ಸಾರಾಂಶ
ಆಗಾಗ್ಗೆ ರಕ್ತದಾನ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಮಟ್ಟ ಕಡಿಮೆಯಾಗುತ್ತದೆ. ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯು ಕಡಿಮೆಯಾಗುತ್ತದೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ದಾನ ಮಾಡಿದ ರಕ್ತ ಶಸ್ತ್ರಚಿಕಿತ್ಸೆಗಳು, ಅಪಘಾತಗಳು, ಹೆರಿಗೆ ಅಥವ ತೀವ್ರತರಹದ ಪರಿಸ್ಥಿತಿಗಳಲ್ಲಿ ಅಗತ್ಯವಾದ ಸಹಾಯವನ್ನು ಮಾಡುವ ಮೂಲಕ ಮೂರು ಜೀವಗಳನ್ನು ಉಳಿಸುತ್ತದೆ ಎಂದು ಮಡಿಕೇರಿ ರಕ್ತನಿಧಿ ಕೇಂದ್ರ ವೈದ್ಯೆ ಸ್ನೇಹಾ ಅಭಿಪ್ರಾಯಿಸಿದರು.ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಮತ್ತು ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ದೊಡ್ಡಮಳ್ತೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ರಕ್ತದಾನ ಶಿಬಿರದಲ್ಲಿ ದಾನಿಗಳ ಆರೋಗ್ಯ ತಪಾಸಣೆ ಮಾಡಿ ನಂತರ ಮಾತನಾಡಿದರು.
ಅಗಾಗ್ಗೆ ರಕ್ತದಾನ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯು ಕಡಿಮೆಯಾಗುತ್ತದೆ. ರಕ್ತದಾನದಿಂದ ರಕ್ತದ ದಪ್ಪ ಕಡಿಮೆಯಾಗಿ ರಕ್ತಪರಿಚಲನೆ ಹೆಚ್ಚಾಗುತ್ತದೆ. ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಂದು ಹೇಳಿದರು.ರಕ್ತದಾನದ ಸಂದರ್ಭ ಆರೋಗ್ಯ ತಪಾಸಣೆ ಆಗುತ್ತದೆ. ರಕ್ತದಾನಿಗಳಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳಿದ್ದರೆ, ರಕ್ತನಿಧಿ ಕೇಂದ್ರದಿಂದ ರೋಗದ ಮಾಹಿತಿ ಸಿಗುತ್ತದೆ. ನಂತರ ಚಿಕಿತ್ಸೆ ಪಡೆದುಕೊಂಡು ಅಪಾಯದಿಂದ ಪಾರಾಗಬಹುದು ಎಂದು ಹೇಳಿದರು. ರಕ್ತದಾನದಿಂದ ಇನ್ನು ಅನೇಕ ಪ್ರಯೋಜನಗಳಿದ್ದು, ಆರೋಗ್ಯವಂತರು 3 ತಿಂಗಳಿಗೊಮ್ಮೆ ಸ್ವಯಂಪ್ರೇರಿತ ರಕ್ತದಾನ ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷೆ ರಶೀದ, ಸದಸ್ಯ ಶಂಕರ್, ಪಿಡಿಒ ಸ್ಮಿತಾ, ರಕ್ತನಿಧಿ ಕೇಂದ್ರದ ಡಾ.ಶಿಫಾ, ಸಮುದಾಯ ಆರೋಗ್ಯ ಅಧಿಕಾರಿ ಧರಣೇಶ್ ಇದ್ದರು. 20 ಮಂದಿ ರಕ್ತದಾನ ಮಾಡಿದರು. ಇದರ ಜೊತೆಯಲ್ಲಿ ನೇತ್ರ ತಪಾಸಣಾ ಶಿಬಿರ ನಡೆಯಿತು.