ಸಾರಾಂಶ
ರೈತರ ಅಹವಾಲು ಆಲಿಸಿ ಕಾಲುವೆಗಳ ದುರಸ್ತೀಕರಣ, ನಾಲೆಗಳ ನಿರ್ಮಾಣ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹಕಾರದಿಂದ ಸರಕಾರದಿಂದ ಸುಮಾರು 300 ಕೋಟಿಗೂ ಹೆಚ್ಚಿನ ಅನುದಾನವನ್ನು ತಂದು ತಾಲೂಕಿನ ವಿವಿಧ ಭಾಗಗಳಲ್ಲಿ ನೀರಾವರಿ ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮದ್ದೂರು ಕ್ಷೇತ್ರವು ಅಭಿವೃದ್ಧಿಯಲ್ಲಿ 20 ವರ್ಷ ಹಿಂದುಳಿದಿದೆ. ವಿಶೇಷ ಅನುದಾನ ತಂದು ಅಭಿವೃದ್ಧಿಪಡಿಸಲು ನೀಲನಕ್ಷೆ ತಯಾರಿಸಿದ್ದೇನೆ ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.ಕಾಡುಕೊತ್ತನಹಳ್ಳಿಯಲ್ಲಿ 5 ಕೋಟಿ ರು. ವೆಚ್ಚದಲ್ಲಿ ಲೋಕಸರ ನಾಲೆ ವ್ಯಾಪ್ತಿಯಲ್ಲಿ ಬರುವ ಕಾಡುಕೋತ್ತನಹಳ್ಳಿ, ಅರೆಚಾಕನಹಳ್ಳಿ ಗ್ರಾಮಗಳ ಅಚ್ಚುಕಟ್ಟು ವ್ಯಾಪ್ತಿಯ ನಾಲಾ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮದ್ದೂರು ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಸಂಕಲ್ಪದೊಂದಿಗೆ ಈಗಾಗಲೇ ಸರಕಾರದಿಂದ ಅನುದಾನ ತಂದು ತುರ್ತಾಗಿ ಆಗಬೇಕಾಗಿರುವ ವಿವಿಧ ಗ್ರಾಮಗಳ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಹಂತ ಹಂತವಾಗಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಹಿಂದೆ ಜನರು ಒಬ್ಬ ಶಾಸಕರನ್ನು ಭೇಟಿಯಾಗಲು ಯಾರೋ ಒಬ್ಬ ಮುಖಂಡನನ್ನು ಭೇಟಿ ಮಾಡಬೇಕಿತ್ತು. ಆದರೆ, ನಾನು ಶಾಸಕನಾದ ಮೇಲೆ ವಾರದಲ್ಲಿ ಕನಿಷ್ಠ 5 ದಿನಗಳಲ್ಲಿ ಕ್ಷೇತ್ರದ ಜನತೆಗೆ ಸಿಗುತ್ತೇನೆ. ಯಾರು ಬೇಕಾದರೂ ಬಂದು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.
ರೈತರ ಅಹವಾಲು ಆಲಿಸಿ ಕಾಲುವೆಗಳ ದುರಸ್ತೀಕರಣ, ನಾಲೆಗಳ ನಿರ್ಮಾಣ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹಕಾರದಿಂದ ಸರಕಾರದಿಂದ ಸುಮಾರು 300 ಕೋಟಿಗೂ ಹೆಚ್ಚಿನ ಅನುದಾನವನ್ನು ತಂದು ತಾಲೂಕಿನ ವಿವಿಧ ಭಾಗಗಳಲ್ಲಿ ನೀರಾವರಿ ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಎಂದರು.ಜಿಪಂ ಮಾಜಿ ಸದಸ್ಯ ಎ.ಎಸ್. ರಾಜೀವ್, ತಾಪಂ ಮಾಜಿ ಅಧ್ಯಕ್ಷ ಕಪನೀಗೌಡ, ಗ್ರಾಪಂ ಅಧ್ಯಕ್ಷ ವೀರಭದ್ರು, ಉಪಾಧ್ಯಕ್ಷ ಲೋಕೇಶ್, ಮಾಜಿ ಅಧ್ಯಕ್ಷರಾದ ಸ್ವಾಮಿ, ದಯಾನಂದ್, ಸದಸ್ಯರಾದ ಕೆಂಪರಾಜು, ರುದ್ರಯ್ಯ, ಮಾಜಿ ಸದಸ್ಯ ರುದ್ರಯ್ಯ, ಮುಖಂಡರಾದ ಗೌಡಪ್ಪ, ಉದ್ಯಮಿ ಮಾದೇಗೌಡ, ಚಿದಂಬರ್ ಸೇರಿದಂತೆ ಮತ್ತಿತರಿದ್ದರು.