ಬೊಮ್ಮಂಜಿ ಕೇರಿ- ಕೋಟೇರಿ ರಸ್ತೆ ಬದಿ ಒತ್ತುವರಿ ವಿವಾದ

| Published : Jul 12 2024, 01:36 AM IST

ಸಾರಾಂಶ

ಕಕ್ಕಬ್ಬೆ- ನಾಪೋಕ್ಲು ಸಂಪರ್ಕ ರಸ್ತೆಯಿಂದ ಕವಲೊಡೆಯುವ ಹಳೆ ತಾಲೂಕಿನಲ್ಲಿ ಬೊಮ್ಮಂಜಿಕೆರಿ , ಕೋಟೇರಿ ರಸ್ತೆಯ ವ್ಯಕ್ತಿಯೊಬ್ಬರು ಮಂಗಳವಾರ ಜಾಗ ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ವಾಹನ ಸಂಚಾರ, ಪಾದಚಾರಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ನಾಗರಿಕರು ಪಂಚಾಯಿತಿಗೆ ಲಿಖಿತ ದೂರು ಸಲ್ಲಿಸಿದ್ದರು. ಬುಧವಾರ ಸ್ಥಳಕ್ಕೆ ಬಂದ ಪಂಚಾಯಿತಿ ಪ್ರತಿನಿಧಿಗಳು, ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಪೋಕ್ಲಿನಲ್ಲಿ ವ್ಯಕ್ತಿಯೊಬ್ಬರು ಸಾರ್ವಜನಿಕ ರಸ್ತೆ ಬದಿ ಅಕ್ರಮ ಬೇಲಿ ಅಳವಡಿಸಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ನಾಗರಿಕರು ದೂರಿಕೊಂಡಿದ್ದು, ಪಂಚಾಯಿತಿ ಪ್ರತಿನಿಧಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಜನರ ಮುಂದೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಸಾರ್ವಜನಿಕರ ಸಹಕಾರವಿಲ್ಲದೆ ಒತ್ತುವರಿ ತೆರವು ಸಾಧ್ಯವಿಲ್ಲ. ಜನರು, ಪೊಲೀಸರು ಮತ್ತು ಪಂಚಾಯಿತಿಯ ಸಹಯೋಗದಲ್ಲಿ ಮಾತ್ರ ತೆರವು ಸಾಧ್ಯ ಎಂದು ಪಂಚಾಯತಿ ಪ್ರತಿನಿಧಿಗಳು ಹೇಳಿದರೆ, ಗ್ರಾಮ ಪಂಚಾಯಿತಿ ತನಗಿರುವ ಅಧಿಕಾರ ಚಲಾಯಿಸಬೇಕೆಂದು ಸಾರ್ವಜನಿಕರು ವಾದಿಸಿದರು. ಕಕ್ಕಬ್ಬೆ- ನಾಪೋಕ್ಲು ಸಂಪರ್ಕ ರಸ್ತೆಯಿಂದ ಕವಲೊಡೆಯುವ ಹಳೆ ತಾಲೂಕಿನಲ್ಲಿ ಬೊಮ್ಮಂಜಿಕೆರಿ , ಕೋಟೇರಿ ರಸ್ತೆಯ ವ್ಯಕ್ತಿಯೊಬ್ಬರು ಮಂಗಳವಾರ ಜಾಗ ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ವಾಹನ ಸಂಚಾರ, ಪಾದಚಾರಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ನಾಗರಿಕರು ಪಂಚಾಯಿತಿಗೆ ಲಿಖಿತ ದೂರು ಸಲ್ಲಿಸಿದ್ದರು. ಬುಧವಾರ ಸ್ಥಳಕ್ಕೆ ಬಂದ ಪಂಚಾಯಿತಿ ಪ್ರತಿನಿಧಿಗಳು, ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆದರೆ, ಪಂಚಾಯಿತಿ ಪ್ರತಿನಿಧಿಗಳು ಮತ್ತು ಸ್ಥಳೀಯರ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು.

ಈ ಕುರಿತು ಮಾತನಾಡಿರುವ ಕಾಫಿ ಬೆಳೆಗಾರ ಬಿದ್ದಾಟಂಡ ದಿನೇಶ್, ಒಂದು ಸಾಮಾಜಿಕ ಸುವ್ಯವಸ್ಥೆಗಾಗಿ ಕಾನೂನು ಇದೆ. ಅದನ್ನು ಎಲ್ಲರೂ ಪಾಲನೆ ಮಾಡಬೇಕು. ಇಲ್ಲಿ ಕಾನೂನು ಉಲ್ಲಂಘಿಸಿ ರಸ್ತೆ ಅತಿಕ್ರಮಣ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರ ಚಲಾಯಿಸಿ ತೆರವುಗೊಳಿಸಬೇಕು ಎಂದರು. ಒತ್ತುವರಿದಾರರು ನ್ಯಾಯಾಲಯದ ಮೆಟ್ಟಿಲೇರಿದರೆ ಪ್ರಕರಣ ಇತ್ಯರ್ಥವಾಗಲು ಸುದೀರ್ಘ ಸಮಯ ಹಿಡಿಯುತ್ತದೆ. ಅಲ್ಲದೆ, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಿಗೂ ಒತ್ತುವರಿ ತಡೆಯಲು ಜವಾಬ್ದಾರಿಯಿದೆ ಎಂದು ಅವರು ಹೇಳಿದರು.

