ಸಾರಾಂಶ
ಶರಾವತಿ ನದಿಯಲ್ಲಿ ನಡೆಯುತ್ತಿದ್ದ ಬೋಟಿಂಗ್ ಉದ್ಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಹೊನ್ನಾವರ: ಶರಾವತಿ ನದಿಯಲ್ಲಿ ನಡೆಯುತ್ತಿದ್ದ ಬೋಟಿಂಗ್ ಉದ್ಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಬೋಟ್ ಗಳು ನದಿಯ ಅಂಚಿನಲ್ಲಿ ನಿಂತುಕೊಂಡಿವೆ.
ಒಂದೆರಡು ದಿನದ ಹಿಂದೆ ಕಾಸರಕೋಡ ಕಾಂಡ್ಲಾವನದಲ್ಲಿ ಕುಮಟಾ ತಾಲೂಕಿನ ಗಂಗಾವಳಿಯ ಟೂರಿಸ್ಟ್ ಚಾಲಕನೊಬ್ಬನಿಗೆ ಸ್ಥಳೀಯ ಬೋಟಿಂಗ್ ಗೆ ಸಂಬಂಧ ಪಟ್ಟವರು ಹಲ್ಲೆ ಮಾಡಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದೇ ಕಾರಣಕ್ಕೆ ತಾಲೂಕಿನಲ್ಲಿ ಬೋಟಿಂಗ್ ವಿಹಾರ ಸ್ಥಗಿತಗೊಂಡಿದೆ.ಬೋಟಿಂಗ್ ಸ್ಥಗಿತಗೊಂಡಿದ್ದರಿಂದ ಪ್ರವಾಸಿಗರಿಗೆ ನಿರಾಸೆ ಉಂಟಾಗಿದೆ. ಕೆಲವರು ತಾವು ತಂಗಿರುವ ಹೋಟೆಲ್, ಹೋಂ ಸ್ಟೇಗಳಲ್ಲಿಯೇ ಉಳಿದು ಕೊಂಡಿದ್ದಾರೆ. ಇನ್ನು ಕೆಲವರು ಪಕ್ಕದ ತಾಲೂಕಿನ ಮುರುಡೇಶ್ವರ, ಗೋಕರ್ಣ ಕಡೆಗೆ ಹೋಗಿದ್ದಾರೆ.
ಶರಾವತಿ ನದಿಯಲ್ಲಿ ಕಾನೂನುಬದ್ಧವಾಗಿ ಕೆಲವೇ ಬೋಟ್ ಗಳು ಸಂಚಾರ ಮಾಡುತ್ತಿವೆ. ಹೆಚ್ಚಿನ ಬೋಟ್ ಗಳಿಗೆ ಪ್ರವಾಸೋದ್ಯಮ ಅನುಮತಿ ಇಲ್ಲ. ಅನಧಿಕೃತ ಬೋಟ್ ಗಳೇ ಹೆಚ್ಚಿವೆ. ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಬೋಟಿಂಗ್ ಉದ್ಯೋಗವನ್ನು ಸ್ಥಗಿತಗೊಳಿಸಲಾಗಿದೆ.ತಹಸೀಲ್ದಾರ್ ಇನ್ನುಳಿದ ಅಧಿಕಾರಿಗಳು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ಚರ್ಚೆ ಮಾಡಿ ಕಾನೂನುಬದ್ಧವಾಗಿ ಬೋಟಿಂಗ್ ನಡೆಸಲು ಅವಕಾಶ ಮಾಡಿಕೊಡಲಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಮತ್ತು ಬೋಟಿಂಗ್ನವರ ಸಭೆ ಗುರುವಾರ ನಡೆಯುವ ಸಾಧ್ಯತೆ ಇದೆ.