ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಅಭಿವೃದ್ಧಿಗೆ ಶಾಸಕರ ಕೊಡುಗೆ ಅಪಾರವಾಗಿದೆ. ಆದರೆ ಕಾರ್ಕಳ ಕಾಂಗ್ರೆಸ್ ಅಭಿವೃದ್ಧಿಗೆ ತಡೆಯೊಡ್ಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆರೋಪಿಸಿದ್ದಾರೆ.ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರವಿದ್ದಾಗ ಪ್ರವಾಸೋದ್ಯಮ ಇಲಾಖೆಯಲ್ಲಿ ಒಟ್ಟು 14 ಕೋಟಿ ರು. ಅನುದಾನಕ್ಕೆ ಮಂಜೂರಾತಿ ನೀಡಿದ್ದು, ಅದರಲ್ಲಿ 6 ಕೋಟಿ ರು. ಹಣ ಬಿಡುಗಡೆಯಾಗಿದೆ. ಉಳಿದ ಹಣವನ್ನು ಕಾಂಗ್ರೆಸ್ ಸರ್ಕಾರ ಬೇರೆ ಕಡೆಗೆ ಸೆಳೆದು ದುರ್ಬಳಕೆ ಮಾಡಿದೆ ಎಂದು ಆರೋಪಿಸಿದರು.
ಕಳೆದ 20 ವರ್ಷಗಳಿಂದ ಕಾಂಗ್ರೆಸ್, ಬಿಜೆಪಿ ಮೇಲೆ ಅಪಪ್ರಚಾರ ಮಾಡುತ್ತಲೇ ಬಂದಿದೆ. ಕಟ್ಟು ಕತೆಗಳನ್ನು ಕಟ್ಟುತ್ತಿದೆ. ಅಭಿವೃದ್ಧಿಯನ್ನು ಅಣಕವಾಡುವುದು, ಅಭಿವೃದ್ಧಿಯ ವೇಗಕ್ಕೆ ತಡೆಯೊಡ್ಡುವುದೇ ಕಾಂಗ್ರೆಸ್ ಸಾಧನೆಯಾಗಿದೆ ಎಂದರು.ಪರಶುರಾಮ ಮೂರ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಕಾಮಗಾರಿ ಆರಂಭಕ್ಕೆ ಜಿಲ್ಲಾಡಳಿತ ತಡೆಯೊಡ್ಡುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಪರಶುರಾಮ ಮೂರ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮೂರ್ತಿಯ ಉಳಿದ ಭಾಗವನ್ನು ತೆರವುಗೊಳಿಸಿ ಮೂರ್ತಿಯನ್ನು ಮರುಸ್ಥಾಪಿಸಲು ಗುತ್ತಿಗೆದಾರ ಕೃಷ್ಣ ನಾಯಕ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, 2 ವಾರದೊಳಗೆ ಮೂರ್ತಿ ತೆರವುಗೊಳಿಸಿ 4 ತಿಂಗಳೊಳಗಾಗಿ ಪರಶುರಾಮ ಮೂರ್ತಿ ಮರುಸ್ಥಾಪಿಸಲು ಗಡುವು ವಿಧಿಸಿ ಅನುಮತಿ ನೀಡಿದೆ. ಆದರೆ ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡದೇ, ಕೃಷ್ಣ ನಾಯಕ್ ಅವರು ಮೂರ್ತಿ ತೆರವು ಕಾಮಗಾರಿ ಆರಂಭಿಸಲು ಮುಂದಾದಾಗ ರಸ್ತೆಗೆ ಮಣ್ಣು ಸುರಿಯುವ ಹೇಯ ಕೃತ್ಯ ಕಾಂಗ್ರೆಸ್ ಮಾಡಿದೆ ಎಂದು ಹೇಳಿದರು.
ಕಳೆದ ಒಂದು ವರ್ಷದಿಂದ ಈಚೆಗೆ ಪರಶುರಾಮ ಥೀಂ ಪಾರ್ಕ್ ಬಗ್ಗೆ ಸಾಕಷ್ಟು ಅಪವಾದಗಳು ಬಂದಿದೆ. ಪರಶುರಾಂ ಥೀಂ ಪಾರ್ಕ್ ಉದ್ಘಾಟನೆಗೊಂಡ ಸಂದರ್ಭದಲ್ಲೇ ಮೂರ್ತಿಯ ಮರುವಿನ್ಯಾಸ ಮಾಡಬೇಕೆಂದು ಹೇಳಿದ್ದರು. ಮೂರ್ತಿಯ ಮರುವಿನ್ಯಾಸ ಹಾಗೂ ಬಲಪಡಿಸುವ ಕುರಿತು ಕಳೆದ ಸೆಪ್ಟೆಂಬರ್ 26ರಂದು ಕೃಷ್ಣ ನಾಯಕ್ ಅವರು ಜಿಲ್ಲಾಧಿಕಾರಿಯಲ್ಲಿ ಅನುಮತಿಯನ್ನು ಕೇಳಿದ್ದರು. ಅತೃಪ್ತ ಆತ್ಮಗಳು ಪರಶುರಾಮ ಮೂರ್ತಿಯನ್ನು ಫೈಬರ್ ಮೂರ್ತಿ ಎನ್ನುತ್ತಿದೆ ಎಂದರು.