ಡಿಸಿಸಿ ಬ್ಯಾಂಕ್‌ಗೆ ನಾಲ್ಕೇ ತಿಂಗಳಲ್ಲಿ ಲಾಭ ತಂದಿದ್ದೆ: ಆರ್‌ಎಂಎಂ

| Published : Nov 07 2023, 01:31 AM IST

ಡಿಸಿಸಿ ಬ್ಯಾಂಕ್‌ಗೆ ನಾಲ್ಕೇ ತಿಂಗಳಲ್ಲಿ ಲಾಭ ತಂದಿದ್ದೆ: ಆರ್‌ಎಂಎಂ
Share this Article
  • FB
  • TW
  • Linkdin
  • Email

ಸಾರಾಂಶ

ತೀರ್ಥಹಳ್ಳಿಯಲ್ಲಿ ತೌರೂರ ಸಂಮಾನ ಸ್ವೀಕಾರ

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

1996ರಲ್ಲಿ ₹21 ಕೋಟಿ ನಷ್ಟದಲ್ಲಿದ್ದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕೇವಲ 4 ತಿಂಗಳ ಅವಧಿಯಲ್ಲಿ ಲಾಭ ಗಳಿಸುವಂತೆ ಮಾಡಿದ್ದೇನೆ. ಸಹಕಾರಿ ಕ್ಷೇತ್ರದಲ್ಲಿ ಶಾಸಕ, ಸಚಿವರು ಮಾಡಲಾಗದ ಸಾಹಸ ಮಾಡಿದ್ದೇನೆ ಎಂದು ಆರ್.ಎಂ. ಮಂಜುನಾಥ ಗೌಡ ಹೇಳಿದರು.

ಸೋಮವಾರ ಪಟ್ಟಣದ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಹಕಾರಿ ವೇದಿಕೆ ವತಿಯಿಂದ ಹಮ್ಮಿಕೊಂಡ "ತೌರೂರ ಸಂಮಾನ " ಸ್ವೀಕರಿಸಿ ಅವರು ಮಾತನಾಡಿ, ಗುಡ್ಡೇಕೊಪ್ಪ ಸೊಸೈಟಿ ಸೇರಿದಂತೆ ಮುಚ್ಚುತ್ತಿದ್ದ 100ಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಪುನರ್ ಸ್ಥಾಪನೆ ಮಾಡಿದ್ದೇನೆ. ಬಿಳಿ ಬಟ್ಟೆ ತೊಡುವವರೆಲ್ಲರೂ ಪ್ರಾಮಾಣಿಕರಲ್ಲ. ಬಿ.ಎಸ್. ಯಡಿಯೂರಪ್ಪ ಜೈಲಿನಲ್ಲಿದ್ದ ಸಂದರ್ಭ ತನ್ನ ಜೊತೆಗೆ ಇರುವಂತೆ ಬೇಡಿಕೊಂಡಿದ್ದರು. ಅವರ ಮಾತುಕೇಳಿ ರಾಜಕೀಯಕ್ಕೆ ಪ್ರವೇಶಿಸಿದ್ದೇ ನನ್ನ ತಪ್ಪಾ ಎಂದು ಪ್ರಶ್ನಿಸಿದರು.

