ಮಾದಾರ ಶ್ರೀ ಮನವೊಲಿಸಲು ಮಠಕ್ಕೆ ಬೊಮ್ಮಾಯಿ ಭೇಟಿ?

| Published : Mar 16 2024, 01:52 AM IST

ಸಾರಾಂಶ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್‌ ಗೊಂದಲ ಮುಂದುವರಿದಿರುವ ನಡುವೆಯೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಾದಾರ ಗುರುಪೀಠಕ್ಕೆ ಭೇಟಿ ನೀಡಿ ಮಾದಾರ ಶ್ರೀಗಳ ಜತೆ ಕೆಲಕಾಲ ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್‌ ಗೊಂದಲ ಮುಂದುವರಿದಿರುವ ನಡುವೆಯೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಾದಾರ ಗುರುಪೀಠಕ್ಕೆ ಭೇಟಿ ನೀಡಿ ಮಾದಾರ ಶ್ರೀಗಳ ಜತೆ ಕೆಲಕಾಲ ಚರ್ಚೆ ನಡೆಸಿದರು.ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಮಾದಾರ ಶ್ರೀಗಳನ್ನು ಕಣಕ್ಕಿಳಿಸಲು ಬಿಜೆಪಿ ಆಸಕ್ತಿ ತೋರುತ್ತಿದ್ದು, ಆದರೆ ಶ್ರೀಗಳು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಅವರ ಮನವೊಲಿಕೆ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ ಎಂದು ಹೇಳಲಾಗುತ್ತಿದೆ.ಆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿ ಸಂಸದೀಯ ಮಂಡಳಿ ಕಮಿಟಿ ಸಭೆಯಲ್ಲಿ ಟಿಕೆಟ್ ಕುರಿತು ಚರ್ಚೆ ಆಗಿದೆ. ಮಾದಾರ ಶ್ರೀಗಳಿಗೆ ಟಿಕೆಟ್ ನೀಡುವಂತೆ ನಾನೆಲ್ಲೂ ಚರ್ಚಿಸಿಲ್ಲ ಎಂದರು.ಇದೇ ವೇಳೆ ರಾಜ್ಯದಲ್ಲಿ ಬಾಕಿ ಉಳಿದಿರುವ ಕ್ಷೇತ್ರಗಳ ಟಿಕೆಟ್ ನಾಳೆ ಅಥವಾ ನಾಡಿದ್ದು ಪ್ರಕಟ ಆಗುವ ಸಾಧ್ಯತೆ ಇದೆ ಎಂದ ಅವರು, ಚಿತ್ರದುರ್ಗದ ಹಾಲಿ ಸಂಸದ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಈ ಬಾರಿ ಲೋಕಸಭಾ ಟಿಕೆಟ್‌ ಕೈ ತಪ್ಪುತ್ತದೆ ಎಂಬುದು ಊಹಾಪೋಹ ಎಂದು ಸ್ಪಷ್ಟಪಡಿಸಿದರು.ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸಭೆ ಕರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅವರೊಂದಿಗೆ ನಾನು, ನಮ್ಮ ವರಿಷ್ಠರು ಮಾತನಾಡಿದ್ದೇವೆ. ಎಲ್ಲಾ ಸರಿಹೋಗುತ್ತದೆ ಎಂಬ ಭರವಸೆ ಇದೆ. ಹಾವೇರಿ ಸಂಸದ ಶಿವಕುಮಾರ ಉದಾಸಿ ಕೂಡ ನಮ್ಮ‌ ಜೊತೆಗೆ ಬರುತ್ತಾರೆ ಎಂದರು.