ಸಾರಾಂಶ
ಕಾಣೆಯಾಗಿದ್ದ ನವೋದಯ ಶಾಲೆಯ ವಿದ್ಯಾರ್ಥಿ ಮೃತದೇಹ ಗಾಳಿಬೀಡು ಸಮೀಪದ ಕೂಟುಹೊಳೆಯಲ್ಲಿ ಪತ್ತೆಯಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾಣೆಯಾಗಿದ್ದ ನವೋದಯ ಶಾಲೆಯ ವಿದ್ಯಾರ್ಥಿ ಮೃತದೇಹ ಗಾಳಿಬೀಡು ಸಮೀಪದ ಕೂಟುಹೊಳೆಯಲ್ಲಿ ಪತ್ತೆಯಾಗಿದೆ.ಗಾಳಿಬೀಡಿನಲ್ಲಿರುವ ನವೋದಯ ಶಾಲೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂ.ಅಮಿತ್ (17) ಮೃತ ವಿದ್ಯಾರ್ಥಿಯಾಗಿದ್ದಾನೆ.
ಕಳೆದ ಎರಡು ದಿನಗಳ ಹಿಂದೆ ಅಮಿತ್ ಶಾಲೆಯಿಂದ ನಾಪತ್ತೆಯಾಗಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನವೋದಯ ಶಾಲೆಯ ಸಿಬ್ಬಂದಿ ಆನಂದ್ ಎಂಬವರ ಪುತ್ರನಾಗಿರುವ ಎಂ.ಅಮಿತ್ ಫೆ.11ರಂದು ಬೆಳಗ್ಗೆ 7 ಗಂಟೆಗೆ ಶಾಲಾ ಆವರಣದಲ್ಲಿರುವ ಸಿಬ್ಬಂದಿ ವಸತಿ ಗೃಹದಿಂದ ಶಾಲೆಗೆಂದು ತೆರಳಿದ್ದಾನೆ. 11 ಗಂಟೆಯ ವೇಳೆಗೆ ಅಮಿತ್ ಶಾಲೆಯ ಮುಖ್ಯ ದ್ವಾರದ ಮೂಲಕ ರಸ್ತೆ ಕಡೆಗೆ ಬಂದಿದ್ದಾನೆ.
ಇದನ್ನು ಕಂಡ ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿ ಅಮಿತ್ ಅವರ ತಂದೆ ಆನಂದ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.ತಕ್ಷಣವೇ ಆನಂದ್ ರಸ್ತೆ ಕಡೆಗೆ ಬಂದಿದ್ದು, ಆದ್ರೆ ಅಮಿತ್ ಮಾತ್ರ ಕಂಡು ಬರಲಿಲ್ಲ. ಈ ಕುರಿತು ಆನಂದ್ ಅವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಕೂಟುಹೊಳೆಯಲ್ಲಿ ಶೋಧ:ನವೋದಯ ಶಾಲೆಯ ಮುಂಭಾಗದಲ್ಲೇ ಮಡಿಕೇರಿ ನಗರಕ್ಕೆ ನೀರು ಪೂರೈಸುವ ಕೂಟುಹೊಳೆ ನೀರು ಸಂಗ್ರಹಗಾರವಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ನಿನ್ನೆಯಿಂದ ಕೂಟುಹೊಳೆಯಲ್ಲೂ ಅಮಿತ್ಗಾಗಿ ಶೋಧ ನಡೆಸಿದರು.
ಕೂಟುಹೊಳೆ ದಡದಲ್ಲಿ ಅಮಿತ್ನ ಚಪ್ಪಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರ ಕೋರಿಕೆಯ ಮೇರೆಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ರ್ಯಾಫ್ಟ್ ಬೋಟ್ ಮೂಲಕ ಕೂಟುಹೊಳೆ ಮುಂಭಾಗ ದಿಂದ ಹಿನ್ನೀರಿನವರೆಗೂ ತೆರಳಿ ಶೋಧಿಸಿದರು.ಇದೀಗ ಮೃತ ದೇಹ ಕೂಟು ಹೊಳೆಯಲ್ಲಿ ಪತ್ತೆಯಾಗಿದೆ.