ಡಿಸಿಸಿ ಬ್ಯಾಂಕ್ ಈಗಿನ ಸಾವಿರಾರು ಕೋಟಿ ವ್ಯವಹಾರಕ್ಕೆ ನಾನು ಅಂದು ತೆಗೆದುಕೊಂಡ ನಿರ್ಧಾರಗಳೇ ಪ್ರಮುಖ ಕಾರಣ. ಇಷ್ಟೆಲ್ಲ ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ನೀಡಿದರೂ, ನನ್ನ ಮೇಲೆ ಇಲ್ಲಸಲ್ಲದ ಆರೋಪ ಕಟ್ಟಿದ್ದಾರೆ. ದೇಶದ ಎಲ್ಲ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಸಹಕಾರ ಮತ್ತು ರಾಜಕೀಯವಾಗಿ ಮುಗಿಸಲು ಸಂಚು ನಡೆಸಿದ್ದರು. ಕಟ್ಟಿ ಬೆಳೆಸಿದ ಸಂಸ್ಥೆಯಿಂದ ಕೆಟ್ಟ ಹೆಸರು ಬಂತೆಂಬ ಬೇಜಾರು ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಸಹಕಾರಿ ದಿ. ಬಿ.ಎಸ್. ವಿಶ್ವನಾಥ್ ದೇಶದಲ್ಲಿ ಸಾವಿರಾರು ಸಹಕಾರಿ ಸಂಸ್ಥೆಗಳನ್ನು ಕಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಂಡ ಓರ್ವ ಸಹಕಾರಿ ಸಂಘಟಕ. ಅಂಥವರಿಗೆ ಕೊನೆಯ ಗಳಿಗೆಯಲ್ಲಿ ಮಾನಸಿಕ ಹಿಂಸೆ ನೀಡಿದ್ದರು. ಹಿಂದಿನಿಂದ ಕಾಲೆಳೆದು ಮುಂದಿನಿಂದ ಹೊಗಳುವವರ ಸಂಖ್ಯೆ ಹೆಚ್ಚಿದೆ. ಸಹಕಾರಿ ಸಂಘಗಳನ್ನು ಮುಚ್ಚಿದವರಿಗೆ ನನ್ನ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದು ಪರೋಕ್ಷವಾಗಿ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಲು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಸಾಧ್ಯವಾಗಿಲ್ಲ. ಕೇಂದ್ರದಿಂದ ಸಹಕಾರಿ ಸಂಸ್ಥೆ ಮುಗಿಸುವ ಹುನ್ನಾರ ನಡೆಯುತ್ತಿದೆ. ನಬಾರ್ಡ್‌ನಿಂದ ಬರಬೇಕಾದ ರಾಜ್ಯದ ಪಾಲು ₹6,430 ಕೋಟಿ ಹಣ ಬಂದಿಲ್ಲ. ಸಹಕಾರಿ ಶ್ರೀಮಂತರ ವ್ಯವಸ್ಥೆಯಲ್ಲ ಸಾಮಾನ್ಯ ಜನರ ಚಳವಳಿ ಆಗಬೇಕು ಎಂದು ಹೇಳಿದರು.ಸಹಕಾರಿ ವೇದಿಕೆ ಅಧ್ಯಕ್ಷ ಬಸವಾನಿ ವಿಜಯದೇವ್ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ಎನ್ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಸಹಕಾರಿಗಳಾದ ಕೆ.ರತ್ನಾಕರ್, ಮುಡುಬ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಷಡಕ್ಷರಿ, ಕಲಗೋಡು ರತ್ನಾಕರ ಇದ್ದರು.

- - - ಕೋಟ್ಸ್‌ ಅಡಕೆ ಮಂಡಿಯಲ್ಲಿ ಸಾಲ ಸಿಗುತ್ತಿದ್ದ ಕಾಲದಲ್ಲಿ ಬಡವರು ಕಣ್ಣೀರು ಹಾಕಬೇಕಿತ್ತು. ಸಹಕಾರಿ ಸಂಘ ಸಾಲ ನೀಡಲು ಆರಂಭಿಸಿದ ಮೇಲೆ ಸಮಾಜದಲ್ಲಿ ಆತ್ಮಸೈರ್ಯ ಹೆಚ್ಚಿದೆ. ಸರ್ಕಾರ ಎಲ್ಲರನ್ನು ರಕ್ಷಿಸಲು ಸಾಧ್ಯವಿಲ್ಲ. ಬಹುತ್ವ ಭಾರತ ನಿರ್ಮಾಣಗೊಳ್ಳಲು ಸಹಕಾರಿ ಕ್ಷೇತ್ರ ಅಗತ್ಯವಾಗಿದೆ. ಮಾದ್ಯಮ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು – ಕಿಮ್ಮನೆ ರತ್ನಾಕರ, ಮಾಜಿ ಸಚಿವ

- - - ರಾಜಕೀಯ ನಿಂತ ನೀರಲ್ಲ. ಒಬ್ಬರನೊಬ್ಬರು ದೂಷಿಸುವುದು ಸಾಮಾನ್ಯ. ಡಿಸಿಸಿ ಬ್ಯಾಂಕ್ನ ಹಿಂದಿನ ಅವಧಿಯಲ್ಲಿ ನಡೆದ ಅವ್ಯವಹಾರ ತನಿಖೆ ಮಾಡಿಸಿದರೆ ಕೆಲವರು ಜೈಲಿಗೆ ಹೋಗುತ್ತಾರೆ. ಬಿ.ಎಸ್.ಯಡಿಯೂರಪ್ಪ ಬ್ಯಾಂಕ್ ವ್ಯವಹಾರದಲ್ಲಿ ತಲೆಹಾಕಿಲ್ಲ. ಅವರ ಮಕ್ಕಳ ಪಾತ್ರವಿದೆ. ರೈತರು, ಬಡವರು ಸಂಕಷ್ಟದಲ್ಲಿದ್ದು ಸರ್ಕಾರದ ನೆರವು ಬೇಕಿದೆ

