ಕನ್ನಡಪ್ರಭ ವಾರ್ತೆ ವಿಜಯಪುರ

ಈ ಶತಮಾನದ ಹೋರಾಟಗಾರ, ರಾಜಕೀಯ ಅಜಾತಶತ್ರು, ಹಿರಿಯ ಮುತ್ಸದ್ದಿ ಬಿ.ಎಸ್‌.ಯಡಿಯೂರಪ್ಪನವರು ರಾಜಕೀಯದಲ್ಲಿ ಅರ್ಧಶತಕ ಪೂರೈಸಿದ ಹಿನ್ನೆಲೆಯಲ್ಲಿ ಜನರ ಮಡಿಲಲ್ಲಿ ಸಾರ್ಥಕ 50 ವರುಷ, ಬಿಎಸ್‌ವೈ ಅಭಿಮಾನೋತ್ಸವ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ‌ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ ಹೇಳಿದರು.ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮ ಮೇ 9, 2026ರಂದು ಬೆಳಗ್ಗೆ 11ಕ್ಕೆ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ ಶಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 10 ಲಕ್ಷಕ್ಕೂ ಅಧಿಕ ಜನರು ಬಿಎಸ್‌ವೈ ಅವರ ಅಭಿಮಾನಿಗಳು, ಮಹಿಳೆಯರು, ರೈತರು ಹಾಗೂ ನಾಡಿನ ಜನತೆ ಭಾಗವಹಿಸಲಿದ್ದಾರೆ. ಜಿಲ್ಲೆಯಿಂದ 20 ಸಾವಿರ ಅಭಿಮಾನಿಗಳು ಭಾಗವಹಿಸಲಿದ್ದು, ರಾಜ್ಯದ ಎಲ್ಲ ಸ್ಬಾಮೀಜಿಗಳು ಹಾಗೂ ಧರ್ಮಗುರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದರೊಟ್ಟಿಗೆ ಬಿಎಸ್‌ವೈ ಜಾರಿಗೆ ತಂದಿದ್ದ ಜನಪ್ರೀಯ ಯೋಜನೆಯಾದ ಭಾಗ್ಯಲಕ್ಷ್ಮಿ ಯೋಜನೆಯ 50 ಸಾವಿರ ಫಲಾನುಭವಿಗಳು ಹಾಗೂ ಶಾಲಾ ಮಕ್ಕಳಿಗೆ ನೀಡಿದ್ದ ಬೈಸಿಕಲ್ ಯೋಜನೆಯ 50 ಸಾವಿರ ಫಲಾನುಭವಿ ಮಕ್ಕಳನ್ನು ಗುರುತಿಸಿ ಕಾರ್ಯಕ್ರಮಕ್ಕೆ ಕರೆತರಲಾಗುತ್ತಿದೆ. ಇನ್ನುಳಿದಂತೆ ಬಿಎಸ್‌ವೈ ರವರ ಸಮಪಾಲಿನವರು ಹಾಗೂ ಅವರ ಹೋರಾಟಗಳಲ್ಲಿ ಸಾಥ್ ನೀಡಿದವರನ್ನು ಗುರುತಿಸಿ ಈ ಕಾರ್ಯಕ್ರಮಕ್ಕೆ ಕರೆತರಲಾಗುವುದು ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ‌ ನಡಹಳ್ಳಿ ಮಾತನಾಡಿ, ನಮ್ಮ ಜಿಲ್ಲೆಯಿಂದ ಬಿಎಸ್‌ವೈ ಅಭಿಮಾನೋತ್ಸವಕ್ಕೆ ಕನಿಷ್ಠ 20ಸಾವಿರ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಯಡಿಯೂರಪ್ಪನವರು ಅಜಾತಶತ್ರುವಾಗಿದ್ದು, ಎಲ್ಲ‌ ಸಮುದಾಯ, ಎಲ್ಲ ಪಕ್ಷ, ಎಲ್ಲ‌ ಧರ್ಮದವರನ್ನು ಸಮಾನರಾಗಿ ಕಂಡವರಾಗಿದ್ದಾರೆ ಎಂದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಯಡಿಯೂರಪ್ಪನವರು ವಿಜಯಪುರ ಜಿಲ್ಲೆಗೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದು, ಪ್ರಮುಖವಾಗಿ ವಿಮಾನ ನಿಲ್ದಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದೇ ಯಡಿಯೂರಪ್ಪನವರು. ದೆಹಲಿಯಲ್ಲಿ ಸೇವೆ ಸಲ್ಲಿಸುವ ಪತ್ರಕರ್ತರಿಗೆ ಅನೇಕ ತೊಂದರೆಗಳಿದ್ದವು. ಬಿಎಸ್‌ವೈ ಸಿಎಂ ಇದ್ದಾಗ ಪತ್ರಕರ್ತರಿಗೆ ಉಚಿತವಾಗಿ ಊಟ ಹಾಗೂ ವಸತಿ ಸೌಲಭ್ಯದ ಅನುಕೂಲ ಕಲ್ಪಿಸಿಕೊಟ್ಟವರು ಯಡಿಯೂರಪ್ಪನವರು ಎಂದರು.

ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡ ವಿಜುಗೌಡ ಪಾಟೀಲ ಮಾತನಾಡಿದರು.


ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಂಜಯ ಪಾಟೀಲ, ಕಾಸುಗೌಡ ಬಿರಾದಾರ ಹಾಗೂ ವಿಜಯ ಜೋಶಿ ಇದ್ದರು.ರೈತರ ಅಭಿವೃದ್ಧಿಗಾಗಿ ದೇಶದಲ್ಲೇ ಪ್ರತ್ಯೇಕ ರೈತ ಬಜೆಟ್ ಮಂಡನೆ ಮಾಡಿದ್ದು ಯಡಿಯೂರಪ್ಪನವರು. ರೈತರಿಗೆ ಉಚಿತ ವಿದ್ಯುತ್ ಹಾಗೂ ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಹಾಕಿದ್ದಾರೆ. ಕೃಷ್ಣಾ ನೀರಾವರಿ ಯೋಜನೆಗೆ ಬಿ ಸ್ಕೀಂ ಯೋಜನೆಯ ಕಾಮಗಾರಿ ಆರಂಭವಾಗಲು ಮುಖ್ಯ ಕಾರಣಿಕರ್ತರು ಅವರು. ಜಿಲ್ಲೆಯ ಎಲ್ಲ 120 ಕೆರೆ ತುಂಬಿಸಿದ್ಧಾರೆ ಎಂದರು. ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ರೂವಾರಿಯಾಗಿದ್ದಾರೆ.

- ಎಸ್.ಪಾಟೀಲ‌ ನಡಹಳ್ಳಿ, ರಾಜ್ಯಾಧ್ಯಕ್ಷರು, ಬಿಜೆಪಿ ರೈತ ಮೋರ್ಚಾ