ರಕ್ತದಾನ ಶಿಬಿರ: 50ನೇ ಬಾರಿ ರಕ್ತದಾನ ಮಾಡಿದ ಪೊಲೀಸ್‌ ಸಿಬ್ಬಂದಿಗೆ ಸನ್ಮಾನ

| Published : Dec 30 2023, 01:15 AM IST

ರಕ್ತದಾನ ಶಿಬಿರ: 50ನೇ ಬಾರಿ ರಕ್ತದಾನ ಮಾಡಿದ ಪೊಲೀಸ್‌ ಸಿಬ್ಬಂದಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಮೆಕೇರಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ಶಿಬಿರದಲ್ಲಿ 50ನೇ ಬಾರಿ ರಕ್ತದಾನ ಮಾಡಿದ ಪೊಲೀಸ್‌ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸ್ವಾಗತ ಯುವಕ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಉತ್ತಮ ಆಡಳಿತ ದಿನದ ಪ್ರಯುಕ್ತ ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12ನೇ ವರ್ಷದ ಗ್ರಾಮೀಣ ಮಟ್ಟದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.

12 ವರ್ಷದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಂದಿ ರಕ್ತದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಗಮನಸೆಳೆದರು. ಮೇಕೇರಿ, ಕಗ್ಗೋಡ್ಲು, ಬಿಳಿಗೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಒಟ್ಟು 73 ಮಂದಿ ರಕ್ತದಾನಿಗಳು ರಕ್ತದಾನ ಮಾಡಿದರು. ಮುಖ್ಯ ಅತಿಥಿಯಾಗಿ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್‌ರಾಜ್ ಪಾಲ್ಗೊಂಡಿದ್ದರು. ಇದೇ ಸಂದರ್ಭ 50ನೇ ಬಾರಿಗೆ ರಕ್ತದಾನ ಮಾಡಿದ ಕೊಡಗು ಜಿಲ್ಲಾ ಪೊಲೀಸ್ ಸಿಬ್ಬಂದಿ ಬಿ.ಎಂ ರಾಮಪ್ಪ, ಎಲ್‌ಎಲ್‌ಬಿ ಪದವಿ ಪೂರೈಸಿದ ಗ್ರಾಮದ ಪದವಿದರರಾದ ಪಿ.ಆರ್. ಪ್ರಜೀತ ರಾಜನ್, ವಿ.ಬಿ ಹರ್ಷಿತಾ, ಸಿ.ವೈ. ಲಿಖಿತ್ ಹಾಗೂ 1974ರಲ್ಲಿ ಮೇಕೇರಿ ಗ್ರಾಮದಲ್ಲಿ ಸ್ವಾಗತ ಯುವಕ ಸಂಘವನ್ನು ಸ್ಥಾಪಿಸಿದ ಸ್ವಾಗತ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಓಡಿಯಾನ ಉಲ್ಲಾಸ್ ಅವರನ್ನು ಸ್ವಾಗತ ಯುವಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.50ನೇ ಬಾರಿಗೆ ರಕ್ತದಾನ ಮಾಡಿದ ಪೊಲೀಸ್ ಸಿಬ್ಬಂದಿ ಬಿ.ಎಂ ರಾಮಪ್ಪ. ಮೂಲತಃ ಮೇಕೇರಿ ಗ್ರಾಮದ ನಿವಾಸಿಯಾಗಿದ್ದು, ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿ.ಎಂ. ರಾಮಪ್ಪ ಅವರು 50ನೇ ಬಾರಿ ರಕ್ತದಾನ ಮಾಡಿದರು.

ಈ ಸಂದರ್ಭ ಮಾತನಾಡಿದ ರಾಮಪ್ಪ, ನಮ್ಮ ಊರಿನಲ್ಲೇ 50ನೇ ಬಾರಿಗೆ ರಕ್ತದಾನ ಮಾಡಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ಅನುಕೂಲವಾಗುತ್ತದೆ. ಅಲ್ಲದೆ ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದರಲ್ಲದೇ ಮಧುಮೇಹ ಮತ್ತು ಬೊಜ್ಜು ಕರಗುವಿಕೆಗೆ ರಕ್ತದಾನ ಮಾಡುವುದರಿಂದ ಸಹಕಾರಿಯಾಗುತ್ತದೆ ಎಂದರು.ಇದೇ ಸಂದರ್ಭ ಗ್ರಾಮದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಕಾರ್ಮಿಕ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಡ್ ನೋಂದಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭ ರಕ್ತದಾನದ ಮಹತ್ವದ ಬಗ್ಗೆ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ, ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಕಾರ್ಮಿಕ ಅಧಿಕಾರಿ ಯತ್ನಟ್ಟಿ, ವಿಶ್ವಕರ್ಮ ಕಾರ್ಡ್ ನೋಂದಣಿ ಮತ್ತು ಅದರ ಪ್ರಯೋಜನಗಳ ಬಗ್ಗೆ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಸಿ.ಎನ್ ರಘು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಮಾತನಾಡಿದರು.ವೇದಿಕೆಯಲ್ಲಿ ಗೌರಿ ಶಂಕರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಕೆ. ಪೂರ್ಣಯ್ಯ, ಮೇಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶುಭಾ ಭರತ್, ಗ್ರಾ.ಪಂ. ಸದಸ್ಯರಾದ ಕೆ.ಎನ್. ಕೀರ್ತನ್, ಎಂ.ಯು. ಹನೀಫ್, ಸುಶೀಲಾ ಮಧು, ಮೇಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸಬಿತಾ ನಾಗೇಶ್, ಎಸ್‌ಡಿಎಂಸಿ ಅಧ್ಯಕ್ಷೆ ಟಿ.ಯು. ಮೀನಾ ಕುಮಾರಿ, ಸ್ವಾಗತ ಯುವಕ ಸಂಘದ ಅಧ್ಯಕ್ಷ ಟಿ.ಎನ್. ಉಮೇಶ್, ಕಾರ್ಯದರ್ಶಿ ಪವನ್, ಖಜಾಂಚಿ ಭವನ್ ಹಾಗೂ ಮಾಜಿ ಅಧ್ಯಕ್ಷರಾದ ಪಿ.ಎಂ ದಾಮೋದರ್ ಸೇರಿದಂತೆ ಸ್ಥಳೀಯರು ಹಾಜರಿದ್ದರು.