ಸಾರಾಂಶ
ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಆಯೋಜನೆಯಲ್ಲಿ ಕೋಡಿ ಹೊಸಬೇಂಗ್ರೆ ಅಂಗನವಾಡಿಯಲ್ಲಿ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ವಚ್ಛ ಹಾಗೂ ಆರೋಗ್ಯವಂತ ಸಮಾಜದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಕನ್ನಡಪ್ರಭ ವಾರ್ತೆ ಕೋಟ
ಇಂದಿನ ಜೀವನ ಪದ್ಧತಿ ಆಧುನಿಕತೆಗೆ ಒಗ್ಗಿಕೊಂಡಿದೆ. ಇದರ ದುಷ್ಪರಿಣಾಮದಿಂದ ಸಾಮಾಜಿಕ ಜೀವನ ಅಧಃಪತನದತ್ತ ಸಾಗುತ್ತಿದೆ. ಈ ಬಗ್ಗೆ ಪೋಷಕರೇ ಜಾಗೃತರಾಗಬೇಕಾದ ಕಾಲ ಎದುರಾಗಿದೆ ಎಂದು ಕೋಟ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಕೋಟ ಮಾಧವ ಪೈ ಹೇಳಿದರು.ಅವರು ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಆಯೋಜನೆಯಲ್ಲಿ ಕೋಡಿ ಹೊಸಬೇಂಗ್ರೆ ಅಂಗನವಾಡಿಯಲ್ಲಿ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ವಚ್ಛ ಹಾಗೂ ಆರೋಗ್ಯವಂತ ಸಮಾಜದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ವ್ಯಾಮೋಹ ಹೆಚ್ಚಿ, ಆಹಾರ ಪದ್ಧತಿಗಳು ಬದಲಾಗಿದೆ. ಇದರಿಂದ ದೇಹ ಮತ್ತು ಮನಸ್ಸಿನ ಮೇಲೆ ವ್ಯತಿರಿಕ್ತ ದುಷ್ಪರಿಣಾಮಗಳಾಗುತ್ತಿವೆ. ಈ ದಿಸೆಯಲ್ಲಿ ದೇಶಿಯ ಆಹಾರ ಪದ್ಧತಿ, ಯೋಗ, ಆಧ್ಯಾತ್ಮಗಳ ಮೊರೆಹೋಗುವ ಅವಶ್ಯಕತೆ ಇದೆ ಎಂದರು.ಕಾರ್ಯಕ್ರಮವನ್ನು ಕೋಡಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಖಾರ್ವಿ ಉದ್ಘಾಟಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಭಾ.ವಿ. ಟ್ರಸ್ಟ್ ಸಂಯೋಜಕ ರಾಘವೇಂದ್ರ ಆಚಾರ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮೀ, ಕೋಡಿ ಗ್ರಾ.ಪಂ. ಸದಸ್ಯರಾದ ಪ್ರಭಾಕರ ಮೆಂಡನ್, ಕೃಷ್ಣ ಪೂಜಾರಿ ಪಿ., ಪಂಚವರ್ಣ ಯುವಕ ಮಂಡಲದ ಮನೋಹರ್ ಪೂಜಾರಿ, ಹೊಸಬೆಂಗ್ರೆ ಅಂಗನವಾಡಿ ಬಾಲಾವಿಕಾಸ ಸಮಿತಿ ಅಧ್ಯಕ್ಷೆ ಸುಲೋಚನಾ, ಸದಸ್ಯರಾದ ನಿರ್ಮಲಾ, ಸಂಜೀವಿನಿ ಸಂಘ ಅಧ್ಯಕ್ಷೆ ದೀಪಾ ಖಾರ್ವಿ, ಸ್ಥಳೀಯರಾದ ಸುಜಾತಾ ಖಾರ್ವಿ, ಜ್ಯೋತಿ ಜೆ., ಸುಮತಿ ಹಾಗೂ ಸ್ತ್ರಿಶಕ್ತಿ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಕೋಡಿ ಹೊಸಬೇಂಗ್ರೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್. ಕುಂದರ್ ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತಾ ಬಾಯರಿ ನಿರೂಪಿಸಿದರು. ಪಂಚವರ್ಣದ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ವಂದಿಸಿದರು.