ಹಗರಿಬೊಮ್ಮನಹಳ್ಳಿ: ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದುಗೊಳಿಸಿರುವುದು ದೇಶದ ಗ್ರಾಮೀಣ ಭಾಗದ ಜನರಿಗೆ ಮಾಡಿದ ಮಹಾಮೋಸ ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಬಿ ರಾಮ್ ಜಿ ಯೋಜನೆಯ ರದ್ದಿಗೆ ಆಗ್ರಹಿಸಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮೀಣ ಜನರಿಗೆ ತಮ್ಮ ತಮ್ಮ ಗ್ರಾಮಗಳಲ್ಲಿಯೇ ಉದ್ಯೋಗ ಕೊಡುವ ಜನಪಯೋಗಿ ಯೋಜನೆಯನ್ನು ರದ್ದು ಮಾಡಿದರೆ ದೇಶದ ಗ್ರಾಮೀಣ ಭಾಗದ ಜನಜೀವನ ಅತಂತ್ರಗೊಳ್ಳುತ್ತದೆ. ಆರ್ಥಿಕ ಸ್ವರೂಪಕ್ಕೆ ಹಿನ್ನಡೆಯಾಗುತ್ತದೆ ಎಂದು ದೂರಿದರು.ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿ, ಈ ಯೋಜನೆಯಿಂದ ಗ್ರಾಮ ಪಂಚಾಯಿತಿಗಳಿಗೆ ಭಾರೀ ಹೊರೆಯಾಗುತ್ತದೆ. ಪ್ರತಿ ಗ್ರಾಪಂಗೂ ವಾರ್ಷಿಕ ₹೧.೨೦ಕೋಟಿ ಖರ್ಚಿನ ಬಾಬತ್ತು ಇದೆ. ಜೊತೆಗೆ ವಿಬಿ ಜಿ ರಾಮ್ ಜಿ ಯೋಜನೆಗೆ ಶೇ.೪೦ ದುಡ್ಡನ್ನು ರಾಜ್ಯವೇ ಭರಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ ಮಾತನಾಡಿ, ಯೋಜನೆಯಲ್ಲಿದ್ದ ಮಹಾತ್ಮ ಗಾಂಧಿ ಹೆಸರನ್ನು ತೆಗೆದು ರಾಮನ ಹೆಸರಿನಲ್ಲಿ ಯೋಜನೆ ಜಾರಿಗೊಳಿಸಲೆತ್ನಿಸುವುದು ದೇಶಕ್ಕೆ ಮಾಡಿರುವ ಅಪಮಾನ ಎಂದು ಜರೆದರು.ಕೂಡಲೇ ಈ ಯೋಜನೆ ಹಿಂಪಡೆದು ಹಳೆಯ ಯೋಜನೆಯನ್ನು ಜಾರಿಗೊಳಿಸದಿದ್ದರೆ ತಾಲೂಕಿನಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯ ಅಂಗವಾಗಿ ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ಬಜಾರ್ನ ಬಸವೇಶ್ವರ ವೃತ್ತದವರೆಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾದಯಾತ್ರೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ್, ಪುರಸಭೆ ಅಧ್ಯಕ್ಷ ಮರಿರಾಮಣ್ಣ, ಸದಸ್ಯರಾದ ರಾಜೇಶ್ ಬ್ಯಾಡಗಿ ಮುಖಂಡರಾದ ಹೆಗ್ಡಾಳು ರಾಮಣ್ಣ, ಚಿಂತ್ರಪಳ್ಳಿ ದೇವೇಂದ್ರಪ್ಪ, ಪಂಚ ಗ್ಯಾರಂಟಿ ತಾಲೂಕು ಅಧ್ಯಕ್ಷ ಗುರುಬಸವರಾಜ್ ಸೊನ್ನದ್, ಜಿಲ್ಲಾ ಉಪಾಧ್ಯಕ್ಷ ಜಂದೀಸಾಬ್, ಗುಂಡ್ರು ಹನಮಂತಪ್ಪ, ತ್ಯಾವಣಗಿ ಕೊಟ್ರೇಶ್ ಪಾಲ್ಗೊಂಡಿದ್ದರು.