ಸಾರಾಂಶ
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ
ಕನ್ನಡಪ್ರಭ ವಾರ್ತೆ ಕೊಪ್ಪಳಶಿಶುವಿನ ದೈಹಿಕ ಮತ್ತು ಮಾನಸಿಕ, ಸರ್ವತೋಮುಖ ಬೆಳವಣಿಗೆಗೆ 6 ತಿಂಗಳವರೆಗೆ ಕೇವಲ ತಾಯಿ ಎದೆಹಾಲು ಮಾತ್ರ ಕುಡಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಮ್ಮ ಕ್ಲಿನಿಕ್, ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ 3ನೇ ವಾರ್ಡಿನಲ್ಲಿರುವ ನಮ್ಮ ಕ್ಲಿನಿಕ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನ್ಯೂಮೋನಿಯಾ, ಅತಿಸಾರಭೇದಿ, ಅಪೌಷ್ಟಿಕತೆ ಇತ್ಯಾದಿ ತೊಂದರೆಗಳಿಂದ ಮಗುವನ್ನು ರಕ್ಷಿಸಲು ಹುಟ್ಟಿದ ಅರ್ಧ ಗಂಟೆಯೊಳಗೆ ತಾಯಿ ಎದೆಹಾಲನ್ನು ಕುಡಿಸಬೇಕು. ಹೆರಿಗೆಯಾದ ಮೊದಲ 3 ದಿನದಲ್ಲಿ ಬರುವ ಹಾಲಿನಲ್ಲಿ ಕೋಲಾಸ್ಟ್ರಂ ಎಂಬ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಮಗುವಿಗೆ ಎದೆಹಾಲು ಕುಡಿಸುವುದರಿಂದ ತಾಯಿಗೆ ಸ್ತನಕ್ಯಾನ್ಸರ್ ಬರುವುದಿಲ್ಲ. ಇದು ಮಗುವಿಗೆ ಸರಳವಾಗಿ ಜೀರ್ಣವಾಗುವುದಲ್ಲದೇ ಇದರಿಂದ ತಾಯಿ ಮಗುವಿನ ಬಾಂಧವ್ಯ ಹೆಚ್ಚಾಗುತ್ತದೆ. ಮಗುವಿನ ಬುದ್ದಿಮಟ್ಟವೂ ಹೆಚ್ಚಾಗುತ್ತದೆ. ಪ್ರತಿದಿನ 8 ರಿಂದ 10 ಬಾರಿ ತಾಯಿಯ ಎದೆಹಾಲು ನೀಡಬೇಕು. ಎದೆಹಾಲು ತಾಯಂದಿರಲ್ಲಿ ಹೆಚ್ಚಾಗಬೇಕಾದರೆ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಹಾಗೂ ಇದರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡು ಇತರರಿಗೂ ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಆ.1ರಿಂದ ಆ.7 ರವರೆಗೆ ಕೊರತೆಗಳನ್ನು ಕೊನೆಗೊಳಿಸಿ: ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತದೆ. ಇದರ ಉದ್ದೇಶ ಪ್ರತಿ ಗರ್ಭೀಣಿ, ಬಾಣಂತಿಯರಿಗೆ, ಶಿಶುವಿಗೆ ಎದೆಹಾಲು ಕುಡಿಸುವ ಕುರಿತು ಅರಿವು ಮೂಡಿಸುವುದಾಗಿದೆ. ಭಾರತ ಹಳ್ಳಿಗಳ ದೇಶ, ಹಳ್ಳಿಗಳು ಅಭಿವೃದ್ಧಿಯಾದರೇ ದೇಶ ಅಭಿವೃದ್ಧಿಯಾದಂತೆ, ಹಳ್ಳಿಯಲ್ಲಿ ವಾಸಮಾಡುವ ಪ್ರತ್ರಿಯೊಬ್ಬ ತಾಯಂದಿರು ಇದರ ಬಗ್ಗೆ ತಿಳಿದುಕೊಂಡು ಇತರರಿಗೂ ತಿಳಿಸಬೇಕೆಂದು ಹೇಳಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಮಾತನಾಡಿದರು. ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಹೇಶ ಉಮಚಗಿ ಡೆಂಘೀ ನಿಯಂತ್ರಣ, ಸಾಂಕ್ರಾಮಿಕ ರೋಗ, ಆರ್.ಸಿ.ಎಚ್ ಕಾರ್ಯಕ್ರಮ ಹಾಗೂ ಕ್ಷಯರೋಗ ನಿರ್ಮೂಲನೆ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಮಾತನಾಡಿ, ಎದೆಹಾಲು ಕುಡಿಸುವುದರಿಂದ ತಾಯಿ ಮತ್ತು ಮಗುವಿಗೆ ಆಗುವ ಅನುಕೂಲತೆ ಬಗ್ಗೆ ಹಾಗೂ ಎದೆಹಾಲು ನೀಡುವ ವಿಧಾನಗಳ ಬಗ್ಗೆ ಹಾಗೂ ಕುಷ್ಠರೋಗ ಪತ್ತೆಹಚ್ಚುವ ಅಭಿಯಾನ ಕುರಿತು ವಿವರವಾಗಿ ತಿಳಿಸಿದರು.ಕಿರುನಾಟಕದ ಮೂಲಕ ಜಾಗೃತಿ:
ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಿರುನಾಟಕ ಮಾಡುವುದುರ ಮೂಲಕ ಜಾಗೃತಿ ಮೂಡಿಸಿದರು.ಕಾರ್ಯಕ್ರಮದಲ್ಲಿ ನಮ್ಮ ಕ್ಲಿನಿಕ್ನ ವೈದ್ಯಾಧಿಕಾರಿ ಡಾ. ನಿವೇದಿತಾ, ಶಾಲಾ ಶಿಕ್ಷಕಿ ಲಕ್ಷ್ಮೀಬಾಯಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ವಿ. ಸಜ್ಜನ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಗರ್ಭೀಣಿಯರು, ಬಾಣಂತಿಯರು ಭಾಗವಹಿಸಿದ್ದರು.