ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ವತಿಯಿಂದ ನಡೆಯುವ ಸತ್ಸಂಗಕ್ಕೆ ಬೆಂಗಳೂರಿನ ಧರ್ಮಶಾಸ್ತ್ರಗಿರಿಯ ರಾಮದಾಸ್ ಆಶ್ರಮದ ಶ್ರೀ ಶಕ್ತಿ ಶಾಂತಾನಂದ ಮಹರ್ಷಿ ಅವರು ಭಾನುವಾರ ಮುಂಜಾನೆ ಆಗಮಿಸಿದಾಗ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.ದೇವಸ್ಥಾನದಲ್ಲಿ ಶ್ರೀಗಳು ಶ್ರೀದೇವರ ದರ್ಶನ ಮಾಡಿ ಆರತಿ ಬೆಳಗಿಸಿದರು. ನಂತರ ಸಭಾಂಗಣಕ್ಕೆ ಆಗಮಿಸಿ ಸಂಪೂರ್ಣ ಯೋಗ ಸತ್ಸಂಗವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರನ್ನು ಸಂಸ್ಥೆಯ ವತಿಯಿಂದ ಫಲಪುಷ್ಪ ಸಮರ್ಪಿಸಿ ಗೌರವಿಸಲಾಯಿತು. ನಂತರ ಶ್ರೀಗಳು ಆಶೀರ್ವಚನ ನೀಡುತ್ತಾ, ನಿತ್ಯ ನಿರಂತರ ಯೋಗ ಸತ್ಸಂಗದಿಂದ ಉತ್ತಮ ಅರೋಗ್ಯ, ಉಲ್ಲಾಸ ಭರಿತ ಜೀವನ ನೆಡೆಸಲು ಸಾಧ್ಯ, ಉತ್ತಮ ಸಮಾಜ ನಿರ್ಮಾಣಕ್ಕೂ ಯೋಗ ಸಹಕಾರಿಯಾಗಿದೆ ಎಂದರು. ಯೋಗ ಶಿಕ್ಷಕ ರಾಜೇಶ್ ಶೆಟ್ಟಿ ಅವರು ಯೋಗಾಸನದ ಭಂಗಿಗಳ ಮೂಲಕ ಅವುಗಳ ಪ್ರಯೋಜನವನ್ನು ವಿವರಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ರಾಮ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡವೂರು ವಾರ್ಡಿನ ನಗರಸಭಾ ಸದಸ್ಯ ವಿಜಯ ಕೊಡವೂರು, ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್, ಯೋಗ ಶಿಕ್ಷಕರಾದ ಪಿ. ವಿ. ಭಟ್, ಆನಂದ ಶೆಟ್ಟಿ ಕೊಡವೂರು, ಪುತ್ತೂರು ಯೋಗ ಕೇಂದ್ರದ ಶಿಕ್ಷಕಿ ಸುನೀತಾ ಹಾಗೂ ನೂರಾರು ಯೋಗಪಟುಗಳು ಉಪಸ್ಥರಿದ್ದರು. ಯೋಗ ಶಿಕ್ಷಕ ಸತೀಶ್ ಕುಂದರ್ ಸ್ವಾಗತಿಸಿದರು, ಸಿದ್ದರಾಜು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.