ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಭಾರತೀಯ ರೆಡ್ಕ್ರಾಸ್ ಸಂಸ್ಥೆ ತಾಲೂಕು ಘಟಕದ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯ ನಡೆಯಿತು.ತಾಲೂಕಿನ ಗಡಿಭಾಗವಾದ ಕೊಂಡೆನಾಳು ಅಂಗನವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಶಬೀರ್ ಅಹ್ಮದ್ ಹಾಗೂ ಚನ್ನರಾಯಪಟ್ಟಣ ತಾಲೂಕು ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಭರತ್ ಕುಮಾರ್ ಎಚ್. ಜಿ ಹಾಗೂ ಗಣ್ಯರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಶಬೀರ್ ಅಹ್ಮದ್, ಗ್ರಾಮೀಣ ಭಾಗದಲ್ಲಿ ವಿಶ್ವ ರಕ್ತದಾನ ದಿನಾಚರಣೆಯನ್ನು ಆಚರಿಸುತ್ತಿರುವುದು ಖುಷಿಯ ವಿಚಾರ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ವ್ಯವಸ್ಥಿತವಾಗಿ ಆಯೋಜಿಸಿರುವುದು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಜಿಲ್ಲೆಯಾದ್ಯಂತ ರೆಡ್ಕ್ರಾಸ್ ಸಂಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತಿದೆ ಹಾಗೂ ಸಂಸ್ಥೆಯು ಸಾರ್ವಜನಿಕರಿಗೆ ಯಾವ ರೀತಿ ಸಹಾಯ ಮಾಡುತ್ತಿದೆ, ಸಂಸ್ಥೆಯ ಮೂಲ ಉದ್ದೇಶಗಳನ್ನು ಸಾರ್ವಜನಿಕರಿಗೆ ತಿಳಿಸಿದರು.
ತಾಲೂಕು ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಭರತ್ ಕುಮಾರ್ ಎಚ್. ಜಿ ಮಾತನಾಡಿ, ವಿಶ್ವ ರಕ್ತ ದಾನಿಗಳ ದಿನಾಚರಣೆಯನ್ನು ಆಚರಿಸುತ್ತಿರುವುದು ನಮಗೆ ಹಾಗೂ ನಮ್ಮ ಸಂಸ್ಥೆಗೆ ಹೆಮ್ಮೆಯ ವಿಚಾರ. ಯಾಕೆಂದರೆ ರಕ್ತದಾನಿಗಳು ಎಂದರೆ ಇನ್ನೊಂದು ಜೀವಕ್ಕೆ ಜೀವ ದಾನಿಗಳು, ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಕೃತಕವಾಗಿ ರಕ್ತವನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ. ಆದಕಾರಣ ಒಬ್ಬ ಸಹ ಹೃದಯ ರಕ್ತದಾನಿ ರಕ್ತದಾನ ಮಾಡಿದರೆ ಮೂರು ಜನರ ಜೀವ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಚನ್ನರಾಯಪಟ್ಟಣದ ವತಿಯಿಂದ ನಮ್ಮ ಜಿಲ್ಲೆಯಾದ್ಯಂತ ಹಲವು ಬಾರಿ ರಕ್ತದಾನ ಮಾಡಿರುವ ರಕ್ತ ದಾನಿಗಳನ್ನು ಗುರುತಿಸಿ ೯ ರಕ್ತ ದಾನಿಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಹಾಗೂ ಅಭಿನಂಧನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಮತ್ತು ತಾಲೂಕು ರೆಡ್ ಕ್ರಾಸ್ ಸಂಸ್ಥೆಗಳು ಹಲವಾರು ಸಮಾಜಮುಖಿ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ. ಇನ್ನು ಹೆಚ್ಚಿನ ರೀತಿ ಸಾರ್ವಜನಿಕರ ಸೇವೆ ಮಾಡುವಲ್ಲಿ ರೆಡ್ ಕ್ರಾಸ್ ಸಂಸ್ಥೆಯು ನಿರಂತರವಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸುತ್ತದೆ ಎಂದು ತಿಳಿಸಿದರು.ಆಸ್ಪತ್ರೆ ವೈದ್ಯಾಧಿಕಾರಿ ಡಾ. ಐಶ್ವರ್ಯ ಮಾತನಾಡಿ, ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಆಯೋಜಿಸಿದ್ದು, ಈ ಶಿಬಿರದಲ್ಲಿ ಹೆಚ್ಚಿನ ರೀತಿ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮದ ಅನುಕೂಲವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಮಂಜು ಟಿ.ಪಿ, ಗಿರೀಶ್ ಎಂ.ವಿ, ಮಂಜೇಗೌಡ ಎಚ್.ವಿ, ರಾಜಪ್ಪ ಡಿ.ಪಿ, ಸುರೇಶ್ ನಾಯಕ್, ನವೀನ್, ಮಂಜುನಾಥ್, ಸೋಮಶೇಖರ್ ಎಚ್.ಸಿ, ಸಂತೋಷ ಪಿ.ಎನ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು ೨೧೬ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು ಹಾಗೂ ೫೨ ರಕ್ತದಾನಿಗಳು ರಕ್ತದಾನ ಮಾಡಿದರು.
ಇದೇ ಸಂದರ್ಭದಲ್ಲಿ ಹಾಸನದ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಗಿರೀಶ್ ಎಂ. ವಿ, ಜಿಲ್ಲಾ ನಿರ್ದೇಶಕ ಭೀಮ್ ರಾಜ್, ತಾಲೂಕು ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಜಬಿವುಲ್ಲಾ ಬೇಗ್, ಖಜಾಂಚಿ ಕಿಶೋರ್ ಕುಮಾರ್ ಸಿ.ಎಸ್., ನಿರ್ದೇಶಕರುಗಳಾದ ಡಿ. ಪಿ. ರಾಜಪ್ಪ, ಉದಯ ಶಂಕರ್, ಅರಸೀಕೆರೆ ಆರೋಗ್ಯ ನಿರೀಕ್ಷಣಾಧಿಕಾರಿ ರಾಮಪ್ಪ, ಮೈಸೂರಿನ ನಾರಾಯಣ ಆಸ್ಪತ್ರೆ ವೈದ್ಯರಾದ ಡಾ. ಗುಲ್ಜರ್, ಭಾರತಿ, ತನುಜ ಪ್ರಯೋಗಶಾಲಾ ತಜ್ಞರು, ಆಸ್ಪತ್ರೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಹಾಜರಿದ್ದರು.