ಮತ್ತೋರ್ವ ಬೆಳೆಗಾರ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಗ್ರಾಮ ಪಂಚಾಯಿತಿಯವರು ಕಾನೂನು ಮಿತಿಯಲ್ಲಿ ಕಾರ್ಯನಿರ್ವಹಿಸಬೇಕು. ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ, ರಸ್ತೆ ಮಾರ್ಜಿನ್ ಗುರುತು ಮಾಡಿ ಕಾನೂನು ಪ್ರಕಾರ ಕೈಗೊಳ್ಳಲಿ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಬೇಬ ಪ್ರತಿಕ್ರಿಯಿಸಿ, ಸಮಸ್ಯೆ ಪರಿಹಾರಕ್ಕೆ ತೋಟದ ಮಾಲೀಕರ ಸಹಕಾರ ಬೇಕು. ರಸ್ತೆಗೆ ಸಂಬಂಧಿಸಿದ ಕಾನೂನು ತೊಡಕು ನಿವಾರಣೆಗೆ ಸಾರ್ವಜನಿಕರು ಸಹಕರಿಸಬೇಕು. ಸಾರ್ವಜನಿಕರ, ತೋಟದ ಮಾಲೀಕರ ಸಹಕಾರವಿದ್ದರೆ ಗ್ರಾಮ ಪಂಚಾಯಿತಿ, ಪೊಲೀಸ್ ಹಾಗೂ ಕಂದಾಯ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಮಾತನಾಡಿ, ಈ ರಸ್ತೆಯಲ್ಲಿ ಸುಮಾರು ಜನ ಅತಿಕ್ರಮಣ ಮಾಡಿಕೊಂಡಿದ್ದು ಪಂಚಾಯಿತಿಯಿಂದ ಎಲ್ಲರಿಗೂ ನೋಟಿಸ್ ನೀಡಿ ಕೂಡಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಒತ್ತುವರಿಯಾಗಿರುವ ಎಲ್ಲ ಜಾಗಗಳನ್ನು ತೆರವುಗೊಳಿಸಿದರೆ, ತಾವೂ ತೆರವುಗೊಳ್ಳಲು ಸಿದ್ಧ ಎಂದು ಒತ್ತುವರಿದಾರರು ಹೇಳಿದರು.

ಬೇತು, ಕೊಳಕೇರಿವರೆಗೂ ಒತ್ತುವರಿಯಾಗಿದ್ದು ಅಂಥವರಿಗೆ ಅರಿವು ಮೂಡಿಸಿ ತೆರವುಗೊಳಿಸಿ ಎಂದು ನಾಗರಿಕರು ಒತ್ತಾಯಿಸಿ ಜಿಲ್ಲೆಯಾದ್ಯಂತ ರಸ್ತೆ ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿ ಆದೇಶ ನೀಡಬೇಕೆಂದು ಜನರು ಆಗ್ರಹಿಸಿದರು. ಕೆಲವು ರಸ್ತೆಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಒತ್ತುವರಿ ಬಗ್ಗೆ ಆಯಾ ಇಲಾಖೆಯೇ ಗಮನ ಹರಿಸಬೇಕು. ಕಟ್ಟಡ ನಿರ್ಮಾಣಮಾಡುವಾಗ ರಸ್ತೆ ಪರಿಧಿ ಕಾನೂನು ಬದ್ಧವಾಗಿ ಬಿಡಬೇಕು ಎಂದು ಪಂಚಾಯಿತಿ ಸದಸ್ಯರು ಹೇಳಿದರು.

ಗ್ರಾಮ ಪಂಚಾಯತಿ ಸದಸ್ಯ ಕುರೈಸಿ, ಮಹಮ್ಮದ್, ಗ್ರಾಮಸ್ಥರಾದ ಬಿದ್ದಾಟಂಡ ಜೀವನ್ ಕಾರ್ಯಪ್ಪ, ನೀಡುಮಂಡ ಕೃತಿ, ಅಪ್ಪಚ್ಚರ ರಮ್ಮಿ ನಾಣಯ್ಯ, ಅಪ್ಪಾರಂಡ ಸುಭಾಷ್ ತಿಮ್ಮಯ್ಯ ,ಬೋಟ್ಟೋಳಂಡ ಕುಮಾರ್, ಪುಳ್ಳೆರ ದಾದಾ, ಪುಳ್ಳೆರ ಅರುಣ, ಪಟ್ರಪಂಡ ಶರೀನ್, ನೀರನ್,ಅಚ್ಚಂಡ್ರ ಅಪ್ಪಚ್ಚ, ಕೋಟೆ ಮನು, ರಾಜಪ್ಪ, ದಿನೇಶ್‌ ಮತ್ತಿತರರಿದ್ದರು.

ಗಸ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಬಂದೋಬಸ್ತು ನಡೆಸಿದರು.

........................

ಒತ್ತುವರಿದಾರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದರೆ, ವ್ಯಾಜ್ಯ ತೀರ್ಮಾನವಾಗಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ಸಮಯದಲ್ಲಿ ಪಂಚಾಯಿತಿ ಆಡಳಿತ ಮಂಡಳಿಯೂ ಬದಲಾಗಿ, ಪಿಡಿಒಗಳೂ ವರ್ಗವಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಮಾನವೀಯ ನೆಲೆಯಲ್ಲಿ ಒತ್ತುವರಿದಾರರ ಮನವೊಲಿಸಿ ತೆರವುಗೊಳಿಸಲು ನಿರ್ಧರಿಸಲಾಗಿದೆ.

-ಕುಲ್ಲೇಟಿರ ಅರುಣ್ ಬೇಬ ಗ್ರಾಮ ಪಂಚಾಯಿತಿ ಸದಸ್ಯ