- ಬೇಳೂರು ಗೋಪಾಲಕೃಷ್ಣ, ಶಾಸಕ, ಸಾಗರ

- - - ರೈತರಿಗೆ ಸಾಲ ಮಂಜೂರು ಮಾಡುವ ಹಣಕಾಸು ನೆರವಿನ ಅಳತೆ ಪ್ರಮಾಣ ಬದಲಾಗಬೇಕು. ಸಹಕಾರಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಗಟ್ಟಿಯಾಗಿದ್ದರೆ ಪ್ರಜಾಪ್ರಭುತ್ವ ಉಳಿಯುತ್ತದೆ.– ಜಿ.ಎಸ್. ನಾರಾಯಣ ರಾವ್, ಎನ್ಇಎಸ್ ಅಧ್ಯಕ್ಷ - - -ಬೇತಾಳನ ಹೊತ್ತ ವಿಕ್ರಮಾದಿತ್ಯನಂತೆ ಕಷ್ಟ, ನೋವು, ಸವಾಲುಗಳನ್ನು ಎದುರಿಸಿ ಮಂಜುನಾಥ ಗೌಡರು ಪರಿಪಕ್ವವಾಗಿದ್ದಾರೆ. ರಾಜಕೀಯವಾಗಿ ಅವರು ಬಿದ್ದಾಗ ನಾನು ಕಲ್ಲು ಹೊಡೆದಿದ್ದೇನೆ. ವಿರೋಧಿಗಳ ಇಡಿ, ಐಟಿ, ಸಿಬಿಐ ಅಸ್ತ್ರ ಫಲ ನೀಡದು

– ಆಯನೂರು ಮಂಜುನಾಥ, ವಿಪ ಮಾಜಿ ಸದಸ್ಯ

- - -

ಬಾಕ್ಸ್‌

ಬೈಕ್ ರ್ಯಾಲಿ, ಬೃಹತ್ ಸೇಬಿನ ಹಾರ ತೀರ್ಥಹಳ್ಳಿ ಪಟ್ಟಣದಲ್ಲಿ ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ್ ಗೌಡ ಅವರಿಗೆ ಹಮ್ಮಿಕೊಂಡಿದ್ದ "ತೌರೂರ ಸಂಮಾನ " ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಗಾಂಧಿ ಭವನದ ಕಾಂಗ್ರೆಸ್ ಕಚೇರಿಯಿಂದ ಹೊರಟ ಬೈಕ್ ರ್ಯಾಲಿಯೊಂದಿಗೆ ಚಂಡೆ, ಹುಲಿವೇಷ ತಂಡದೊಂದಿಗೆ ಸಾವಿರಾರು ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿದರು.

ಪಟ್ಟಣದ ಗಾಂಧಿಚೌಕದಲ್ಲಿ ಆರ್.ಎಂ. ಮಂಜುನಾಥ್ ಗೌಡರಿಗೆ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಪಟಾಕಿ ಸಿಡಿಸಿ, ಅಭಿಮಾನಿಗಳು ಜಯಘೋಷ ಕೂಗಿ ಹರ್ಷ ವ್ಯಕ್ತಪಡಿಸಿದರು. ಮೆರವಣಿಗೆಯು ಸಮಾರಂಭ ನಡೆಯುವ ರಂಗಮಂದಿರದತ್ತ ಸಾಗಿತು.

- - - -6ಟಿಟಿಎಚ್‌01:

ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಹಕಾರಿ ವೇದಿಕೆ ವತಿಯಿಂದ ಹಮ್ಮಿಕೊಂಡ ತವರೂರ ಸನ್ಮಾನ ಕಾರ್ಯಕ್ರಮಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಡಿಸಿಸಿ ಬ್ಯಾಂಕ್‌ ಆರ್‌.ಎಂ. ಮಂಜುನಾಥ್‌ ಅವರಿಗೆ ಅಭಿಮಾನಿಗಳು ಸೇರಿನ ಹಾರ ಹಾಕಿ, ಅಭಿಮಾನ ಮೆರೆದು, ಸ್ವಾಗತಿಸಿದರು.