ಸಾರಾಂಶ
ಗದಗ ತಾಲೂಕಿನ ಎಚ್.ಎಸ್. ವೆಂಕಟಾಪುರ ಗ್ರಾಮದ ಬಳಿ ಜಮೀನೊಂದರಲ್ಲಿ ಅಳವಡಿಸಿದ್ದ ವಿಂಡ್ ಫ್ಯಾನಿನ ರೆಕ್ಕೆ ಮುರಿದು ಬಿದ್ದು ರೈತರಲ್ಲಿ ಆತಂಕ ಹೆಚ್ಚಾಗಿದೆ.
ಗದಗ: ತಾಲೂಕಿನ ಎಚ್.ಎಸ್. ವೆಂಕಟಾಪುರ ಗ್ರಾಮದ ಬಳಿ ಜಮೀನೊಂದರಲ್ಲಿ ಅಳವಡಿಸಿದ್ದ ವಿಂಡ್ ಫ್ಯಾನಿನ ರೆಕ್ಕೆ ಮುರಿದು ಬಿದ್ದು ರೈತರಲ್ಲಿ ಆತಂಕ ಹೆಚ್ಚಾಗಿದೆ.
ಗ್ರಾಮದ ರಾಜೇಶ ಪಾಟೀಲ ಎಂಬುವವರ ಜಮೀನಿನಲ್ಲಿ ಕಳೆದ ಒಂದು ವರ್ಷದ ಹಿಂದೆ ರಿನ್ಯೂ ಕಂಪನಿಯಿಂದ ಅಳವಡಿಸಿದ್ದ ವಿಂಡ್ ಫ್ಯಾನ್ ರೆಕ್ಕೆ ಮುರಿದು ಬಿದ್ದಿದ್ದು, ಜಮೀನು ಸೇರಿದಂತೆ ಅಕ್ಕ-ಪಕ್ಕದ ಜಮೀನುಗಳಲ್ಲಿ ಗಾಳಿ ರಭಸಕ್ಕೆ ರೆಕ್ಕೆಯ ಅವಶೇಷಗಳು ಬಿದ್ದಿವೆ. ಇದರಿಂದ ಜಮೀನಿನಲ್ಲಿದ್ದ ಬೆಳೆ ನಾಶವಾಗಿದೆ. ಅಷ್ಟೇ ಅಲ್ಲದೆ ಜಮೀನಿನಲ್ಲಿ ರೈತರು ಕೃಷಿ ಚಟುವಟಿಕೆ ಮಾಡುವಾಗ ರೈತರ ಮೈಮೇಲೆ ಏಕಾಏಕಿ ಈ ರೀತಿ ವಿಂಡ್ ಫ್ಯಾನ್ ರೆಕ್ಕೆಗಳು ಮುರಿದು ಬಿದ್ದು ಜೀವಕ್ಕೆ ಹಾನಿಯಾದರೆ ಯಾರು ಹೊಣೆ ಎಂದು ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.ದಿನ ನಿತ್ಯ ರೈತರು ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುತ್ತಾರೆ. ಈ ಘಟನೆಯಂತೆ ಏಕಾ ಏಕಿ ವಿಂಡ್ ಫ್ಯಾನ್ ರೆಕ್ಕೆಗಳು ಮುರಿದು ಗಾಳಿ ರಭಸಕ್ಕೆ ದೂರದಿಂದ ಬಂದು ರೈತರ ಮೇಲೆ ಬಿದ್ದರೆ ಏನು ಎಂಬ ಆತಂಕದಿಂದ ಈ ಭಾಗದಲ್ಲಿ ರೈತರು ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.