶಾಹಿ ವರ್ಗದವರನ್ನು ಬೆಂಬಲಿಸಲು ಇಂದಿನ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಬಂಡವಾಳಶಾಹಿಗಳಿಗೆ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಮಾರಾಟ ಮಾಡುತ್ತಾ ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೊಳಿಸಿದೆ ಎಂದು ಆರೋಪಿಸಿದರು.ಮುಖಂಡರಾದ ಗಾಳಿ ಬಸವರಾಜ, ಯು. ಶಂಕ್ರಪ್ಪ, ಎನ್.ಸೋಮಪ್ಪ, ಟಿ.ಅಮೀನ್ ಸಾಬ್, ಮತ್ತು ಎನ್. ಹುಲೆಪ್ಪ ಇದ್ದರು.